ದಿಢೀರ್ ಬೆಳವಣಿಗೆಯಲ್ಲಿ ಮೈಸೂರಿನ ಜಿ.ಪಂ. ಚುನಾವಣೆ ಮುಂದೂಡಿಕೆ
ಮೈಸೂರು, ಫೆಬ್ರವರಿ 1: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಇದೇ ಫೆಬ್ರವರಿ 6 ರಂದು ನಿಗದಿಯಾಗಿದ್ದ ಚುನಾವಣೆಯನ್ನು ರದ್ದುಪಡಿಸಿ ಚುನಾವಣಾ ದಿನಾಂಕವನ್ನು ಸಹ ಮುಂದೂಡಲಾಗಿದೆ.
ಚುನಾವಣಾಧಿಕಾರಿಗಳಾದ ಪ್ರಾದೇಶಿಕ ಆಯುಕ್ತರು ಫೆ.6ರ ಚುನಾವಣಾ ದಿನಾಂಕ ನಿಗದಿ ಮಾಡಿ ಅಧಿಕೃತ ಸೂಚನೆ ಹೊರಡಿಸಿದ್ದರು. ಚುನಾವಣಾ ದಿನಾಂಕ ಪ್ರಕಟವಾದ ಕೆಲವೇ ದಿನಗಳಲ್ಲಿ ಚುನಾವಣೆಯನ್ನು ಮುಂದೂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಅಧಿವೇಶನದ ಕಾರಣವೊಡ್ಡಿ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. ಅಲ್ಲದೇ, ಚುನಾವಣೆಯ ಮುಂದಿನ ದಿನಾಂಕವನ್ನೂ ನಿಗದಿಪಡಿಸಿಲ್ಲ.

ಪ್ರಾದೇಶಿಕ ಆಯುಕ್ತ ವಿ.ಯಶವಂತ್ ಅವರು ಅಬಕಾರಿ ಇಲಾಖೆ ಆಯುಕ್ತ ಕೂಡ. ಹೀಗಾಗಿ, ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿವೇಶನದಲ್ಲಿ ಭಾಗವಹಿಸಬೇಕಾಗುತ್ತದೆ. ಹೀಗಾಗಿ, ಚುನಾವಣೆ ಮುಂದೂಡಲಾಗಿದೆ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಮೂಲಗಳು ತಿಳಿಸಿವೆ.
ಚುನಾವಣಾಧಿಕಾರಿಗಳು ಒಮ್ಮೆ ಚುನಾವಣಾ ದಿನಾಂಕ ನಿಗದಿಪಡಿಸಿ ಸದಸ್ಯರಿಗೆ ಸಭಾ ಸೂಚನಾ ಪತ್ರ ರವಾನಿಸಿದ ಮೇಲೆ ತುರ್ತು ಅಥವಾ ಅನಿವಾರ್ಯ ಸಂದರ್ಭ ಹೊರತುಪಡಿಸಿ ಚುನಾವಣೆಯನ್ನು ಮುಂದೂಡುವಂತಿಲ್ಲ. ಆದರೆ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತರು ಹಠಾತ್ತನೇ ಮುಂದೂಡಿದ್ದಾರೆ. ಇದಕ್ಕೆ ರಾಜಕೀಯ ಒತ್ತಡ ಕಾರಣ ಇದೆ ಎನ್ನಲಾಗಿದೆ.
ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ನಯಿಮಾ ಸುಲ್ತಾನ್ ಉಪಾಧ್ಯಕ್ಷರಾಗಿದ್ದ ನಟರಾಜು ನೀಡಿದ ರಾಜೀನಾಮೆ ಅಂಗೀಕಾರವಾದ ಬಳಿಕ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು.
ನಿಯಮಾನುಸಾರ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸಚಿವ ಸಾ. ರಾ ಮಹೇಶ್ ಸಹೋದರ ಸಾರಾ ನಂದೀಶ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು.
ನಂತರ ವಿದ್ಯಾರ್ಥಿ ನಿಲಯಗಳಿಗೆ ಹಠಾತ್ ಭೇಟಿ - ಪರಿಶೀಲನೆ, ಆಸ್ಪತ್ರೆಗಳಿಗೆ ಭೇಟಿ, ಜಿಪಂ ಸಭೆ, ಪರಿಶೀಲನಾ ಸಭೆ, ಹಿಂದುಳಿದ ವರ್ಗಗಳ ಹಾಗೂ ಸಾಮಾಜಿಕ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಸಭೆ ಸೇರಿದಂತೆ ಇನ್ನಿತರ ಸಭೆಗಳನ್ನು ನಡೆಸಿದ್ದರು.












Click it and Unblock the Notifications