ಮೈಸೂರು ನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಗೆ ದಿನಾಂಕ ಫಿಕ್ಸ್
ಮೈಸೂರು, ಆಗಸ್ಟ್ 25: ಬಹು ದಿನಗಳಿಂದ ಖಾಲಿ ಇದ್ದ ಮೈಸೂರು ಮೇಯರ್ ಹಾಗೂ ಉಪ ಮೇಯರ್ ಹುದ್ದೆಗೆ ಮೀಸಲು ಪ್ರಕಟವಾದ ಬೆನ್ನಲ್ಲೇ ಇದೀಗ ಸೆಪ್ಟೆಂಬರ್ 6ರಂದು ಮಧ್ಯಾಹ್ನ 12 ಗಂಟೆಗೆ ಚುನಾವಣೆ ಕೂಡ ನಿಗಧಿಯಾಗಿದೆ. ಆ ಮೂಲಕ ಈ ಬಾರಿ ದಸರಾ ಮಹೋತ್ಸವಕ್ಕೆ ಹೊಸ ಮೇಯರ್ ಆಯ್ಕೆ ಆಗುವುದು ಖಚಿತಗೊಂಡಿದೆ.
ಯಾರಿಗೂ ಬಹುಮತವಿಲ್ಲದೆ ಮೈಸೂರು ನಗರ ಪಾಲಿಕೆಯಲ್ಲಿ ನಿರ್ಣಯಕ ಪಕ್ಷವಾದ ಜೆಡಿಎಸ್ಗೆ ಈ ಬಾರಿ ಮೇಯರ್ ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಆ ಪಕ್ಷದ ಆಕಾಂಕ್ಷಿಗಳು ಸ್ಥಳೀಯ ನಾಯಕರ ಜೊತೆಗೆ ಪಕ್ಷದ ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಆರು ತಿಂಗಳ ಹಿಂದೆ ಮೇಯರ್ ಸುನಂದ ಪಾಲನೇತ್ರ ಮತ್ತು ಉಪಮೇಯರ್ ಅವಧಿ ಮುಗಿದಿತ್ತು.
ಬಿಬಿಎಂಪಿ ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ವಾರ್ಡ್ ಕಚೇರಿಗೆ ಭೇಟಿ ನೀಡಿ
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾ ನಗರ ಪಾಲಿಕೆ ಮೇಯರ್-ಉಪಮೆಯರ್ ಮೀಸಲಾತಿ ಪ್ರಕಟವಾಗಿದೆ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೇಯರ್ ಸ್ಥಾನ, ಬಿಸಿಎ(ಮಹಿಳೆ)ವರ್ಗಕ್ಕೆ ಉಪಮೇಯರ್ ಸ್ಥಾನ ಮೀಸಲಾಗಿದೆ. ಇದೀಗ ಚುನಾವಣಾ ದಿನಾಂಕ ಸಹ ಘೋಷಣೆಯಾಗಿರುವುದರಿಂದ ರಾಜಕೀಯ ಚಟುವಟಿಕೆ ಮತ್ತಷ್ಟು ಬಿರುಸುಗೊಂಡಿದೆ. ಗೌರಿ ಗಣೇಶ ಹಬ್ಬ ಮುಗಿಯುತ್ತಿದ್ದಂತೆಯೇ ಮೇಯರ್ ಚುನಾವಣೆ ಪ್ರಕ್ರಿಯೆ ಬಿರುಸುಗೊಳ್ಳಲಿದೆ. ಮೇಯರ್, ಉಪ ಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಚುನಾವಣೆಯೂ ಸೆಪ್ಟೆಂಬರ್ 6 ರಂದು ನಡೆಯಲಿದೆ.
ಜೆಡಿಎಸ್-ಬಿಜೆಪಿ ಮೈತ್ರಿ ಸಾಧ್ಯತೆ
ಮೇಯರ್ ಗಾದಿಗೆ ಏರಲು ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಯಾವುದಾದರೂ ಎರಡು ಪಕ್ಷಗಳು ಸೇರಿ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ನಿಂದ ದೂರ ಉಳಿದಿರುವ ಜೆಡಿಎಸ್ ಈ ಬಾರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ನಾಲ್ಕನೇ ಅವಧಿಯ ಮೇಯರ್ ಸ್ಥಾನವನ್ನು ಜೆಡಿಎಸ್ ಪಡೆದುಕೊಂಡು, ಐದನೇ ಅವಧಿಯನ್ನು ಬಿಜೆಪಿಗೆ ಬಿಟ್ಟುಕೊಡುವ ಚರ್ಚೆಯೂ ನಡೆಯುತ್ತಿದೆ.
ಪಕ್ಷಗಳ ಸಂಖ್ಯಾಬಲ ಹೀಗಿದೆ
ಒಟ್ಟು 65 ಸ್ಥಾನಗಳ ಪೈಕಿ ಬಿಜೆಪಿ 22+3, ಕಾಂಗ್ರೆಸ್ 20+3 ಹಾಗೂ ಜೆಡಿಎಸ್ 17+3 ಸ್ಥಾನ ಪಡೆದುಕೊಂಡಿದ್ದರೆ, ಬಿಎಸ್ಪಿ 1, ಐವರು ಪಕ್ಷೇತರರಿದ್ದಾರೆ. ಇದರಲ್ಲಿ ಕ್ರಮವಾಗಿ ಬಿಜೆಪಿಯಲ್ಲಿ ಸಂಸದ ಮತ್ತು ಶಾಸಕರ 3 ಮತಗಳಿದ್ದರೆ, ಕಾಂಗ್ರೆಸ್ಗೆ 2 ಹಾಗೂ ಜೆಡಿಎಸ್ಗೆ 3 ಮತಗಳು ಸೇರಿವೆ.
"ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರ ಪಕ್ಷದ ವರಿಷ್ಠರ ಬಳಿ ಚರ್ಚೆ ಮಾಡಿ ನಮ್ಮ ನಿರ್ಧಾರ ತಿಳಿಸುತ್ತೇವೆ. ಅಲ್ಲಿಯ ವರೆಗೂ ನಾವು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕಳೆದ ಬಾರಿ ಆದಂತೆ ಏನೂ ಬೇಕಾದರೂ ಬದಲಾವಣೆಗಳಾಗಬಹುದು " ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ತಿಳಿಸಿದ್ದಾರೆ.
ಆಕಾಂಕ್ಷಿಗಳಿಂದ ಸಿದ್ದರಾಮಯ್ಯ-ಎಚ್ಡಿಕೆ ಭೇಟಿ
ಸಿದ್ದರಾಮಯ್ಯ ಭೇಟಿ: ಈಗಾಗಲೇ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರು ವಾಸ್ತವ್ಯ ಹೂಡಿರುವುದರಿಂದ ಕಾಂಗ್ರೆಸ್ನ ಆಕಾಂಕ್ಷಿಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ತಮಗೆ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಶಾಸಕ ತನ್ವೀರ್ ಸೇಠ್ ರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಗುರುವಾರ ರಾತ್ರಿ ಜೆಡಿಎಸ್ ಪಕ್ಷದ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮೈಸೂರಿಗೆ ಆಗಮಿಸಲಿದ್ದು, ರಾತ್ರಿಯೇ ಜೆಡಿಎಸ್ನ ಮೇಯರ್ ಆಕಾಂಕ್ಷಿಗಳು, ಕುಮಾರ ಸ್ವಾಮಿಯನ್ನು ಭೇಟಿ ಮಾಡಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಮೇಯರ್ ರೇಸ್ನಲ್ಲಿರುವ ಪ್ರಮುಖರು
ಬಿಜೆಪಿಯಿಂದ ಬಿ.ವಿ.ಮಂಜುನಾಥ್, ಮಾ.ವಿ.ರಾಮಪ್ರಸಾದ್, ಶಿವಕುಮಾರ್, ಸುಬ್ಬಯ್ಯ ಸೇರಿದಂತೆ ಇನ್ನೂ ಹಲವರಿದ್ದಾರೆ. ಜೆಡಿಎಸ್ ಪಕ್ಷದಿಂದ ಎಸ್ಬಿಎಂ ಮಂಜು, ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ಭಾಗ್ಯ ಮಾದೇಶ್, ಎಂ.ಜಿ.ನಾಗರಾಜ್ ಪಟ್ಟಿಯಲ್ಲಿದ್ದಾರೆ. ಕಾಂಗ್ರೆಸ್ನಲ್ಲಿ ಶ್ರೀನಿವಾಸ್, ಶಿವಕುಮಾರ್, ಗೋಪಿ, ಆರ್ ಹುಸೇನ್, ಅಯೂಬ್ ಖಾನ್ ಪೈಪೋಟಿಯಲ್ಲಿದ್ದಾರೆ.