ಶಾಸಕ ಜಮೀರ್ ಅವರನ್ನು ಏಕೆ ಬಂಧಿಸಿಲ್ಲ?: ಸಂಸದ ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್ 10: ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮ್ಮದ್ ಅವರನ್ನು ಏಕೆ ಬಂಧಿಸಿಲ್ಲ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಅವರು ಹೇಳಿರುವ ಹೆಸರುಗಳ ಪಟ್ಟಿಯಲ್ಲಿ ಜಮೀರ್ ಅಹಮ್ಮದ್ ಹೆಸರು ಸಹ ಇದೆ. ಆದರೆ ಇದುವರಿಗೂ ಜಮೀರ್ ಅಹಮ್ಮದ್ ಅವರನ್ನು ಬಂಧಿಸದಿರುವ ಹಿಂದಿನ ಉದ್ದೇಶವೇನು? ಎಂದು ಕೇಳಿದ್ದಾರೆ.
ರಾಜಕಾರಣಿಗಳಿಂದಲೇ ಡ್ರಗ್ಸ್ ದಂಧೆ: ಪ್ರಮೋದ್ ಮುತಾಲಿಕ್ ಗಂಭೀರ ಆರೋಪ
ತನಿಖಾಧಿಕಾರಿಗಳಿಗೆ ಅಗತ್ಯ ಎನಿಸಿದರೆ ಪ್ರಶಾಂತ್ ಸಂಬರಗಿ ಅವರನ್ನೂ ವಿಚಾರಣೆಗೆ ಒಳಪಡಿಸಲಿ. ಅವರ ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಸಂಗ್ರಹಿಸಿಕೊಂಡು ತನಿಖೆ ಮುಂದುವರಿಸಿ ಎಂದರು.
ಡ್ರಗ್ಸ್ ವಿಚಾರದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಇಂತಹ ಪ್ರಕರಣಗಳಲ್ಲಿ ರಾಜಕೀಯ ಬೆರಸಿಕೊಳ್ಳುವುದು ಸಹಜ, ಆದರೆ ಗೃಹ ಮಂತ್ರಿಗಳು ಯಾವುದೇ ಪ್ರಭಾವಕ್ಕೆ ಮಣಿಯಲ್ಲ ಅಂತ ಹೇಳಿದ್ದಾರೆ. ಅವರ ಮಾತಿನ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದರು.
ಇದೇ ವೇಳೆ ಮೈಸೂರಿನ ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್ ದಂಧೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಮಾರಾಟ ಆಗುತ್ತಿದ್ದು, ಯಾವ ಕಾಲೇಜು ಎಂದು ಹೆಸರು ಹೇಳುವುದಿಲ್ಲ. ಆದರೆ ಬಹುತೇಕ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಎಂದರು.
ಮದ್ಯಪಾನ, ಧೂಮಪಾನ ಮಾಡಿದರೆ ಪೋಷಕರಿಗೆ ಗೊತ್ತಾಗುತ್ತದೆ. ಆದರೆ ಡ್ರಗ್ಸ್ ಸೇವನೆ ಮಾಡಿದರೆ ಯಾರಿಗೂ ಗೊತ್ತಾಗುವುದಿಲ್ಲ. ಇದು ರಾಜ್ಯಾದ್ಯಂತ ಕಂಡು ಬರುತ್ತಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕಿದೆ ಆಗ್ರಹಿಸಿದರು.
ದಸರಾ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿದ ಅವರು, ವೈದ್ಯರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು ಹೆಸರುಗಳು ಕೇಳಿ ಬಂದಿದ್ದು, ಪೊಲೀಸ್ ಇಲಾಖೆಗೂ ಅವಕಾಶ ಕೊಡುವಂತೆ ಸಭೆಯಲ್ಲಿ ಕೇಳಿದ್ದೆ. ಅದರಂತೆ ಉದ್ಘಾಟನೆಯಲ್ಲಿ 5 ಇಲಾಖೆ ವಾರಿಯರ್ ಗಳನ್ನು ಕರೆಸಿ ಸನ್ಮಾನಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಆದರೆ ದಸರಾ ಉದ್ಘಾಟನಾ ಭಾಷಣಕ್ಕೆ ಒಬ್ಬರಿಗೆ ಅವಕಾಶ ಇರುವುದರಿಂದ ಆ ಆವಕಾಶವನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಮಂಜುನಾಥ್ ಗೆ ನೀಡುವಂತೆ ಕೋರುತ್ತೇನೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುವ ಮತ್ತೊಂದು ಸಭೆಯಲ್ಲಿ ಒತ್ತಾಯಿಸುತ್ತೇನೆ. ಆದರೆ ಐವರು ಕೊರೊನಾ ವಾರಿಯರ್ ಗಳನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದರು.