ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ಹೆಚ್ಚಳ ಸಮರ್ಥಿಸಿಕೊಂಡ ಸಂಸದ ಪ್ರತಾಪ್ ಸಿಂಹ
ಮೈಸೂರು, ಜೂನ್ 13: ಫಾಸ್ಟ್ ಟ್ಯಾಗ್ ವರ್ಕ್ ಆಗುತ್ತಿದೆ ಯಾವ ಸಮಸ್ಯೆಯೂ ಇಲ್ಲ. ಸಿಸ್ಟಮ್ ಸಮಸ್ಯೆ ಇಲ್ಲ, ಟೋಲ್ ಸಂಗ್ರಹದ ಆರಂಭದಲ್ಲಿ ಇತ್ತು, ಈಗ ಈ ಸಮಸ್ಯೆ ಇಲ್ಲ. ಫಾಸ್ಟ್ ಟ್ಯಾಗ್ ಇರದೇ ಇದ್ದರೆ ಡಬಲ್ ಚಾರ್ಜ್ ಕಟ್ಟುವುದು ಕಡ್ಡಾಯ ಎಂದು ಬೆಂಗಳೂರು-ಮೈಸೂರು ಹೈವೆ ರಸ್ತೆಯ ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ಸಮಸ್ಯೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಆರ್ಥಿಕ ವರ್ಷ ಶುರುವಾದಾಗ ಟೋಲ್ ಹೆಚ್ಚಳ ಮಾಡುವುದು ಸಹಜ. ಈ ಹೈವೇಗೆ ಏಪ್ರಿಲ್ನಲ್ಲೇ ಟೋಲ್ ಹೆಚ್ಚಳ ಆಗಬೇಕಿತ್ತು. ಆಗ ಆಗಿರಲಿಲ್ಲ. ಹೀಗಾಗಿ ಈಗ 22% ಏರಿಕೆ ಆಗಿದೆ ಎಂದು ತಿಳಿಸಿದ್ದಾರೆ.

ವಿದ್ಯುತ್ ಬಿಲ್ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ಸಿಗರೇ ರಾಜ್ಯದ ಜನರ ದಾರಿ ತಪ್ಪಿಸಬೇಡಿ. ಸ್ವಾಯತ್ತ ಸಂಸ್ಥೆಯಾಗಿರುವ ಕೆಇಆರ್ಸಿ ದರ ಏರಿಕೆಗೆ ಶಿಫಾರಸ್ಸು ಮಾಡಿದೆ. ಅದನ್ನು ತಡೆಯುವ ಅಥವಾ ತಿರಸ್ಕರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಕಳೆದ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರ ಹಣ ಬಿಡುಗಡೆ ಆದೇಶಕ್ಕೆ ತಡೆ ಹಾಕುತ್ತೀರಿ. ಆದರೆ ವಿದ್ಯುತ್ ಬಿಲ್ ಹೆಚ್ಚಳ ಮಾಡಿರುವ ಆದೇಶಕ್ಕೆ ಯಾಕೆ ತಡೆ ಹಾಕುವುದಿಲ್ಲ? ಎಂದು ಪ್ರಶ್ನಿಸಿದರು.
ಎಲ್ಲಿಂದ ನಿಮಗೆ ಕಮಾಯಿ ಆಗುತ್ತೋ, ಎಲ್ಲಿಂದ ನಿಮಗೆ ವ್ಯಾಪಾರ ಆಗುತ್ತೋ? ಆ ವಿಚಾರದ ಬಗ್ಗೆ ಮಾತ್ರ ನಿಮ್ಮ ಆಸಕ್ತಿನಾ ? ಕಾಂಗ್ರೆಸ್ ನವರು ಲೂಟಿ ಮಾಡಲು ಬಂದಿದ್ದಾರೆ. ನಿಮ್ಮ ಜನ ವಿರೋಧಿ ಮುಖ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡಬೇಡಿ. ಈ ಸರ್ಕಾರ ಒಂದಷ್ಟು ಜನರ ಸುಲಿಗೆ, ಲೂಟಿ ಮಾಡಲು ಬಂದಿದೆ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಮಾತು ಮುಂದುವರಿಸಿದ ಸಂಸದ ಪ್ರತಾಪ್ ಸಿಂಹ, ನಮ್ಮ ಸರ್ಕಾರ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿತ್ತು. ಇದನ್ನು ಮುಂದುವರಿಸುವ ಮಾತನಾಡಿ. ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎನ್ನುತ್ತಿದ್ದಿರಿ. ಹಾಗಾದರೆ ಕಾಂಗ್ರೆಸ್ ಅವರದ್ದು ಎಷ್ಟು ಪರ್ಸೆಂಟ್ ಸರ್ಕಾರ ಹೇಳಲಿ? ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಹಗರಣಗಳ ತನಿಖೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅರ್ಕಾವತಿ ಹಗರಣ, ಡಿ ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ತನಿಖೆಯನ್ನು ನಮ್ಮ ಸರ್ಕಾರ ಇದ್ದಾಗಲೂ ಮಾಡ್ಲಿಲ್ಲ ನೀವು ಮಾಡ್ಲಿಲ್ಲ. ನೀವು ವಿರೋಧ ಪಕ್ಷದಲ್ಲಿದ್ದಾಗ ನಮ್ಮವರು ನಿಮ್ಮನ್ನು ಈ ವಿಚಾರ ಮುಂದಿಟ್ಟುಕೊಂಡು ಹೆದರಿಸುವುದು. ನೀವು ಅಧಿಕಾರಕ್ಕೆ ಬಂದಾಕ್ಷಣ ನಮ್ಮವರನ್ನು ನೀವು ಹೆದರಿಸ್ತೀರಾ. ಅಂದರೆ ನೀವೆಲ್ಲಾ ಸೀನಿಯರ್ಸ್ ನಾಯಕರು ಅಡ್ಜಸ್ಟ್ಮೆಂಟ್ನಲ್ಲಿ ಇದ್ದೀರಾ ಎಂದು ಪ್ರಶ್ನಿಸಿದರು.
ತನಿಖೆಗೆ ಆದೇಶ ಮಾಡಿ. ನೀವೇ ಹೇಳಿದ್ರಲ್ಲ 40% ಸರ್ಕಾರ ಅಂತ ಅದನ್ನು ನಿರೂಪಿಸಿ. ಬಿಟ್ ಕಾಯಿನ್ನ ಸಾವಿರಾರು ಕೋಟಿ ಹಗರಣವನ್ನು ಪ್ರೂವ್ ಮಾಡಿ. ಪಿಎಸ್ಐ ಹಗರಣದಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆಂದು ಸಾಬೀತು ಮಾಡಿ. ಬಿಜೆಪಿಯವರು ಭಾಗಿಯಾಗಿದರೂ ಹಿಡಿದು ತಂದು ಶಿಕ್ಷೆ ಕೊಡಿ. ನಾನು ಅವತ್ತೇ ಹೇಳಿದ್ದೇನೆ ತನಿಖೆ ಮಾಡಿ ಶಿಕ್ಷೆ ಕೊಡಿಸಿದ್ರೆ. ನಿಮ್ಮ ಕಾಲಿಗೆ ಬಿದ್ದು ಪಾದಪೂಜೆ ಮಾಡುತ್ತೇನೆ ಎಂದು ಹೇಳಿದ್ದೇನೆ. ಈಗಲೂ ಅದೇ ಮಾತನ್ನು ಹೇಳುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications