ವಿಶ್ವನಾಥ್ ಗೆ ವಿಧಾನ ಪರಿಷತ್ ಸ್ಥಾನ ನೀಡಲು ಶ್ರೀನಿವಾಸ ಪ್ರಸಾದ್ ಮನವಿ
ಮೈಸೂರು, ಮೇ 28: "ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ತಿನಲ್ಲಿ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರ ಬರಲು ವಿಶ್ವನಾಥ್ ಅವರ ಪಾತ್ರ ಇದೆ. ಈ ವಿಚಾರ ಹೈಕಮಾಂಡ್ ಗಮನದಲ್ಲೂ ಇದೆ" ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಗೆ ವಿಧಾನ ಪರಿಷತ್ ಸದಸ್ಯತ್ವ ನೀಡಲು ಶ್ರೀನಿವಾಸ ಪ್ರಸಾದ್ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇಂದು ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ವಿಶ್ವನಾಥ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ಭೇಟಿ ನೀಡಿದ್ದು, ಮೈಸೂರಿನ ಜಯಲಕ್ಮೀಪುರಂ ನಿವಾಸದಲ್ಲಿ ಮೂವರು ನಾಯಕರು ರಹಸ್ಯ ಮಾತುಕತೆ ನಡೆಸಿರುವುದಾಗಿ ತಿಳಿದುಬಂದಿದೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮುಖಾಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ, ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ತಿನಲ್ಲಿ ಸ್ಥಾನ ನೀಡುವ ಕುರಿತು ಸಂದೇಶ ರವಾನಿಸಿರುವುದಾಗಿಯೂ ತಿಳಿದುಬಂದಿದೆ.

"ರಮೇಶ್ ಜಾರಕಿಹೊಳಿ ಅವರು ಇಂದು ನನ್ನ ಭೇಟಿಗೆ ಬಂದಿದ್ದರು. ವಿಶ್ವನಾಥ್ ಗೆ ಪರಿಷತ್ ಸದಸ್ಯತ್ವ ನೀಡುವುದು ಸುಲಭವಲ್ಲ. ನಾನು ಈ ವಿಚಾರವಾಗಿ ಸಿಎಂಗೆ ಮನವಿ ಮಾಡಿದ್ದೇನೆ. ಎಲ್ಲ ಶಾಸಕರು ಒಟ್ಟಾಗಿ ವಿಶ್ವನಾಥ್ ಪರ ಇದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ಬರಲು ವಿಶ್ವನಾಥ್ ಅವರ ಪಾತ್ರ ಇದೆ. ರಮೇಶ್ ಜಾರಕಿಹೊಳಿ ಕೂಡ ನಮ್ಮ ಪರ ಇದ್ದಾರೆ. ಈ ಸಂಪುಟದಲ್ಲಿ ಇಂತಹ ರಾಜಕಾರಣಿಯ ಅವಶ್ಯಕತೆ ಇದೆ. ವಿಶ್ವನಾಥ್ ಗೆ ಪರಿಷತ್ ಸ್ಥಾನ ನೀಡುವ ಬೇಡಿಕೆ ನಮ್ಮದು" ಎಂದು ಹೇಳಿದ್ದಾರೆ.












Click it and Unblock the Notifications