JDS ಜತೆ ಕಾಂಗ್ರೆಸ್ ಮೈತ್ರಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್: ದಳಪತಿಗಳತ್ತ ಎಲ್ಲರ ಚಿತ್ತ
ಮೈಸೂರು, ಫೆಬ್ರವರಿ 20: ಭಾರೀ ಕುತೂಹಲ ಮೂಡಿಸಿರುವ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಜೆಡಿಎಸ್ ಜೊತೆ ದೋಸ್ತಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಹಾತೊರೆಯುತ್ತಿವೆ.
ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಭಾರೀ ಕಸರತ್ತು ನಡೆಸಿವೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಸಾಂಗತ್ಯ ಬೆಳೆಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಗ್ರೀನ್ ಸಿಗ್ನಲ್ ದೊರೆತಿದೆ.
ಶನಿವಾರ ಬೆಳಿಗ್ಗೆ ಮೈಸೂರಿನ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಗಳ ಸಭೆ ನಡೆಸಿದ ಸಿದ್ದರಾಮಯ್ಯ, ಪಾಲಿಕೆಯಲ್ಲಿ ಅಧಿಕಾರದಿಂದ ಬಿಜೆಪಿಯನ್ನು ದೂರವಿಡುವ ಮತ್ತು ಪಾಲಿಕೆ ಅಧಿಕಾರ ಹಿಡಿಯುವ ದೃಷ್ಟಿಯಿಂದ ಬೇಕಾಗಿರುವ ರಣತಂತ್ರ ಹೆಣೆದಿದ್ದಾರೆ. ಆ ಮೂಲಕ ಜೆಡಿಎಸ್ ಜತೆ ಮೈತ್ರಿಗೆ ಸಮ್ಮತಿ ನೀಡಿದ್ದಾರೆ.

ನಮಗೆ ಮೇಯರ್ ಸ್ಥಾನ ಅವರು ನೀಡಬೇಕು
ಜೆಡಿಎಸ್ ಜತೆ ಮೈತ್ರಿಗೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಟ್ಟಿರುವ ಹಿನ್ನೆಲೆಯಲ್ಲಿ ಮೇಯರ್ ಚುನಾವಣೆ ಮತ್ತಷ್ಟು ರೋಚಕತೆ ಸಿಕ್ಕಂತಾಗಿದೆ. ಸಭೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ತಾನಾಗಿ ಬಂದು ಮೈತ್ರಿ ಮಾಡಿಕೊಂಡರೆ ನನ್ನ ವಿರೋಧ ಇಲ್ಲ. ಹಳೆಯ ಒಪ್ಪಂದದಂತೆ ನಮಗೆ ಮೇಯರ್ ಸ್ಥಾನ ಅವರು ನೀಡಬೇಕು. ಮೇಯರ್ ಸ್ಥಾನ ಕೊಟ್ಟರೆ ಮೈತ್ರಿ ಮುಂದುವರಿಸಲು ಹೇಳಿದ್ದೇನೆ ಎಂದಿದ್ದಾರೆ. ಅಲ್ಲದೆ ಎಲ್ಲರಿಗೂ ಒಗ್ಗಟ್ಟಾಗಿರಿ ಜಗಳ ಮಾಡಿಕೊಳ್ಳಬೇಡಿ ಅಂತ ಸಭೆಯಲ್ಲಿ ಹೇಳಿದ್ದೇನೆ ಅಂತ ಸಿದ್ದರಾಮಯ್ಯ ತಿಳಿಸಿದರು.

ಮೇಯರ್ ಗದ್ದುಗೆ ಏರಲು ಶತಪ್ರಯತ್ನ
ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಕಸರತ್ತು ಆರಂಭವಾಗಿರುವ ಬೆನ್ನಲ್ಲೇ ಕಮಲ ಪಾಳಯದ ನಡೆ ನಿಗೂಢವಾಗಿದೆ. ಹಲವು ವರ್ಷಗಳಿಂದಲೂ ಪಾಲಿಕೆ ಮೇಯರ್ ಗದ್ದುಗೆ ಏರುವ ಕನಸು ಹೊತ್ತಿರುವ ಬಿಜೆಪಿ, ಈ ಬಾರಿ ಶತಾಯಗತಾಯ ಮೇಯರ್ ಗದ್ದುಗೆ ಏರಲು ಶತಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ ಮೇಯರ್ ಎಲೆಕ್ಷನ್ ಬಗ್ಗೆ ಅಖಾಡಕ್ಕೆ ಶಾಸಕ ತನ್ವೀರ್ ಸೇಠ್ ಧುಮುಕಿರುವುದು ಬಿಜೆಪಿ ನಾಯಕರಲ್ಲಿ ತಲ್ಲಣ ಸೃಷ್ಟಿಸಿದೆ.

ಜೆಡಿಎಸ್ ನಿರ್ಧಾರವೇ ಅಂತಿಮ
ಈ ನಡುವೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ವಿಷಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಏನೇ ತಂತ್ರಗಾರಿಕೆ ನಡೆಸಿದರೂ, ಜೆಡಿಎಸ್ ನಿರ್ಧಾರವೇ ಅಂತಿಮವಾಗಲಿದೆ. ಮೇಯರ್ ಚುನಾವಣೆ ಮೈತ್ರಿ ಕುರಿತಂತೆ ಈಗಾಗಲೇ ಜೆಡಿಎಸ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ವರಿಷ್ಠರ ನಿರ್ಧಾರಕ್ಕಾಗಿ ಕಾದು ಕುಳಿತಿದೆ.

ಜೆಡಿಎಸ್ ಯಾರಿಗೆ ಕೈಕೊಡುತ್ತೆ
ಇನ್ನೂ, ಯಾರ ಜತೆ ಮೈತ್ರಿ ಮಾಡಿಕೊಳ್ಳಬೇಕು ಅನ್ನುವ ಬಗ್ಗೆ ದಳಪತಿಗಳು ತಲೆಕೆಡಿಸಿಕೊಂಡಿದ್ದಾರೆ. ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ನೇತೃತ್ವದಲ್ಲಿ ಮೊನ್ನೆ ಸಭೆ ನಡೆಸಲಾಗಿದ್ದು, ಜೆಡಿಎಸ್ ವರಿಷ್ಠರ ಅಂಗಳದಲ್ಲಿ ಚೆಂಡುಬಿದ್ದಿದೆ. ಒಟ್ಟಾರೆ ಫೆ.24ರಂದು ನಡೆಯುವ ಪಾಲಿಕೆ ಮೇಯರ್ ಎಲೆಕ್ಷನ್ ರಣಾಂಗಣ ಸದ್ದಿಲ್ಲದೇ ರೋಚಕಗೊಂಡಿದ್ದು, ಯಾರ ಮೈತ್ರಿ ವರ್ಕೌಟ್ ಆಗಲಿದೆ ಅನ್ನೋದು ಕುತೂಹಲವಾಗಿದೆ. ಜೆಡಿಎಸ್ ಯಾರಿಗೆ ಕೈಕೊಡುತ್ತೆ, ಯಾರ ಜತೆ ದೋಸ್ತಿ ಬೆಳೆಸುತ್ತೆ ಅನ್ನೋದನ್ನು ಕಾದು ನೋಡಬೇಕು.












Click it and Unblock the Notifications