ಮೈಸೂರಲ್ಲಿ ಐಐಟಿ ಸ್ಥಾಪಿಸಿ, ಪ್ರಧಾನಿಗೆ ಪ್ರತಾಪ್ ಸಿಂಹ ಪತ್ರ
ಮೈಸೂರು, ಮೇ 14 : ಕರ್ನಾಟಕದಲ್ಲಿ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ.
ಐಐಟಿ ಸ್ಥಾಪನೆಗೆ ಮೈಸೂರು ಉತ್ತಮವಾದ ಸ್ಥಳ ಎಂದು ಸಂಸದ ಪ್ರತಾಪ್ ಸಿಂಹ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಐಐಟಿ ಸ್ಥಾಪಿಸಲು ಸೂಚಿಸಿರುವ ಸ್ಥಳಗಳಲ್ಲಿಯೂ ಮೈಸೂರಿನ ಹೆಸರಿದೆ. [ರಾಯಚೂರಲ್ಲಿ ಐಐಟಿ ಸ್ಥಾಪಿಸಲು ಸಂಸದರ ಮನವಿ]

ಪತ್ರದಲ್ಲೇನಿದೆ ? : ಪ್ರವಾಸೋದ್ಯಮ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಪ್ರಸಿದ್ಧಿಗಳಿಸಿರುವ ಮೈಸೂರಿನಲ್ಲಿ ಐಐಟಿ ಸ್ಥಾಪನೆ ಮಾಡಬಹುದಾಗಿದೆ. ಐಐಟಿ ಸ್ಥಾಪನೆಗೆ ಅಗತ್ಯವಾದ ಮೂಲ ಸೌಕರ್ಯಗಳು ಜಿಲ್ಲೆಯಲ್ಲಿವೆ ಎಂದು ಪತ್ರದಲ್ಲಿ ಸಂಸದರು ತಿಳಿಸಿದ್ದಾರೆ. [ಕರ್ನಾಟಕದಲ್ಲಿ ಐಐಟಿ, ಮೂರು ಜಿಲ್ಲೆಗಳ ಆಯ್ಕೆ]
ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ಮೈಸೂರನ್ನು ಸುಲಭವಾಗಿ ತಲುಪಬಹುದಾಗಿದೆ. ಮಂಗಳೂರು ಮತ್ತು ರಾಜಧಾನಿ ಬೆಂಗಳೂರಿಗೂ ಹತ್ತಿರವಾಗಿರುವುದರಿಂದ ಮೈಸೂರು ಐಟಿ ಸ್ಥಾಪನೆಗೆ ಉತ್ತಮ ಸ್ಥಳ ಎಂದು ಪತ್ರದಲ್ಲಿ ಪ್ರತಾಪ್ ಸಿಂಹ ವಿವರಣೆ ನೀಡಿದ್ದಾರೆ. [ಅಸಲಿಗೆ, ಕರ್ನಾಟಕಕ್ಕೆ ಐಐಟಿ ಅಗತ್ಯವಿದೆಯಾ?]
ಮೈಸೂರಿನ ಹೆಸರಿದೆ : ಕರ್ನಾಟಕ ಸರ್ಕಾರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪನೆಗೆ ರಾಯಚೂರು, ಧಾರವಾಡ, ಮೈಸೂರು ಜಿಲ್ಲೆಗಳು ಸೂಕ್ತ ಎಂದು ಕೇಂದ್ರ ಸರ್ಕಾರಕ್ಕೆ ಕೆಲವು ದಿನಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದೆ. ಮೂರು ಜಿಲ್ಲೆಗಳ ಪೈಕಿ ಒಂದನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದೆ.
ರಾಯಚೂರಿಗಾಗಿ ಮನವಿ : ಐಐಟಿಯನ್ನು ರಾಯಚೂರಿನಲ್ಲಿ ಸ್ಥಾಪನೆ ಮಾಡಬೇಕು ಎಂದು ರಾಜ್ಯ ಸಂಸದರ ನಿಯೋಗ ಸಚಿವೆ ಸ್ಮೃತಿ ಇರಾನಿ ಅವರಿಗೆ ಕಳೆದ ವಾರ ಮನವಿ ಸಲ್ಲಿಸಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ನೇತೃತ್ವದ ನಿಯೋಗ ಈ ಮನವಿ ಸಲ್ಲಿಕೆ ಮಾಡಿತ್ತು.












Click it and Unblock the Notifications