ಮೈಸೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ
ಮೈಸೂರು, ಡಿಸೆಂಬರ್. 23 : ಹಾಡಹಗಲೇ ಚಿಕನ್ ಸ್ಟಾಲ್ ಮಾಲೀಕನೋರ್ವನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೈದ ಘಟನೆ ಮೈಸೂರಿನಲ್ಲಿ ಶುಕ್ರವಾರ ನಡೆದಿದೆ.
ದುಷ್ಕರ್ಮಿಗಳಿಂದ ಹತ್ಯೆಯಾದವನನ್ನು ಪಡುವಾರ ಹಳ್ಳಿಯ ಫ್ರೆಂಡ್ಲಿ ಚಿಕನ್ ಸ್ಟಾಲ್ ಮಾಲೀಕ ಕೃಷ್ಣ(45) ಎಂದು ಗುರುತಿಸಲಾಗಿದೆ.
ಮೈಸೂರಿನ ಒಂಟಿಕೊಪ್ಪಲ್ ವಿವಿ ಮೊಹಲ್ಲಾ 6ನೇ ಮುಖ್ಯರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದಾಗ ಎದುರಿನಿಂದ ಕಾರಿನಲ್ಲಿ ಬಂದ ಮೂವರು ಮುಸುಕುಧಾರಿಗಳು ಕೃಷ್ಣನ ಮೇಲೆ ಏಕಾಏಕಿ ಮಾರಕಾಯುಧಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಘಟನಾ ಸ್ಥಳಕ್ಕೆ ಡಿಸಿಪಿ ಶೇಖರ್ ಹಾಗೂ ಒಂಟಿಕೊಪ್ಪಲ್ ಠಾಣೆ ಇನ್ಸಪೆಕ್ಟರ್ ರವಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳವೂ ಆಗಮಿಸಿದ್ದು ತನಿಖೆ ಮುಂದುವರಿದಿದೆ.

ಕೃಷ್ಣ ರಿಯಲ್ ಎಸ್ಟೇಟ್ ದಂದೆಯಲ್ಲೂ ತೊಡಗಿಸಿಕೊಂಡಿದ್ದು, ಹತ್ಯೆಗೆ ಹಳೆ ವೈಷಮ್ಯವೂ ಇರಬಹುದೆನ್ನುವ ಶಂಕೆ ವ್ಯಕ್ತವಾಗಿದೆ.ಒಂಟಿಕೊಪ್ಪಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆ ದೇವು ಎಂಬವರ ಕೊಲೆಯ ಪ್ರತೀಕಾರವಾಗಿ ಈ ಹಲ್ಲೆ ನಡೆದಿದೆ ಎಂಬ ಶಂಕೆಯೂ ಸಾರ್ವಜನಿಕ ವಲಯದಲ್ಲಿ ಮೂಡಿದೆ ಎಂದು ಹೇಳಲಾಗುತ್ತಿದೆ.
ದೇವು ನಡೆಸುತ್ತಿದ್ದ ದಂಧೆಯನ್ನು ಈತ ಮುಂದುವರಿಸಿಕೊಂಡು ಹೋಗಿದ್ದ ಎನ್ನಲಾಗುತ್ತಿದೆ. ಪೊಲೀಸರ ತನಿಖೆಯ ನಂತರವೇ ಸತ್ಯಾಂಶ ಹೊರಬೀಳಲಿದೆ.
ಶಾಂತತೆಗೆ ಹೆಸರಾಗಿದ್ದ ಸಾಂಸ್ಕೃತಿಕ ನಗರಿಯಲ್ಲೀಗ ಹಾಡಹಗಲೇ ರಕ್ತದ ಕಲೆಗಳು ಕಾಣಿಸಿಕೊಳ್ಳತೊಡಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.












Click it and Unblock the Notifications