ವಿಶ್ವನಾಥ್ ಮುಂದಿನ ನಡೆಯೇನು? ಜು.2 ರಂದು ಸಿಗಲಿದೆ ಉತ್ತರ
ಮೈಸೂರು, ಜೂನ್ 27 : ದೊಡ್ಡವರಿಗೆ ಗೌರವ ಕೊಡದ ವ್ಯಕ್ತಿಯನ್ನು ನಮ್ಮ ಸಿಎಂ ಎಂದು ಆಯ್ಕೆ ಮಾಡಿರುವುದು ನಮ್ಮ ಬಹು ದೊಡ್ಡ ಅಪರಾಧವೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ವಿಶ್ವನಾಥ್ ವಾಗ್ದಾಳಿ ನಡೆಸಿದರು. ಇದೇ ಜುಲೈ 2 ರಂದು ತಮ್ಮ ಮುಂದಿನ ನಡೆಯ ಬಗ್ಗೆ ಪ್ರಕಟಿಸಲಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದದೊಂದಿಗೆ ಮಾತನಾಡಿದ ಅವರು, ನಾನು ಪಕ್ಕಾ ಕಾಂಗ್ರೆಸ್ಸಿಗ. ನನ್ನ ತಾಯಿಯಂಥ ಪಕ್ಷವನ್ನು ಬಿಡಿಸಿರುವ ನಿಮಗೆ ಒಳ್ಳೆಯದಾಗುತ್ತಾ? 40 ವರ್ಷದ ಪಕ್ಷವನ್ನು ನೋವಿನಿಂದ ಬಿಟ್ಟಿದ್ದೇನೆ. ಇದಕ್ಕೆ ಕಾರಣ ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯ ಮನುಷ್ಯರಾಗಿ ಬದುಕುತ್ತಿಲ್ಲ ಎಂದು ಗುಡುಗಿದರು.

ಏಕವಚನದಲ್ಲಿ ಸಂಬೋಧಿಸುವ ಕುರಿತು ಪ್ರತಿಕ್ರಿಯಿಸಿದ ಅವರು, 'ಸಿದ್ದರಾಮಯ್ಯಗೆ ಮಾನವೀಯ ಸಂಸ್ಕಾರಗಳಿಲ್ಲ. ನಾವು ಹಳ್ಳಿಯಿಂದ ಬಂದಿದ್ದೇವೆ. ಅದಕ್ಕೆ ಏನ್ಲಾ ಸಿದ್ದರಾಮಯ್ಯ ಅಂತಾ ಕರಿತೀವಾ?' ಎಂದು ಪ್ರಶ್ನಿಸಿದರು.
ಸ್ವಚ್ಛ ಆಡಳಿತಕೊಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಹೇಳಿತ್ತು. ಅದರೆ ಸಿಎಂ ಸಿದ್ದರಾಮಯ್ಯ ಅದನ್ನು ಕೊಡಲು ವಿಫಲರಾಗಿದ್ದಾರೆ. ನೀವು ಲೋಕಾಯುಕ್ತವನ್ನು ಕಿತ್ತು ಹಾಕಿದಿರಿ. ಕೆಪಿಎಸ್ ಸಿಗೆ ಶ್ಯಾಂಭಟ್ ನ್ನು ನೇಮಕ ಮಾಡಿದಿರಿ. ಸುಮ್ಮನೆ ಅಕ್ಕಿ ಕೊಟ್ಟೆ ಕೊಟ್ಟೆ ಅಂತಾ ಹೇಳುತ್ತೀರಿ. ಆದರೆ ಜನರ ಹಣವನ್ನು ಲೂಟಿ ಮಾಡುತ್ತಿದ್ದೀರಿ. ಈ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಸಿದ್ದರಾಮಯ್ಯಗೆ ಆಹ್ವಾನ ನೀಡಿದರು.
ಮಾಜಿ ಸಂಸದ ಎಚ್. ವಿಶ್ವನಾಥ್ ಮತ್ತೊಂದು ಪುಸ್ತಕ ಹೊರತರಲು ನಿರ್ಧಾರಸಿದ್ದು ಈ ಬಗ್ಗೆ ಮೈಸೂರಿನಲ್ಲಿ ಘೋಷಣೆ ಮಾಡಿದ್ದಾರೆ. ಕಳೆದ ಮೂರು ತಿಂಗಳಿನಿಂದ ನಡೆದ ಬೆಳವಣಿಗೆ ಬಗ್ಗೆ ಅಕ್ಷರ ರೂಪ ಕೊಡಲು ಎಚ್. ವಿಶ್ವನಾಥ್ ಮುಂದಾಗಿದ್ದು, ಅದರಲ್ಲಿ ಎಲ್ಲವನ್ನೂ ದಾಖಲಿಸುತ್ತೇನೆ. ಇದೇ ಜುಲೈ 5ರಂದು ನನ್ನ ಮುಂದಿನ ನಡೆಯ ಬಗ್ಗೆ ಪ್ರಕಟಿಸಲಿದ್ದೇನೆ ಎಂದಿದ್ದಾರೆ.












Click it and Unblock the Notifications