ಮೈಸೂರಿನಲ್ಲಿ ಮಂಗಳೂರು ಚಲೋ ಜಾಥಾ: ಪ್ರತಾಪ್ ಸಿಂಹ ಬಂಧನ
ಮೈಸೂರು, ಸೆಪ್ಟೆಂಬರ್ 6: ಮಂಗಳೂರಿನಲ್ಲಿ ಹಿಂದೂಪರ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ಜಾಥಾಗೆ ಪೊಲೀಸರು ತಡೆಯೊಡ್ಡಿದ್ದು, ಮೈಸೂರಿನ ಗಾಂಧಿ ಚೌಕದಲ್ಲಿ ಜಾಥಾ ಆರಂಭಿಸಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಸೂಚನೆ ಧಿಕ್ಕರಿಸಿ ಹೊರಡಲು ಯತ್ನಿಸಿದಾಗ ಸಂಸದ ಪ್ರತಾಪ್ ಸಿಂಹ ಸೇರಿದಂತೆ ನಂದೀಶ್ ಪ್ರೀತಂ, ಹೆಚ್.ವಿ.ರಾಜೀವ್, ಎಸ್.ಎ.ರಾಮದಾಸ್ ಫಣೀಶ್, ನಾಗೇಂದ್ರ, ಡಾ.ಬಿ.ಹೆಚ್. ಮಂಜುನಾಥ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ.

ಇತ್ತ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಬೈಕ್ ಜಾಥಾ ನಡೆಸುತ್ತಿರುವುದು ಸರಿಯಲ್ಲ ಎಂದು ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಸ್ವತಃ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಸುದ್ದಿಗೋಷ್ಠಿ ನಡೆಸಿ ಜಾಥಾದಲ್ಲಿ ಪಾಲ್ಗೊಂಡವರ ಮೇಲೆ ರೌಡಿಶೀಟರ್ ತೆರೆಯಲಾಗುತ್ತದೆ. ಬೈಕ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ನಿಷೇಧಾಜ್ಞೆ ಉಲ್ಲಂಘನೆ ಆರೋಪ ಹೊರಿಸಲಾಗುತ್ತದೆ. ಬಂಧಿಸಿ ತಕ್ಷಣ ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಎಂದಿದ್ದರು.
ಅದರಂತೆ ಮಂಗಳವಾರ ಸಂಜೆಯ ವೇಳೆ ಜಿಲ್ಲಾಧಿಕಾರಿ ಡಿ.ರಂದೀಪ್ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಶುಕ್ರವಾರದವರೆಗೂ ನಿಷೇಧಾಜ್ಞೆ ಜಾರಿ ಆದೇಶ ಹೊರಡಿಸಿದ್ದರು. ಏತನ್ಮಧ್ಯೆ ಬಿಜೆಪಿ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ರಾಜ್ಯದ ವಿವಿಧೆಡೆಗಳಲ್ಲಿ ಬೈಕ್ ಜಾಥಾಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ರಾಜ್ಯ ಸರ್ಕಾರ ನಮ್ಮ ಹೋರಾಡುವ ಹಕ್ಕನ್ನೇ ಕಸಿದುಕೊಂಡಿದೆ. ನಾವು ಬೈಕ್ ಜಾಥಾ ನಡೆಸಿಯೇ ಸಿದ್ಧ ಎಂದಿದ್ದರಲ್ಲದೇ ಬುಧವಾರ ಬೆಳಿಗ್ಗೆ ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದರು. ಆದರೆ ಗಾಂಧಿ ಚೌಕದಲ್ಲಿ ಹೊರಟು ನಿಂತಾಗ ಪೊಲೀಸರು ಅವರನ್ನು ತಡೆದು ಬಂಧಿಸಿದ್ದಾರೆ. ಜಾಥಾಕ್ಕೆ ಹೊರಡುವವರನ್ನು ತಡೆಯಲು ಖುದ್ದು ನಗರ ಪೊಲೀಸ್ ಆಯುಕ್ತರೇ ರಸ್ತೆಗಿಳಿದಿದ್ದಾರೆ.












Click it and Unblock the Notifications