"ಜಮೀರ್ ಬೆಂಕಿ ಹಾಕಿದವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ'': ಎಚ್.ವಿಶ್ವನಾಥ್
ಮೈಸೂರು, ಆಗಸ್ಟ್ 14: ಬೆಂಗಳೂರಿನ ಕೆ.ಜಿ ಹಳ್ಳಿ ಮತ್ತು ಡಿ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಕಾಂಗ್ರೆಸ್ ನ ಪಾಪದ ಕೂಸು. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಬೀಳಲು ಕಾಂಗ್ರೆಸ್ ಕಾರಣ ಎಂದು ಎಂಎಲ್ಸಿ ಎಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರಿನಲ್ಲಿಂದು ಬೆಂಗಳೂರಿನ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ಗಲಭೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇದು ಕಾಂಗ್ರೆಸ್ ಹಾಗೂ ಸ್ಥಳೀಯ ಸಂಘಟನೆಗೂ ನಡೆಯುತ್ತಿರುವ ಗಲಭೆ ಎಂದರು.
ಸಿಎಎ ಹೋರಾಟದಲ್ಲಿ ಪ್ರಚೋದನಕಾರಿ ಭಾಷಣಗಳು ಇದಕ್ಕೆಲ್ಲಾ ಕಾರಣವಾಗಿವೆ. ವಿಪಕ್ಷಗಳು ಜನರನ್ನು ಉದ್ರೇಕಗೊಳಿಸಿದ್ದು, ಇನ್ನೂ ಬಿಸಿಕೆಂಡವಾಗಿ ಉಳಿದಿದೆ. ಆ ಕೆಂಡವನ್ನೇ ಇಟ್ಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ವಿರುದ್ಧ ಕಿಡಿಕಾರಿದ ಎಂಎಲ್ಸಿ ವಿಶ್ವನಾಥ್ ಅವರು, ಜಮೀರ್ ಅಹಮ್ಮದ್ ಬೆಂಕಿ ಬಿದ್ದ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಬೆಂಕಿ ಹಾಕಿದವರ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ ಎಂದು ಟೀಕಿಸಿದರು.
ಪಾದರಾಯನಪುರ ಗಲಾಟೆ ವಿಚಾರದಲ್ಲಿ ಜೈಲಿಗೆ ಹೋಗಿ ಬಂದವರನ್ನು ಮಾಲೆ ಹಾಕಿ ಸ್ವಾಗತಿಸಿದರು. ಇವರೇನು ಸ್ವಾತಂತ್ರ್ಯ ಹೋರಾಟ ಮಾಡಲು ಹೋಗಿದ್ದರಾ ಎಂದು ವಿಶ್ವನಾಥ್ ಪ್ರಶ್ನಿಸಿದರು.











Click it and Unblock the Notifications