ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಮತ್ತೆ ವಾಗ್ದಾಳಿ
ಮೈಸೂರು, ಜೂನ್ 21: 'ಮಳೆ ನಿಂತರೂ ಮರದ ಹನಿಗಳು ನಿಲ್ಲವು' ಎಂಬಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಿಂದ ವರ್ಗಾವಣೆಯಾಗಿ ಹೋದ ಬಳಿಕವೂ, ನಿರ್ಗಮಿತ ಜಿಲ್ಲಾಧಿಕಾರಿ ವಿರುದ್ಧ ಸ್ಥಳೀಯ ಜನಪ್ರತಿನಿಧಿಗಳ ಸಿಟ್ಟು ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ.
Recommended Video
ತಮ್ಮ ಕಾರ್ಯವೈಖರಿಯಿಂದ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್ ಅಧಿಕಾರಿ ವಿರುದ್ಧ ವಾಗ್ದಾಳಿ ನಡೆಸಿದರು.
ರೋಹಿಣಿ ಸಿಂಧೂರಿ ಹಚ್ಚಿದ 'ಭೂಮಾಫಿಯಾ’ ಬೆಂಕಿ ಆರಿಲ್ಲ!
"ಮೈಸೂರಿನ ಪಾಸಿಟಿವಿಟಿ ರೇಟ್ ಇಡೀ ರಾಜ್ಯದಲ್ಲೇ ಹೆಚ್ಚಿತ್ತು. ಮೇ ತಿಂಗಳಲ್ಲೇ ಶೇ.28ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇತ್ತು. ಇದು ಸರಿ ಹೋಗಬೇಕು ಅಂತಲೇ ಇಡೀ ಆಡಳಿತ ವ್ಯವಸ್ಥೆ ಹಳ್ಳಿ ಕಡೆ ಹೋಗಬೇಕು ಎಂದಿದ್ದೆ. ನನ್ನ ಮಾತು ಇವತ್ತು ಮಾಧ್ಯಮದವರಿಗೂ ಅರಿವಾಗಿದೆ. ಮೈಸೂರಿನಲ್ಲಿ ಮೇ ತಿಂಗಳು ಒಂದರಲ್ಲೇ ಸಾವಿರಕ್ಕಿಂತ ಹೆಚ್ಚು ಜನ ಬಲಿಯಾಗಿದ್ದಾರೆ,'' ಎಂದರು.
"ಗ್ರಾಮಾಂತರ ಭಾಗದಿಂದ ಕ್ರಿಟಿಕಲ್ ಕಂಡೀಷನ್ ಇರುವವರು ಇಲ್ಲಿ ಬಂದು ಸಾವನ್ನಪ್ಪುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸರಿಯಾದ ಯೋಜನೆ ಮಾಡದೆ ಪಾಸಿಟಿವ್ ರೇಟ್ ಹೆಚ್ಚಾಗಿರುವುದು ಬೇಸರ ತಂದಿದೆ. ಈಗ ಸಹ 10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದ್ದು, ಸರಿಪಡಿಸಬೇಕಿದೆ. ಇದಕ್ಕಾಗಿ ಕಳೆದ 10 ದಿನಗಳಿಂದ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ.'' ಎಂದು ತಿಳಿಸಿದರು.
ಇದೇ ವೇಳೆ ನೂತನ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ, "ಜಿಲ್ಲಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಅಧಿಕಾರಿಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶೀಘ್ರದಲ್ಲೇ ಪಾಸಿಟಿವಿಟಿ ರೇಟ್ 5ಕ್ಕಿಂತ ಕಡಿಮೆ ಮಾಡಿ ಅನ್ಲಾಕ್ ಮಾಡುವಂತೆ ಕೆಲಸ ಮಾಡುತ್ತೇವೆ,'' ಎಂದು ವಿಶ್ವಾಸ ವ್ಯಕ್ತಪಡಿಸಿದರು.