ರಿಜಿಸ್ಟರ್ ಮ್ಯಾರೇಜ್ ಆಗಿದ್ದರೂ ಮತ್ತೊಂದು ಮದುವೆ ಮಹೂರ್ತ, ಆಮೇಲಿನ ಕತೆ ಗೊತ್ತಾ?
ಮೈಸೂರು, ನವೆಂಬರ್ 14 : ಮದುವೆಗೆಂದು ತಯಾರಿದ್ದ ಕುಟುಂಬಕ್ಕೆ ವಧು ಶಾಕ್ ನೀಡಿ, ಮದುವೆ ಮುರಿಯಲು ಮುಂದಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ತಾನು ರಿಜಿಸ್ಟರ್ ಮದುವೆ ಮಾಡಿಕೊಂಡು ಇಂದು ಮತ್ತೊಬ್ಬರ ಜೊತೆ ಮದುವೆಗೆ ವಧು ಮುಂದಾಗಿ, ಕೊನೆ ಕ್ಷಣದಲ್ಲಿ ಮದುವೆಯನ್ನು ಮುರಿದುಕೊಂಡಿದ್ದಾಳೆ. ಚಿಕ್ಕಮಗಳೂರು ಮೂಲದ ಯುವತಿ ಕವಿತಾಗೆ ಇಂದು ಮೈಸೂರಿನಲ್ಲಿ ಟಿ. ನರಸೀಪುರ ಮೂಲದ ನಿಖಿಲ್ ಅರಸ್ ಅವರ ಜತೆ ಮದುವೆ ಆಗಬೇಕಿತ್ತು.
ಆದರೆ, ಈಗಾಗಲೇ ತನ್ನ ಪ್ರೇಮಿಯೊಂದಿಗೆ ರಿಜಿಸ್ಟರ್ ಮದುವೆ ಆಗಿರುವ ಕವಿತಾ, ಮನೆಯವರ ಒತ್ತಾಯದ ಮೇರೆಗೆ ನಿಖಿಲ್ ಅರಸ್ ಜೊತೆ ನಿಶ್ಚಿತಾರ್ಥವಾಗಿದ್ದರು. ಬುಧವಾರ ಮದುವೆ ಆಗಬೇಕಿತ್ತು. ಮಂಗಳವಾರ ರಾತ್ರಿ ಆರತಕ್ಷತೆ ಇತ್ತು. ಬುಧವಾರ ಬೆಳಗ್ಗೆ 6.45 ರಿಂದ 7.45ಕ್ಕೆ ಮೂಹೂರ್ತ ನಿಗದಿ ಮಾಡಿದ್ದರು.

ಮಂಗಳವಾರ ಕಲ್ಯಾಣ ಮಂಟಪಕ್ಕೆ ಬರುವುದಾಗಿ ಚಿಕ್ಕಮಗಳೂರಿನಿಂದ ಒಬ್ಬಳೇ ಹೊರಟಿದ್ದ ಕವಿತಾ, ಕಲ್ಯಾಣ ಮಂಟಪಕ್ಕೆ ಹೋಗುವ ವೇಳೆ ತನ್ನ ಪೋಷಕರಿಗೆ, "ನಾನು ಈಗಾಗಲೇ ರಿಜಿಸ್ಟರ್ ಮದುವೆ ಆಗಿದ್ದೇನೆ" ಎಂದು ಹೇಳಿದ್ದಾಳೆ. ಇದರಿಂದ ಕಂಗಾಲಾದ ಕವಿತಾ ಕುಟುಂಬ ಕಲ್ಯಾಣ ಮಂಟಪಕ್ಕೆ ಬಾರದೇ ದೂರ ಉಳಿದಿದೆ.

ಕವಿತಾಳ ನಡವಳಿಕೆಯಿಂದ ವರ ನಿಖಿಲ್ ಅರಸ್ ಕುಟುಂಬ ಕಕ್ಕಾಬಿಕ್ಕಿಯಾಗಿದೆ. ವಧುವಿಗಾಗಿ ಕಲ್ಯಾಣ ಮಂಟಪದಲ್ಲೇ ವರನ ಸಂಬಂಧಿಕರು ಕಾದಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರುವ ಕವಿತಾಳನ್ನು ಮನವೊಲಿಸಲು ವರನ ಕುಟುಂಬ ಹಾಗೂ ಕವಿತಾ ಪೋಷಕರು ಮುಂದಾಗಿದ್ದಾರೆ.












Click it and Unblock the Notifications