ಮೈಸೂರಿಗೆ ಪ್ರಧಾನಿ ಭೇಟಿ: ಪ್ರತಿಭಟಿಸಿ ಗಮನ ಸೆಳೆದ ರೈತರು
ಮೈಸೂರು ಜೂ.20: ಧಾನ್ಯ, ತರಕಾರಿ, ಬೆಲ್ಲ, ಕಬ್ಬುಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಮೂಲಕ 'ಕರ್ಮಯೋಗಿ ರೈತನ ಕಾಯಕ' ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು.
ಜಿಲ್ಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯಲು ಗಾಂಧಿ ಪ್ರತಿಮೆ ಮುಂಭಾಗದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಕೃಷಿ ಬೆಳೆಗಳಿಗೆ ಖಾತರಿ ಬೆಲೆ ನೀಡುವಂತೆ ಘೋಷಣೆ ಕೂಗಿದ್ದು ಕಂಡು ಬಂತು.
ಈ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ಮಾತನಾಡಿ, "ಪ್ರಧಾನಿಗಳು ಯೋಗ ದಿನ ಆಚರಿಸಲು ಮೈಸೂರಿಗೆ ಬರುತ್ತಿದ್ದಾರೆ. ರೈತರು ನಾವು ಕರ್ಮಯೋಗಿ ರೈತನ ಕಾಯಕ ದಿನ ಆಚರಿಸುವ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಮಾಡಿದ್ದೇವೆ. ಈ ಮೂಲಕ ನಮ್ಮ ಬೇಡಿಕೆಗಳನ್ನು ಪ್ರಧಾನಿಗಳ ಮುಂದಿಟ್ಟಿದ್ದೇವೆ," ಎಂದರು.
ಈ ಹಿಂದೆ ಮೈಸೂರಿಗೆ (2018ರಲ್ಲಿ) ಬಂದಾಗ ಪ್ರಧಾನಿ ಮೋದಿ ಅವರು 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಅದನ್ನು ಮರೆತು ರಸಗೊಬ್ಬರ, ಬಿತ್ತನೆ ಬೀಜ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ರೈತರಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟ ಮಾತು ನೆರವೇರಿಸಿ: ರೈತರ ಆಗ್ರಹ
ಈ ಕುರಿತು ಕೇಳಿದಾಗಲ್ಲೆಲ್ಲ ಫಲಾನುಭವಿಗಳ ಜೊತೆಗೆ ಚರ್ಚಿಸುತ್ತೇನೆ ಎನ್ನುತ್ತಾರೆ. ಆದರೆ ರಿಯಲ್ ಎಸ್ಟೇಟ್ ಉದ್ಯಮಿಗಳ ಜತೆ ಚರ್ಚಿಸಿದಂತೆ ನಮ್ಮ ಜತೆ ಚರ್ಚಿಸುತ್ತಿಲ್ಲ ಏಕೆ? ರೈತರ ಸಮಸ್ಯೆಗಳ ಕುರಿತು ಮಾತನಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಮುನ್ನ ಮೋದಿ ಡಾ.ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿದ್ದರು. ರೈತರ ಉತ್ಪಾದನಾ ವೆಚ್ಚ ಹೆಚ್ಚಿಸುವುದು ಸೇರಿದಂತೆ ಹಲವು ಆಶ್ವಾಸನೆ ಕೊಟ್ಟಿದ್ದರು. ಆದರೆ ನುಡಿದಂತೆ ನಡೆದುಕೊಂಡಿಲ್ಲ. ಇನ್ನು ಮುಂದೆಯಾದರು ರೈತರ ಬೆಳೆಗೆ ಖಾತತಿ ಬೆಲೆ ಸಿಗುವಂತಹ ಕಾನೂನು ರಚಿಸಬೇಕು. ಬದಲಾಗಿ ಸುಳ್ಳು ಹೇಳುವ ಮೂಲಕ ರೈತರಿಗೆ ನಾಮಾ ಹಾಕುವ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದರು.
ರೈತರಿಗೆ ನೀತಿಗಳು ಮಾರಕ:
ಸಾಲ ನೀಡಲು ಬ್ಯಾಂಕ್ಗಳು ರೈತರ ಸಿವಿಲ್ ಸ್ಕೋರ್ ಕೇಳುತ್ತಿದ್ದಾರೆ. ಅತಿವೃಷ್ಟಿ-ಅನಾವೃಷ್ಟಿಯಿಂದ ಬೆಳೆ ಹಾನಿಗೀಡಾದ ರೈತರು ಸಕಾಲಕ್ಕೆ ಸಾಲ ತುಂಬಲು ಹೇಗೆ ಸಾಧ್ಯ? ಎಂಬುದನ್ನು ಮನಗಾಣಬೇಕು. ರೈತರಿಗೆ ಮಾರಕವಾಗುವ ನೀತಿಗಳನ್ನು ತೆಗೆದುಹಾಕಬೇಕು. ದೇಶ ಬಿಟ್ಟು ಹೋಗುವ ಬಂಡವಾಳ ಶಾಹಿಗಳಿಗೆ ಲಕ್ಷಾಂತರ ಕೋಟಿ ಸಾಲ ನೀಡುವ ಬ್ಯಾಂಕುಗಳು ರೈತರನ್ನು ಗುಲಾಮರಂತೆ ಕಾಣುತ್ತಿವೆ.
ಕಬ್ಬಿಗೆ ಕೇವಲ 50ರೂ.ಏರಿಕೆ!
ಭಾರತ ಪ್ರಜಾಪ್ರಭುತ್ವ ರಾಷ್ಟ್ರ, ದ್ವಂದ್ವ ಹೇಳಿಕೆ ತಪ್ಪು ಸಂದೇಶದ ಮೂಲಕ ರೈತರನ್ನು ದಿಕ್ಕುತಪ್ಪಿಸಿ ಬೇಡಿ. ಕಳೆದ ನಾಲ್ಕು ವರ್ಷದಲ್ಲಿ ಕಬ್ಬಿಗೆ 50 ರೂ.ಏರಿಸಲಾಗಿದೆ. ಇದು ನ್ಯಾಯವೇ ಕಬ್ಬಿಗೆ ಕನಿಷ್ಠ 3,500 ರೂ. ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಪಿ.ಸೋಮಶೇಖರ್, ಹಳ್ಳಿಕೆರೆ ಹುಂಡಿ ಭಾಗ್ಯರಾಜು, ಕಿರಗಸುರ್ ಶಂಕರ, ಬಡಗಲಪುರ ನಾಗೇಂದ್ರ, ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ, ಕೆಂಡಗಣ್ಣ ಸ್ವಾಮಿ, ಮಾದಪ್ಪ, ಕೆರೆಹುಂಡಿ ರಾಜಣ್ಣ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.