ಮೈಸೂರು ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಭಾಗ್ಯ
ಮೈಸೂರು, ಏ. 25 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಮಾನ ನಿಲ್ದಾಣವನ್ನು ವಿಸ್ತರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲ ಸೌಕರ್ಯ ಖಾತೆ ಸಚಿವ ರೋಷನ್ ಬೇಗ್ ಹೇಳಿದ್ದಾರೆ. 84 ಎಕರೆ ಜಮೀನು ಪಡೆದು ನಿಲ್ದಾಣ ವಿಸ್ತರಣೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಗುರುವಾರ ಮಾತನಾಡಿದ ಸಚಿವ ರೋಷನ್ ಬೇಗ್, ವಿಮಾನ ನಿಲ್ದಾಣ ವಿಸ್ತರಣೆಗೆ ಜಮೀನಿನ ಕೊರತೆ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೈಸೂರು-ನಂಜನಗೂಡು ರಸ್ತೆಯನ್ನು ಮತ್ತಷ್ಟು ಭೂಮಿ ಪಡೆದು ವಿಸ್ತರಣೆ ಮಾಡಿದರೆ, ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಭೂಮಿ ದೊರಕುತ್ತದೆ. ಇದಕ್ಕಾಗಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು. [ಮೈಸೂರು-ಬೆಂಗಳೂರು ನಡುವೆ ಸ್ಪೈಸ್ ಜೆಟ್ ಹಾರಾಟ]

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಅಗತ್ಯವಾದ ಅನುದಾನ ನೀಡಲು ಸಿದ್ಧವಿದೆ. ಆದರೆ, ಮೈಸೂರು-ನಂಜನಗೂಡು ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂದು ಸೂಚನೆ ನೀಡಿದೆ ಎಂದು ರೋಷನ್ ಬೇಗ್ ತಿಳಿಸಿದರು. ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದರಿಂದ ಅವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. [ಮಂಡಕಳ್ಳಿ ವಿಮಾನ ನಿಲ್ದಾಣದ ಬಗ್ಗೆ ಓದಿ]
ಮೈಸೂರು ವಿಮಾನ ನಿಲ್ದಾಣ ಆರ್ಥಿಕ ದೃಷ್ಟಿಯಿಂದ ಸದ್ಯ ಲಾಭದಾಯಕವಾಗಿಲ್ಲ. ಆದರೆ, ಮೈಸೂರು ನಗರದ ಭವಿಷ್ಯದ ಬೆಳವಣಿಗೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಿಲ್ದಾಣ ವಿಸ್ತರಣೆ ಕಾರ್ಯ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೈಸೂರಿನ ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ 2010ರಲ್ಲಿ ಪ್ರಾರಂಭವಾಗಿತ್ತು. ಮೊದಲು ಕಿಂಗ್ ಫಿಷರ್ ಮೈಸೂರು-ಬೆಂಗಳೂರು ವಿಮಾನ ಹಾರಾಟ ಪ್ರಾರಂಭಿಸಿತ್ತು. ಆದರೆ, ನಂತರ ಕಿಂಗ್ ಫಿಷರ್ ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಗಿತ್ತು. ಸದ್ಯ ಸ್ಪೈಸ್ ಜೆಟ್ ಕಂಪನಿಯ ಒಂದು ವಿಮಾನ ಹಾರಾಟ ನಡೆಸುತ್ತಿದೆ.
ಮೈಸೂರು ವಿಮಾನ ನಿಲ್ದಾಣದ ಹಾಲಿ ರನ್ ವೇ 1.7ಕಿ.ಮೀ. ಉದ್ದವಿದ್ದು, ಇದು 50-60 ಆಸನಗಳ ಸಾಮರ್ಥ್ಯದ ಎಟಿಆರ್ 72 ವಿಮಾನ ಹಾರಾಟಕ್ಕೆ ಮಾತ್ರ ಸೂಕ್ತವಾಗಿದೆ. ಆದರೆ, ಸುರಕ್ಷತೆ ಬಗ್ಗೆ ಅಪಸ್ವರ ಇದ್ದೇ ಇದೆ. ಎರಡನೇ ಹಂತದಲ್ಲಿ ಈ ರನ್ವೇಯನ್ನು 2.4ಕಿ.ಮೀ.ವಿಸ್ತರಿಸಲು ನಿರ್ಧರಿಸಬೇಕು ಎಂಬ ಆಲೋಚನೆ ಸರ್ಕಾರದ ಮುಂದಿದೆ.
ಆದರೆ, ಈ ಯೋಜನೆಗೆ 333 ಎಕರೆ ಭೂಮಿ ಅಗತ್ಯವಿದೆ. ವಿಮಾನ ನಿಲ್ದಾಣದ ಪಶ್ಚಿಮ ಭಾಗದಲ್ಲಿ ರೈಲ್ವೆ ಮಾರ್ಗ ವಿರುವುದರಿಂದ ವಿಸ್ತರಣೆ ಸಾಧ್ಯವಿಲ್ಲ. ಆದ್ದರಿಂದ ಪೂರ್ವ ದಿಕ್ಕಿನಲ್ಲಿ ಅಭಿವೃದ್ಧಿಗೆ ಅವಕಾಶವಿದ್ದು ಅಲ್ಲಿ ಮೈಸೂರು-ನಂಜನಗೂಡು ರಸ್ತೆ ಇದೆ. ಆ ಭಾಗದಲ್ಲೇ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.












Click it and Unblock the Notifications