ರಂಗಾಯಣದಲ್ಲಿ ಬಹುರೂಪಿ ರಂಗಹಬ್ಬಕ್ಕೆ ಕ್ಷಣಗಣನೆ...
ಮೈಸೂರು, ಫೆಬ್ರವರಿ 13: ಸಾಂಸ್ಕೃತಿಕ ನಗರಿ ಮೈಸೂರಿನ ರಂಗಾಸಕ್ತರಿಗೆ ಭರಪೂರ ಮನರಂಜನೆ ನೀಡುವ ಪ್ರತಿಷ್ಠಿತ ರೆಪರ್ಟರಿ ರಂಗಾಯಣದ ಆಕರ್ಷಣೀಯ ಕಾರ್ಯಕ್ರಮ "ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ'-2020 ಕ್ಕೆ ಫೆಬ್ರವರಿ 14 ರಂದು ಚಾಲನೆ ದೊರೆಯಲಿದೆ.
ಬಹುಭಾಷಾ ನಾಟಕಗಳು, ಛಾಯಾಚಿತ್ರ ಪ್ರದರ್ಶನ, ಚಲನಚಿತ್ರೋತ್ಸವ, ಬೀದಿ ನಾಟಕ ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಅನಾವರಣಕ್ಕೆ ವೇದಿಕೆಯಾಗುವ ಬಹುರೂಪಿ ನಾಟಕೋತ್ಸವದ ಹಿನ್ನೆಲೆಯಲ್ಲಿ ರಂಗಾಯಣದ ಅಂಗಳದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ. ಒಂದು ವಾರ ಕಾಲ ನಡೆಯುವ ರಂಗಹಬ್ಬಕ್ಕಾಗಿ ಇಡೀ ರಂಗಾಯಣದ ಆವರಣದ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಬಹುರೂಪಿ ಬೆನ್ನಲ್ಲೇ ರಂಗಾಯಣದ ಹಾಲಿ-ಮಾಜಿ ನಿರ್ದೇಶಕರ ತಿಕ್ಕಾಟ
ಮಹಾತ್ಮ ಗಾಂಧೀಜಿ ಅವರ 150 ನೇ ವರ್ಷಾಚರಣೆ ಅಂಗವಾಗಿ ಈ ಸಾಲಿನ ನಾಟಕೋತ್ಸವ "ಗಾಂಧಿ ಪಥ' ಆಶಯದೊಂದಿಗೆ ಆಯೋಜಿಸಲಾಗಿದೆ. "ಗಾಂಧಿ ಪಥ' ಆಶಯಕ್ಕೆ ಪೂರಕವಾಗಿ ಇಡೀ ಉತ್ಸವವನ್ನು ರೂಪಿಸಲಾಗುತ್ತಿದ್ದು, ಇಡೀ ನಾಟಕೋತ್ಸವದಲ್ಲಿ ಗಾಂಧಿ ಜೀವನ ಪಥ, ಕವಿ ಕಂಡ ಗಾಂಧಿ, ಗಾಂಧಿ ಲಾವಣಿ ಹೀಗೆ ರಾಷ್ಟ್ರಪಿತನ ಕುರಿತ ಹತ್ತಾರು ಕಾರ್ಯಕ್ರಮಗಳನ್ನು ನಾಟಕೋತ್ಸವದಲ್ಲಿ ಹಮ್ಮಿಕೊಳ್ಳಲಾಗಿದೆ.
ನಟ ಅನಂತನಾಗ್ ಅವರಿಂದ ಚಾಲನೆ
ರಂಗಾಯಣದಲ್ಲಿ ನಡೆಯುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಫೆಬ್ರವರಿ 14 ರಂದು ವಿದ್ಯುಕ್ತ ಚಾಲನೆ ಸಿಗಲಿದೆ. ರಂಗಾಯಣದ ವನರಂಗದಲ್ಲಿ ಸಂಜೆ 6 ಕ್ಕೆ ನಡೆಯುವ ಸಮಾರಂಭದಲ್ಲಿ ಹಿರಿಯ ನಟ ಅನಂತ್ ನಾಗ್ ಬಹುರೂಪಿ ರಂಗಹಬ್ಬಕ್ಕೆ ಚಾಲನೆ ನೀಡಲಿದ್ದಾರೆ.
ಅಲ್ಲಿಂದ ಆರು ದಿನಗಳವರೆಗೆ ರಂಗಾಯಣದಲ್ಲಿ ನಾಟಕಗಳು, ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕಿರಣ, ಜನಪದೋತ್ಸವ ನಡೆಯಲಿದ್ದು, ಕಲಾರಸಿಕರ ಮನತಣಿಸಲಿದ್ದು, ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 400 ಕ್ಕೂ ಹೆಚ್ಚಿನ ರಂಗಕಲಾವಿದರು, 250 ಕ್ಕೂ ಹೆಚ್ಚಿನ ಜನಪದ ಕಲಾವಿದರು ಭಾಗವಹಿಸುವ ನಿರೀಕ್ಷೆ ಇದೆ.
ರಂಗಾಯಣ ಆವರಣದಲ್ಲಿ ಸಾಬರಮತಿ ಆಶ್ರಮ
ಈ ಬಾರಿಯೂ ಬಹುರೂಪಿಯಲ್ಲಿ ಕನ್ನಡದ 10 ಹಾಗೂ ಭಾರತದ ವಿವಿಧ ಭಾಷೆಯ 11, ಯಕ್ಷಗಾನ ಪ್ರಸಂಗಳು 2, ಬಯಲಾಟ, ತೊಗಲು ಗೊಂಬೆಯಾಟ ಸೇರಿದಂತೆ ಒಟ್ಟು 25 ನಾಟಕಗಳು ಪ್ರದರ್ಶನಗೊಳ್ಳಲಿವೆ. ಆಧುನಿಕ ರಂಗಭೂಮಿ ಅಡಿಯಲ್ಲಿ ನಾಡಿನಲ್ಲಿ ಅಲ್ಲದೇ ಹೊರನಾಡಿನಲ್ಲೂ ತನ್ನ ಛಾಪನ್ನು ಮೂಡಿಸಿರುವ ರಂಗಾಯಣದ ಬಹುಮುಖ್ಯ ಉತ್ಸವ "ಬಹುರೂಪಿ'. ನಮ್ಮ ಸಂಸ್ಕೃತಿ ಮತ್ತು ಕಲೆಗಳನ್ನು ಮುಖಾಮುಖಿಯಾಗಿಸುವ, ಬಹುಕಲಾ ರೂಪಗಳ ಪ್ರದರ್ಶನಗೊಳಿಸುವುದೇ "ರಾಷ್ಟ್ರೀಯ ನಾಟಕೋತ್ಸವ ಬಹುರೂಪಿ-2020' ಉದ್ದೇಶ.
ಗಾಂಧಿ ಪಥ ಆಶಯದೊಂದಿಗೆ ಅನಾವರಣಗೊಳ್ಳುತ್ತಿರುವ ಬಹುರೂಪಿ ನಾಟಕೋತ್ಸವದ ಹಿನ್ನೆಲೆಯಲ್ಲಿ ಇಡೀ ರಂಗಾಯಣ ಆವರಣದಲ್ಲಿ ಸಾಬರಮತಿ ಆಶ್ರಮದ ವಾತಾವರಣ ನಿರ್ಮಾಣವಾಗಿದೆ.
ಛಾಯಾಚಿತ್ರ ಗ್ಯಾಲರಿ ಅನಾವರಣ
ಬಹುರೂಪಿ ಕುರಿತು ಕಲಾವಿದರು ಬಿಡಿಸಿರುವ ಪೋಸ್ಟರ್ ಗಳನ್ನು ಭಿತ್ತಿಚಿತ್ರಗಳನ್ನು ರಂಗಾಯಣದ ಅಂಗಳದಲ್ಲಿ ಹಾಕಲಾಗಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನದ ಮಾರಾಟ ಮಳಿಗೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ರಂಗಾಯಣ ಅಂಗಳದ ತುಂಬ "ರಂಗ ಸಂಭ್ರಮ' ಮನೆ ಮಾಡಿದೆ. ವಿಶೇಷವಾಗಿ ಗಾಂಧೀಜಿ ಹುಟ್ಟಿನಿಂದ ಸಾವಿನ ಯಾತ್ರೆವರೆಗಿನ ಸಂಗತಿಗಳನ್ನು ಹೇಳುವ ಚಿತ್ರ ಮತ್ತು ಮಾಹಿತಿಯ ಛಾಯಾಚಿತ್ರಗಳ ಪ್ರದರ್ಶನಕ್ಕೆ ಸುಚಿತ್ರ ಗ್ಯಾಲರಿಯಲ್ಲಿ ಅನಾವರಣಗೊಂಡಿದೆ. ಇದರೊಂದಿಗೆ ಗಾಂಧಿ ಅವರ ಸಂದೇಶಗಳನ್ನು ಹಾಕಿ ಪ್ರದರ್ಶನ ಮಾಡಲಾಗುತ್ತಿದೆ.
ದೇಸಿ ಆಹಾರ ಪದ್ಧತಿ ಮಳಿಗೆಗಳು
ಬಹುರೂಪಿ ನಾಟಕೋತ್ಸವ ರಂಗಾಸಕ್ತರ ಜೊತೆಗೆ ಪುಸ್ತಕ ಪ್ರಿಯರು, ಖಾದ್ಯ ಪ್ರಿಯರನ್ನು ತನ್ನತ್ತ ಸೆಳೆಯುತ್ತದೆ. ಬಹುರೂಪಿ ಅಂಗವಾಗಿ ನಡೆಯುವ ವಿವಿಧ ವಸ್ತುಪ್ರದರ್ಶನ, ಕರಕುಶಲ, ಆಹಾರ, ತಿನಿಸು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ 36 ಮಳಿಗೆ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ನೀಡಲಾಗುತ್ತದೆ. 14 ಮಳಿಗೆಗಳು ಪುಸ್ತಕ ಮಾರಾಟಕ್ಕಾಗಿ ಹಾಗೂ ಇನ್ನುಳಿದ ಮಳಿಗೆಗಳಲ್ಲಿ ದೇಸಿ ಆಹಾರ ಪದ್ಧತಿಗಳ ಅನಾವರಣಗೊಳಿಸುವ ಆಹಾರ ಮಳಿಗೆಗಳನ್ನು ತೆರೆಯಲಾಗುತ್ತಿದೆ.