ಸೆಲ್ಫಿ ವಿಚಾರಕ್ಕೆ ಮನಸ್ತಾಪ: ಮೈಸೂರಿನಲ್ಲಿ ಹೆಣ್ಣು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
ಮೈಸೂರು, ಸೆಪ್ಟೆಂಬರ್ 21 : ಸೆಲ್ಫಿ ವಿಚಾರವಾಗಿ ಪತಿ ಬೈದರೆಂದು ಮನನೊಂದ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ಮೈಸೂರಿನ ವರುಣಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಆರ್ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಮೈಸೂರಿನ ಎನ್.ಆರ್.ಮೊಹಲ್ಲಾದ ಹಾಲಿನ ವ್ಯಾಪಾರಿ ಕುಮಾರ್ ಎಂಬುವವರ ಪತ್ನಿ ಕಮಲ(45), ಮಕ್ಕಳಾದ ವೈಷ್ಣವಿ(17) ಮತ್ತು ವರ್ಷ(14) ಆತ್ಮಹತ್ಯೆಗೆ ಶರಣಾದವರು.
ಘಟನೆಯ ವಿವರ
ಎನ್.ಆರ್. ಮೊಹಲ್ಲಾದ ಕುಮಾರ್ ಮನೆ ಬಳಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಗೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತೆರಳಿದ ಕಮಲ ಗಣೇಶ ಮೂರ್ತಿ ಬಳಿ ಸೆಲ್ಫಿ ತೆಗೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಿಚಯಸ್ಥರು ಕೂಡ ವರ್ಷ ಹಾಗೂ ವೈಷ್ಣವಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದನ್ನು ಕಂಡ ವೈಷ್ಣವಿ ತಂದೆ ಕುಮಾರ್ ಅವರು ಮನೆಗೆ ಹೋಗಿ ತರಾಟೆಗೆ ತೆಗೆದುಕೊಂಡು ಕಾಲೇಜಿಗೆ ಹೋಗದಂತೆ ತಾಕೀತು ಮಾಡಿದ್ದಾರೆ.
ಅಲ್ಲದೆ ಪತ್ನಿ ಜೊತೆಯೂ ಇದೇ ವಿಚಾರವಾಗಿ ಜಗಳವಾಡಿ ಹೊರಗಡೆ ಹೋಗದಂತೆ ನಿಂದಿಸಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಮನನೊಂದ ಕಮಲ ನಿನ್ನೆ ಗುರುವಾರ (ಸೆ.20) ಸಂಜೆ 7 ಗಂಟೆಗೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಕೆಆರ್ ಎಸ್ ಬಸ್ ಹತ್ತಿದ್ದಾರೆ.

ಇದನ್ನು ಗಮನಿಸಿದ್ದ ನೆರೆಮನೆಯವರು ತಾಯಿ, ಮಕ್ಕಳು ಬಸ್ ನಲ್ಲಿ ಹೋಗಿದ್ದನ್ನು ಕುಮಾರ್ ಗೆ ತಿಳಿಸಿದ್ದಾರೆ. ತಕ್ಷಣ ಕುಮಾರ್ ಮತ್ತೊಂದು ಬಸ್ ಹತ್ತಿ ಹಿಂಬಾಲಿಸಿ ಹೋಗಿದ್ದಾರೆ. ಅಷ್ಟರಲ್ಲಿ ಕುಪ್ಪೇದಳ ಗ್ರಾಮದ ಬಳಿ ತಾಯಿ, ಮಕ್ಕಳು ಬಸ್ ಇಳಿದು ವರುಣಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಹೋಗುತ್ತಿದ್ದ ಬಸ್ ಕುಪ್ಪೇದಳ ಗ್ರಾಮಕ್ಕೆ ಬರುತ್ತಿದ್ದಂತೆ ಜನರು ಗುಂಪು ಗಟ್ಟಿರುವುದನ್ನು ಗಮನಿಸಿ ಕುಮಾರ್ ಬಸ್ ಇಳಿದು ಸಮೀಪ ಹೋಗಿ ನೋಡಿದಾಗ ಪತ್ನಿ ಹಾಗೂ ಮಕ್ಕಳು ನಾಲೆಗೆ ಹಾರಿರುವುದು ಗೊತ್ತಾಗಿದೆ.
ವಿಷಯ ತಿಳಿದ ಕೆಆರ್ ಎಸ್ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕತ್ತಲೆಯಾಗಿದ್ದರಿಂದ ಶವಗಳನ್ನು ಹುಡಕಲು ಸಾಧ್ಯವಾಗದೆ ಇಂದು ಮುಂಜಾನೆಯಿಂದಲೇ ಶವಕ್ಕಾಗಿ ತಡಕಾಡಿದರು.
ನಾಲೆಯಲ್ಲಿ ನೀರನ್ನು ಕಡಿಮೆ ಮಾಡಿಸಿ ಶವಗಳಿಗಾಗಿ ಪೊಲೀಸರು ನುರಿತ ಈಜುಪಟುಗಳಿಂದ ಶೋಧಿಸಿದ್ದು, ಬೆಳಗೊಳ ಬಳಿ ಮೂವರ ಶವಗಳು ದೊರೆತಿವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಎಸ್. ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications