ಪ್ರವಾಹದ ಪರಿಣಾಮವಾಗಿ ದಸರಾ ಗಜಪಡೆಯ ಅವಧಿಗೂ ಕತ್ತರಿ
ಮೈಸೂರು, ಆಗಸ್ಟ್ 22 : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ)ಯಲ್ಲಿ ಪಾಲ್ಗೊಳ್ಳುವ ಆನೆಗಳನ್ನು ಬರಮಾಡಿಕೊಳ್ಳುವ 'ಗಜಪಯಣ' ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ದಸರಾ ಮಹೋತ್ಸವಕ್ಕೆ ಮುನ್ನುಡಿ ಎಂಬಂತೆ ದಸರಾ ಆರಂಭಕ್ಕೆ 55 ದಿನ ಮುನ್ನವೇ ವೀರನಹೊಸಹಳ್ಳಿ ಗಿರಿಜನ ಆಶ್ರಮ ಶಾಲೆ ಬಳಿಯಿಂದ 'ಗಜಪಯಣ' ಆರಂಭ ಆಗಬೇಕಿತ್ತು. ಆದರೆ ಕೊಡಗಿನಲ್ಲಿನ ಪಕೃತಿ ವಿಕೋಪ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಿನ್ನೆಲೆಯಲ್ಲಿ 'ಗಜಪಯಣ' ಮುಂದೂಡಲಾಗಿದೆ ಎಂದು ವನ್ಯಜೀವಿ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ದರಾಮಪ್ಪ ತಿಳಿಸಿದ್ದಾರೆ.
ಇದೇ ಆಗಸ್ಟ್ 23ಕ್ಕೆ ಗಜಪಯಣ ಸಮಾರಂಭ ನಡೆಯಬೇಕಿತ್ತು. ಪ್ರವಾಹ, ಭೂ ಕುಸಿತದಲ್ಲಿ ಕೊಡಗು ನಲುಗಿದ ಪರಿಣಾಮ ಮೈಸೂರು ಜಿಲ್ಲಾಡಳಿತ ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ಹೀಗಾಗಿ ಮುಂದೂಡಿಕೆ ಅನಿವಾರ್ಯವಾಯಿತು ಎಂದರು.

ಈ ಬಾರಿ ದಸರಾ ಆನೆಗಳಿಗೆ ತರಬೇತಿ ಅವಧಿ ಕಡಿಮೆಯಾಗಲಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯ ದಸರಾ ಉನ್ನತಾಧಿಕಾರ ಸಮಿತಿ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರೊಂದಿಗೆ ಚರ್ಚಿಸಿ, ಗಜಪಯಣ ಕಾರ್ಯಕ್ರಮಕ್ಕೆ ಶೀಘ್ರವೇ ದಿನಾಂಕ ನಿಗದಿಪಡಿಸಲಾಗುವುದು ಎಂದರು.
ಗಜಪಯಣ ಕಾರ್ಯಕ್ರಮಕ್ಕೆ ಅಗತ್ಯವಾದ ಸಿದ್ಧತೆಗಳನ್ನು ಈಗಾಗಲೇ ನಡೆಸಿದ್ದೇವೆ. ಆನೆಗಳ ಬರುವಿಕೆಗಾಗಿ ಕಾದಿದ್ದೇವೆ. ದಸರಾ ಹೊತ್ತಿಗೆ ಆನೆಗಳಿಗೆ ತರಬೇತಿ ನೀಡಲು 55 ದಿನಗಳ ಕಾಲಾವಕಾಶ ಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಯುತ್ತಿದೆ. ಈ ಬಾರಿಯೂ ದಸರಾ ಗಜಪಯಣವನ್ನು ಆಕರ್ಷಕವಾಗಿ ನಡೆಸಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಪ್ಪ ವಿವರಿಸಿದರು.












Click it and Unblock the Notifications