ಉಕ್ರೇನ್; ಬಂಕರ್ನಲ್ಲಿ ಅಡಗಿ ಕುಳಿತ ಮೈಸೂರು ವಿದ್ಯಾರ್ಥಿನಿ
ಮೈಸೂರು, ಫೆಬ್ರವರಿ 27; "ಇಲ್ಲಿ ಅನ್ನ ನೀರು ಎರಡೂ ಸಿಗುತ್ತಿಲ್ಲ. ನಾವೀಗ ಬಂಕರ್ನಲ್ಲಿ ಅಡಗಿ ಕುಳಿತಿದ್ದೇವೆ. ದಯವಿಟ್ಟು ನಮ್ಮನ್ನು ಬೇಗ ತಾಯ್ನಾಡಿಗೆ ಕರೆಸಿಕೊಳ್ಳಿ" ಎಂದು ಜ್ಞಾನಶ್ರೀ ಸಿಂಗ್ ಮನವಿ ಮಾಡಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಮೈಸೂರಿನ ಜ್ಞಾನಶ್ರೀ ಸಿಂಗ್, ವಿಯನ್ಕರಾಂಜಿ ವಿವಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ. ರಷ್ಯಾ- ಉಕ್ರೇನ್ ಯುದ್ಧದಿಂದ ಕಳೆದ ಮೂರು ದಿನದಿಂದ ಬಂಕರ್ನಲ್ಲೇ ಆಶ್ರಯ ಪಡೆದುಕೊಂಡಿದ್ದಾರೆ.
"ನಾವಿರುವುದು ರಷ್ಯಾದ ಗಡಿಭಾಗದಲ್ಲಿ. ಇಲ್ಲಿ ಕ್ಷಣಕ್ಷಣವೂ ಬಾಂಬ್ಗಳ ಸದ್ದು ಕೇಳಿ ಬರುತ್ತಿದೆ. ಸದ್ಯದ ಮಟ್ಟಿಗೆ ಸುರಕ್ಷತೆಗಾಗಿ ಹಾಸ್ಟೆಲ್ ಕೆಳಗಿರುವ ಬಂಕರ್ನಲ್ಲಿ ಅಡಗಿ ಕುಳಿತಿದ್ದೇವೆ. ನಮ್ಮ ಜೊತೆ 30 ಮಂದಿ ಇದ್ದಾರೆ. ಇಲ್ಲಿ ಕರ್ನಾಟಕದ ಬೇರೆ ಭಾಗದ ವಿದ್ಯಾರ್ಥಿಗಳು ಇದ್ದಾರೆ" ಎಂದು ಜ್ಞಾನಶ್ರೀ ಸಿಂಗ್ ಹೇಳಿದ್ದಾರೆ.

"ಹೊರಗಡೆ ಅಂಗಡಿಗಳು ಎಲ್ಲಾ ಬಂದ್ ಆಗಿದೆ. ನಮಗೆ ಕುಡಿಯಲು ನೀರು, ತಿನ್ನಲು ಆಹಾರ ಸಿಗುತ್ತಿಲ್ಲ. ಯುದ್ಧ ಇಷ್ಟು ದೊಡ್ಡ ಮಟ್ಟದಲ್ಲಿ ಆಗುತ್ತದೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ನಾವು ಈಸ್ಟನ್ ಭಾಗದಲ್ಲಿ ಇದ್ದೇವೆ. ಇದು ರಷ್ಯಾದ ಗಡಿ ಭಾಗ. ಹಾಗಾಗಿ ಸ್ವಲ್ಪ ಸಮಯ ಕಾಯಿರಿ ಎಂಬ ಮಾಹಿತಿ ಭಾರತೀಯ ರಾಯಭಾರಿ ಕಚೇರಿಯಿಂದ ಬಂದಿದೆ" ಎಂದು ಜ್ಞಾನಶ್ರೀ ತಿಳಿಸಿದ್ದಾರೆ.

"ಸದ್ಯ ಆಹಾರಕ್ಕೆ ಹಾಹಾಕಾರ ಉಂಟಾಗಿದೆ. ನಮ್ಮ ಸ್ನೇಹಿತೆ ಮೆಟ್ರೋದಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ. ಅಲ್ಲಿ ಸ್ಥಳೀಯ ಉಕ್ರೇನಿಗಳು ಆಹಾರ ಕದಿಯುತ್ತಿದ್ದಾರಂತೆ. ನಮ್ಮ ಬಳಿ ಇನ್ನು 3 ದಿನಕ್ಕೆ ಆಗುವಷ್ಟು ಮಾತ್ರ ಆಹಾರವಿದೆ" ಎಂದು ಜ್ಞಾನಶ್ರೀ ಅಲ್ಲಿನ ಪರಿಸ್ಥಿತಿ ವಿವರಿಸಿದ್ದಾರೆ.
"ತುಂಬಾ ಭಯ ಆಗುತ್ತಿದೆ. ಏನು ಮಾಡಬೇಕೆಂದು ತೋಚುತ್ತಿಲ್ಲ. ಯುದ್ಧ ಘೋಷಣೆಯಾಗುವ ಎರಡು ದಿನದ ಮುಂಚೆ ಎಲ್ಲಾ ಅಂಗಡಿ ಭರ್ತಿ ಆಗಿತ್ತು. ಹಾಗಾಗಿ ಸಿಕ್ಕ ಸ್ವಲ್ಪ ಆಹಾರ ಪದಾರ್ಥವನ್ನು ದಾಸ್ತಾನು ಮಾಡಿಕೊಂಡಿದ್ದೆವು. ಇದೀಗ ಆ ಆಹಾರವೂ ಮುಗಿಯುತ್ತ ಬರುತ್ತಿದೆ" ಎಂದು ಜ್ಞಾನಶ್ರೀ ಕಣ್ಣೀರಿಟ್ಟರು.












Click it and Unblock the Notifications