ನಮನ ಸಾವಿಗೆ ಕಾರಣವಾದ ಕ್ರೇಟಾ ಕಾರಿನ ಬೆನ್ನು ಹತ್ತಿದ ಮೈಸೂರು ಪೊಲೀಸರು
ಮೈಸೂರು, ಜುಲೈ 13 : ಚಾಮುಂಡಿಬೆಟ್ಟದ ಐ-ವಾಚ್ ಟವರ್ ಬಳಿ ಕಳೆದ ವಾರ ಬುಲೆಟ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರನ್ನು ಬಲಿ ಪಡೆದು ಪರಾರಿಯಾಗಿರುವ ಕಾರಿನ ಸುಳಿವು ಪೊಲೀಸರಿಗೆ ದೊರೆತಿದ್ದು, ಪರಾರಿಯಾಗಿರುವ ಕಾರಿನ ಪತ್ತೆಗೆ ಮೈಸೂರು ಪೊಲೀಸರು ಜಿಲ್ಲೆಯಾದ್ಯಂತ ಹುಡುಕತೊಡಗಿದ್ದಾರೆ.
ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಗುರುವಾರ (ಜು.5) ಸಂಜೆ ಮೈಸೂರು-ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಅರವಿಂದರಾವ್ (22) ಹಾಗೂ ಎಂ.ಸಿ.ನಮನ (21) ಬುಲೆಟ್ (ಕೆಎ-09, ಹೆಚ್ಎಲ್ -7829)ನಲ್ಲಿ ತೆರಳಿದ್ದರು.
ಬೆಟ್ಟದಿಂದ ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯೆ ವಾಚ್ ಟವರ್ ಬಳಿ ಎದುರಿನಿಂದ ವೇಗವಾಗಿ ಬಂದ ಕಾರೊಂದು ಮುಖಾಮುಖಿ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಇದರಿಂದ ಸವಾರ ಅರವಿಂದರಾವ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟರೆ, ಹಿಂಬದಿಯಲ್ಲಿ ಕುಳಿತಿದ್ದ ಗಂಭೀರವಾಗಿ ಗಾಯಗೊಂಡ ನಮನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೆದುಳು ನಿಷ್ಕ್ರಿಯಗೊಂಡು ಇಹಲೋಕ ತ್ಯಜಿಸಿದ್ದರು.

ಸಾವಿಗೂ ಮುನ್ನ ಹೃದಯ ಕವಾಟ, ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡುವ ಮೂಲಕ ನಮನ ಸಹೋದರ ನವೀನ್ ನೋವಿನಲ್ಲೂ ಮಾನವೀಯತೆ ಪ್ರದರ್ಶಿಸಿದ್ದರು. ಇಬ್ಬರೂ ಸಾವಿಗೀಡಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರ ರಾವ್ ಅವರು,
ಡಿಸಿಪಿ ಡಾ.ವಿಷ್ಣುವರ್ಧನ್ ಅವರ ಮಾರ್ಗದರ್ಶನದಲ್ಲಿ ಸಿದ್ದಾರ್ಥ ನಗರ ಸಂಚಾರ ಠಾಣೆಯ ಇನ್ಸ್ ಪೆಕ್ಟರ್ ಎನ್.ಮುನಿಯಪ್ಪ ಅವರ ನೇತೃತ್ವದಲ್ಲಿ ಪರಾರಿಯಾಗಿರುವ ಕಾರನ್ನು ಪತ್ತೆ ಮಾಡಲು 4 ತಂಡಗಳನ್ನು ರಚಿಸಿ ತನಿಖೆ ಚುರುಕು ಗೊಳಿಸುವಂತೆ ಆದೇಶಿಸಿದ್ದರು.
ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಸಿದ್ದಾರ್ಥ ನಗರ ಸಂಚಾರ ಠಾಣೆಯ ಪೊಲೀಸರು ದಿನವಿಡಿ ಕಾರು ಪತ್ತೆಗೆ ಶ್ರಮಿಸುತ್ತಿದ್ದಾರೆ.

ಸ್ಥಳದಲ್ಲಿ ದೊರೆತ ಸುಳಿವು
ಅಪಘಾತ ನಡೆದ ಸ್ಥಳದಲ್ಲಿ ಕಾರಿನ ಸೈಡ್ ಮಿರರ್ ಹಾಗೂ ಬಾನೆಟ್ ನ ಪೀಸೊಂದು ಹೊರತುಪಡಿಸಿದ್ದರೆ ಬೇರಾವ ಸುಳಿವು ಸಿಕ್ಕಿರಲಿಲ್ಲ. ಡಿಕ್ಕಿ ಹೊಡೆದ ಕಾರನ್ನು ಯಾರೂ ನೋಡಿರಲಿಲ್ಲ. ಇದರಿಂದ ಘಟನಾ ಸ್ಥಳದಲ್ಲಿ ಸಿಕ್ಕಿದ ಕನ್ನಡಿ ಮತ್ತು ಬಾನೆಟ್ ನ ಚೂರನ್ನು ವಶಕ್ಕೆ ಪಡೆದ ಪೊಲೀಸರು ವಿವಿಧ ಶೋ ರೂಂಗಳ ಸಿಬ್ಬಂದಿಗೆ ಅದನ್ನು ತೋರಿಸಿ ಅಭಿಪ್ರಾಯ ಕೇಳಿದಾಗ ಆ ಕಾರು ಹ್ಯುಂಡೈ ಕ್ರೇಟಾ ಕಾರಿನ ಕನ್ನಡಿಯದ್ದಾಗಿದೆ ಎಂಬ ಅಂಶ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಹ್ಯುಂಡೈ ಕ್ರೇಟಾ ಕಾರು ಖರೀದಿಸಿರುವವರ ವಿಳಾಸದ ಪಟ್ಟಿ ಕಲೆಹಾಕಿದ್ದಾರೆ. ಅಲ್ಲದೆ, ಅಪಘಾತ ನಡೆಸಿ ಪರಾರಿಯಾಗಿರುವ ಕಾರನ್ನು ಪತ್ತೆ ಮಾಡಲು ನಾಲ್ಕು ತಂಡಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಈ ಪೊಲೀಸರು ಕ್ರೇಟಾ ಕಾರು ಹೊಂದಿರುವವರ ಮನೆಯ ಬಾಗಿಲು ಬಡಿಯತೊಡಗಿದ್ದಾರೆ.
ಎಲ್ಲೆಲ್ಲಿ?
ಅಪಘಾತ ನಡೆದ ಸಮಯವನ್ನು ಅವಲೋಕಿಸಿದರೆ ಅಪಘಾತವೆಸಗಿದ ಕಾರು ಮೈಸೂರು ನಗರ ಅಥವಾ ಜಿಲ್ಲೆಯ ನಿವಾಸಿಗಳದ್ದೇ ಎಂದು ನಿರ್ಧಾರಕ್ಕೆ ಬಂದಿರುವ ಪೊಲೀಸರು ಮೊದಲ ಹಂತದಲ್ಲಿ ಈ ಭಾಗದಲ್ಲಿರುವ ಕ್ರೇಟಾ ಕಾರಿನ ಶೋಧ ಕಾರ್ಯ ಮುಂದುವರೆಸಿದ್ದಾರೆ.












Click it and Unblock the Notifications