ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ನಿರ್ನಾಮ; ಪ್ರತಾಪ ಸಿಂಹ
ಮೈಸೂರು, ಮೇ 28: ಯಲಹಂಕ ಫ್ಲೈಓವರ್ ಗೆ ಸಾವರ್ಕರ್ ಹೆಸರಿಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಪಕ್ಷದವರನ್ನು ಸಂಸದ ಪ್ರತಾಪ ಸಿಂಹ ಇಂದು ತೀವ್ರ ತರಾಟೆಗೆ ತೆಗೆದುಕೊಂಡರು. ಜನ ಈಗಾಗಲೇ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಇನ್ನಾದರೂ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದಿದ್ದರೆ ನಿರ್ನಾಮ ಆಗುವುದಂತೂ ಖಚಿತ ಎಂದು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
Recommended Video
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಾವರ್ಕರ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಇದು ಸ್ವಾತಂತ್ರ್ಯ ಹೋರಾಟ, ಸಿಪಾಯಿ ಧಂಗೆಯಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿದ ವ್ಯಕ್ತಿ ಅವರು. ಆ ವ್ಯಕ್ತಿ ಹೆಸರನ್ನು ಫ್ಲೈ ಓವರ್ಗೆ ಇಡಲು ಸಿಎಂ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸದೇ ತಕರಾರು ತೆಗೆಯುವವರಿಗೆ ನಾಚಿಕೆಯಾಗಬೇಕು" ಎಂದು ಹರಿಹಾಯ್ದರು.

"ರಾಜೀವ್ ಗಾಂಧಿ ಹೆಸರು ಏಕೆ ಇಟ್ಟಿದ್ದಾರೆ?"
ಬಂಡೀಪುರ ನಾಗರಹೊಳೆ ಅರಣ್ಯಕ್ಕೂ ರಾಜೀವ್ ಗಾಂಧಿ ಹೆಸರು ಏಕೆ ಇಟ್ಟಿದ್ದಾರೆ? ಕನ್ನಡಿಗರ ಹೆಸರನ್ನೇ ಇಡಬೇಕಿತ್ತಲ್ಲವೇ. ಜನರು ಬುದ್ಧಿವಂತರಾಗಿದ್ದಾರೆ. ನೀವು ದಡ್ಡತನದಿಂದ ಹೊರಬನ್ನಿ. ಜನರು ದಡ್ಡರಲ್ಲ. ಅವರಲ್ಲಿ ತಿಳಿವಳಿಕೆ, ಬುದ್ಧಿವಂತಿಕೆಯಿದೆ. ರಚನಾತ್ಮಕ ರಾಜಕಾರಣ ಮಾಡಿ, ಕ್ಷುಲ್ಲಕ ವಿಚಾರಕ್ಕೆ ರಾಜಕೀಯ ಮಾಡಿದರೆ ಜನರು ಬುದ್ಧಿ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಅಂಡಮಾನ್ ಜೈಲಿಗೆ ಹೋಗಿ ಬನ್ನಿ"
ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಪಡಿಸುವವರು ಅಂಡಮಾನ್ ಜೈಲಿಗೆ ಹೋಗಿ ಸಾವರ್ಕರ್ ಇದ್ದ ಜಾಗವನ್ನು ಒಮ್ಮೆ ನೋಡಿಕೊಂಡು ಬರಲಿ. ಅವರ ಸಾಧನೆ, ತ್ಯಾಗ ಏನೆಂದು ತಿಳಿಯುತ್ತದೆ. ಆಗ ಅವರ ಬಗ್ಗೆ ವಿರೋಧ ವ್ಯಕ್ತಪಡಿಸುವುದನ್ನು ನಿಲ್ಲಿಸುತ್ತಾರೆ ಎಂದರು.

"ಕಾಂಗ್ರೆಸ್ ಅನ್ನು ಜನ ನಿರ್ನಾಮ ಮಾಡುವುದು ಖಚಿತ"
ಹಾದಿಬೀದಿ, ಈಜುಕೊಳ, ಏರ್ಪೋರ್ಟ್, ಕಾಲೇಜು, ಹಾಸ್ಟೆಲ್ ಗಳು, ಪಾರ್ಕ್ಗಳು ಯಾವುದನ್ನೂ ಬಿಡದೇ ಎಲ್ಲದಕ್ಕೂ ಇಂದಿರಾಗಾಂಧಿ, ರಾಜೀವ್ಗಾಂಧಿ, ನೆಹರು ಹೆಸರಿಟ್ಟಿದ್ದಾರೆ. ಇವರ ಹೆಸರು ಮಾತ್ರ ಇರಬೇಕಾ? ಸ್ವಾತಂತ್ರ್ಯ ಹೋರಾಟಗಾರರ ಹೆಸರು ಇಡುವುದು ಬೇಡವಾ? ಕಾಂಗ್ರೆಸ್ನವರು ತಮ್ಮ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳದಿದ್ದರೆ, ಈಗಾಗಲೇ ಮೂಲೆಗುಂಪಾಗಿರುವ ಕಾಂಗ್ರೆಸ್ ಅನ್ನು ಜನ ನಿರ್ನಾಮ ಮಾಡುವುದು ಖಚಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಇಂದಿರಾ ಕ್ಯಾಂಟೀನ್ ಎಂದು ಏಕೆ ಇಟ್ಟರು"
ಕನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಎನ್ನುವುದಾದರೆ, ಇವರು ಇಂದಿರಾ ಕ್ಯಾಂಟೀನ್ ಎಂದು ಏಕೆ ಹೆಸರಿಡಬೇಕಾಯಿತು? ಬದಲಿಗೆ ಕನಕ ಕ್ಯಾಂಟೀನ್ ಅಂಥ ಯಾಕೆ ಇಡಲಿಲ್ಲ? ನಾಗರಹೊಳೆ, ಬಂಡೀಪುರ ಉದ್ಯಾನವನಕ್ಕೆ ಗಾಂಧಿ, ನೆಹರು ಫ್ಯಾಮಿಲಿ ಹೆಸರಿಡುವಾಗ ಕನ್ನಡದವರ ನೆನಪಾಗಲಿಲ್ವ? ಈಗ ಮಾತ್ರ ಅವರಿಗೆ ಕನ್ನಡದವರ ನೆನಪು ಬಂತಾ? ಸಿದ್ದರಾಮಯ್ಯ ಅವರು ಏನು ಮಾತನಾಡುತ್ತಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.












Click it and Unblock the Notifications