ನಿರ್ಗತಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಮೈಸೂರು ಜಿಲ್ಲಾಡಳಿತ
ಮೈಸೂರು, ಮಾರ್ಚ್ 27: ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ನಿರ್ಗತಿಕರು ಮತ್ತು ಭಿಕ್ಷುಕರನ್ನು ಜಿಲ್ಲಾಡಳಿತವು ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ.
ಕೆಲವು ಸಾಮಾಜಿಕ ಕಾರ್ಯಕರ್ತರ ದೂರಿನ ಮೇರೆಗೆ ಕಳೆದ ರಾತ್ರಿ ಕೆಎಸ್ಆರ್ಟಿಸಿ ಬಸ್ ಮೂಲಕ ನಗರದಲ್ಲಿರುವ ಸುಮಾರು 50 ಕ್ಕೂ ಅಧಿಕ ನಿರ್ಗತಿಕರು ಮತ್ತು ಭಿಕ್ಷುಕರನ್ನು ಜಿಲ್ಲಾಡಳಿತ ಮೈಸೂರಿನ ಗಂಗೋತ್ರಿ ಲೇಔಟ್ ನಲ್ಲಿರುವ ಯೂತ್ ಹಾಸ್ಟೆಲ್ ಕಟ್ಟಡಕ್ಕೆ ಕರೆದೊಯ್ದಿದೆ.
ಅಲ್ಲಿಯೇ ಅವರಿಗೆ ಊಟ, ಉಪಹಾರಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಲಾಕ್ ಡೌನ್ ಘೋಷಿಸಲಾಗಿದೆ.

ಇದರಿಂದ ನಿರ್ಗತಿಕರು ಮತ್ತು ಭಿಕ್ಷಕುರ ಸ್ಥಿತಿ ಕಷ್ಟಕರವಾಗಿದ್ದು, ಅದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ನಿರ್ಗತಿಕರು ಮತ್ತು ಭಿಕ್ಷುಕರನ್ನು ಯೂತ್ ಹಾಸ್ಟೆಲ್ ಗೆ ಕರೆದೊಯ್ದಿದೆ. ನಗರದ ಕೆಲವು ಸ್ವಯಂ ಸೇವಕ ಸಂಸ್ಥೆಗಳೂ ನಿರ್ಗತಿಕರಿಗೆ ಮತ್ತು ಬಡವರಿಗೆ ಆಹಾರ ವಿತರಣೆಯಲ್ಲಿ ತೊಡಗಿವೆ.












Click it and Unblock the Notifications