ಮೇಲುಕೋಟೆಯಲ್ಲಿ ಜರುಗಿದ ವೈಭವೋಪೇತ ವೈರಮುಡಿ ಉತ್ಸವ

Recommended Video

      ಮೇಲುಕೋಟೆಯಲ್ಲಿ ವೈಭವೋಪೇತ ವೈರಮುಡಿ ಉತ್ಸವ | Oneindia Kannada

      ಮೈಸೂರು, ಮಾರ್ಚ್ 18: ಚಂದ್ರಪ್ರಭೆ ಪ್ರಭಾವಳಿ ಮಧ್ಯದಲ್ಲಿ ಅಲಂಕಾರ ಸ್ವರೂಪಿಯಾಗಿದ್ದ ಚೆಲುವನಾರಾಯಣಸ್ವಾಮಿಗೆ ವಜ್ರಖಚಿತ ವೈರಮುಡಿ ಧಾರಣೆ ಮಾಡಲಾಯಿತು. ತಳಿರು, ತೋರಣ, ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ದೇವಾಲಯದ ಚತುರ್ವೀದಿಯಲ್ಲಿ ವೈರಮುಡಿ ಉತ್ಸವ ಭಕ್ತರ ಹರ್ಷೋದ್ಗಾರದೊಂದಿಗೆ ಸಂಚರಿಸಿತು.

      ದಕ್ಷಿಣ ಬದರೀಕ್ಷಾಶ್ರಮ, ಯದುಗಿರಿ ಎಂದೇ ಪ್ರಖ್ಯಾತಿ ಪಡೆದಿರುವ ಮೇಲುಕೋಟೆ ಪಟ್ಟಣದಲ್ಲಿ ಭಾನುವಾರ ರಾತ್ರಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ವೈರಮುಡಿ ಉತ್ಸವ ದೇವಾಲಯದ ಹೊರಗೆ ಬಂದೊಡನೆ ಗೋವಿಂದ ನಾಮ ಜಪ ಮುಗಿಲು ಮುಟ್ಟಿತ್ತು.

      ಶ್ರೀದೇವಿ, ಭೂದೇವಿ ಸಮೇತ ಹೂವಿನ ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿದ್ದ ಚೆಲುವನನ್ನು ಕಣ್ತುಂಬಿಕೊಂಡ ಭಕ್ತ ಸಮೂಹದಲ್ಲಿ ಹರ್ಷದ ಹೊನಲು ಮೂಡಿತು. ರಾಜಬೀದಿಯ ಇಕ್ಕೆಲಗಳಲ್ಲಿ ಭಕ್ತಸಾಗರ ಸಾಲುಗಟ್ಟಿ ನಿಂತಿತ್ತು. ಕಟ್ಟಡಗಳ ಮೇಲೂ ನಿಂತು ಜನರು ಉತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದರು.

      ಉತ್ಸವ ಆರಂಭವಾಗುವುದಕ್ಕೂ ಮುನ್ನ ಗರುಡೋತ್ಸವ ನಡೆಯಿತು. ಗರುಡನೇ ನೇರವಾಗಿ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಧಾರಣೆ ಮಾಡುವ ಸಾಂಕೇತವಾಗಿ ಗರುಡೋತ್ಸವ ನಡೆಯಿತು. ನಂತರ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಪ್ರಥಮ ಪೂಜೆ ನಡೆದು ವೈರಮುಡಿ ಉತ್ಸವ ದೇವಾಲಯದಿಂದ ರಾಜಬೀದಿಗೆ ಪ್ರವೇಶ ಪಡೆಯಿತು.

      ಮೇಲುಕೋಟೆಯಲ್ಲಿರುವ ಎಲ್ಲ ದೇವಾಲಯಗಳಿಗೂ ಆಕರ್ಷಕ ದೀಪಾಲಂಕಾರ ಮಾಡಲಾಗಿತ್ತು. ಕಲ್ಯಾಣಿ ಬಣ್ಣದ ಬೆಳಕಿನ ಕಿರಣಗಳಿಂದ ವಿಶೇಷ ರೂಪ ಪಡೆದಿತ್ತು. ಅಕ್ಕ-ತಂಗಿ ಕೊಳ, ಯೋಗಾನರಸಿಂಹಸ್ವಾಮಿ ಬೆಟ್ಟ ಹಾಗೂ ಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತಲೂ ಇರುವ ಸನ್ನಿಧಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

      ವೈರಮುಡಿ ಮೆರವಣಿಗೆಗೆ ಚಾಲನೆ

      ವೈರಮುಡಿ ಮೆರವಣಿಗೆಗೆ ಚಾಲನೆ

      ಮೇಲುಕೋಟೆ ಪ್ರವೇಶಿಸುವ ಎಲ್ಲ ರಸ್ತೆಗಳಿಗೂ ದೀಪಾಲಂಕಾರದಿಂದ ವಿಶೇಷ ರೂಪ ನೀಡಲಾಗಿತ್ತು. ರಸ್ತೆ ಬದಿಯಲ್ಲಿರುವ ಅಂಗಡಿ ಸಾಲುಗಳನ್ನು ಬಂದ್‌ ಮಾಡಲಾಗಿತ್ತು. ಜನರು ಅಂಗಡಿಗಳ ಮೆಟ್ಟಿಲುಗಳ ಮೇಲೆ ಕುಳಿತು ಉತ್ಸವವನ್ನು ಕಣ್ತುಂಬಿಕೊಂಡರು. ರಾತ್ರಿ ಆರಂಭವಾದ ಉತ್ಸವ ಮರುದಿನ ನಸುಕಿನವರೆಗೂ ನಡೆಯಿತು. ಮಂಡ್ಯದ ಜಿಲ್ಲಾ ಖಜಾನೆಯಲ್ಲಿ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಪೂಜೆ ಸಲ್ಲಿಸುವ ಮೂಲಕ ವೈರಮುಡಿ, ರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಹೊರತೆಗೆದರು. ನಂತರ ಮಂಡ್ಯದ ಲಕ್ಷ್ಮಿ ಜನಾರ್ದನ ದೇವಾಲಯದಲ್ಲಿ ಭಕ್ತರು ಪೂಜೆ ಸಲ್ಲಿಸಿ ವೈರಮುಡಿ ಮೆರವಣಿಗೆಗೆ ಚಾಲನೆ ನೀಡಿದರು.

       ಮೆರವಣಿಗೆ ಮೂಲಕ ತರಲಾಯಿತು

      ಮೆರವಣಿಗೆ ಮೂಲಕ ತರಲಾಯಿತು

      ಮೇಲುಕೋಟೆಯವರೆಗೆ ಮಾರ್ಗಮಧ್ಯೆ ಸಿಗುವ ಹಳ್ಳಿಗಳ ಜನರು ವೈರಮುಡಿ, ರಾಜಮುಡಿ ಪೆಟ್ಟಿಗೆಗೆ ವಿಶೇಷ ಪೂಜೆ ಸಲ್ಲಿಸಿದರು.ಮಾರ್ಗದಲ್ಲಿ ಇದ್ದ ಐತಿಹಾಸಿಕ ವೈರಮುಡಿ ಮಂಟಪಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಕೆಲ ಕಾಲ ಶ್ರೀರಂಗಪಟ್ಟಣದ ದಸರಾ ಮಂಟಪದಲ್ಲಿ ಆಭರಣ ಪೆಟ್ಟಿಗೆ ಇಟ್ಟು ಪೂಜೆ ಸಲ್ಲಿಸಲಾಯಿತು. ಪೊಲೀಸ್‌ ಭದ್ರತೆಯೊಂದಿಗೆ ವಿಶೇಷ ವಾಹನದಲ್ಲಿ ವೈರಮುಡಿ ಪೆಟ್ಟಿಗೆ ಮೇಲುಕೋಟೆ ತಲುಪಿತು. ಹೊರವಲಯದಲ್ಲಿರುವ ವಿರಾಂಜನೇಯ ದೇವಾಲಯದ ಬಳಿ ಪೆಟ್ಟಿಗೆ ಇಳಿಸಿ ಭದ್ರತೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ತಂಡಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಹೂವಿನ ಪಲ್ಲಕ್ಕಿಯಲ್ಲಿ ಪೆಟ್ಟಿಗೆಯನ್ನು ಇಟ್ಟು ದೇವಾಲಯಕ್ಕೆ ಮೆರವಣಿಗೆ ಮೂಲಕ ತರಲಾಯಿತು.

       ವಿವಿಧೆಡೆ ಎಲ್‌ಇಡಿ ಪರದೆ ಅಳವಡಿಕೆ

      ವಿವಿಧೆಡೆ ಎಲ್‌ಇಡಿ ಪರದೆ ಅಳವಡಿಕೆ

      ಸಂಜೆ ಮೆರವಣಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ಪ್ರವೇಶಿಸಿತು. ನಂತರ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿಯ ಸಮ್ಮುಖದಲ್ಲಿ ಪೆಟ್ಟಿಗೆಯಿಂದ ಆಭರಣ ಹೊರತೆಗೆಯಲಾಯಿತು. ಪರ್ಕಾವಳಿ ನಂತರ ವೈರಮುಡಿ ಉತ್ಸವ ರಾತ್ರಿ ದೇವಾಲಯದಿಂದ ರಾಜಬೀದಿ ಪ್ರವೇಶ ಪಡೆಯಿತು. ದೇವಾಲಯದ ಒಳಗೆ ನಡೆಯುತ್ತಿರುವ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ವೀಕ್ಷಣೆ ಮಾಡಲು ವಿವಿಧೆಡೆ ಎಲ್‌ಇಡಿ ಪರದೆ ಹಾಕಲಾಗಿತ್ತು. ವೈರಮುಡಿ ಪೆಟ್ಟಿಗೆ ತೆರೆಯುವ ಪರ್ಕಾವಳಿ, ಪೂಜಾ ಕೈಂಕರ್ಯವನ್ನು ಜನರು ಹೊರಗೆ ನಿಂತೇ ಕಣ್ತುಂಬಿಕೊಂಡರು.

       ಉತ್ಸವದಲ್ಲಿ ಭಾಗವಹಿಸಿದ್ದ ಯದುವೀರ್

      ಉತ್ಸವದಲ್ಲಿ ಭಾಗವಹಿಸಿದ್ದ ಯದುವೀರ್

      ಮೈಸೂರು ರಾಜಮನೆತನಕ್ಕೂ, ಮೇಲುಕೋಟೆಗೂ 600 ವರ್ಷಗಳ ಇತಿಹಾಸವಿದೆ. ಚೆಲುವನಾರಾಯಣ ಸ್ವಾಮಿಗೆ ಮೈಸೂರು ಅರಸರು ರಾಜಮುಡಿ ಅರ್ಪಿಸಿದ್ದಾರೆ. ಮೊದಲ ಬಾರಿಗೆ ವೈರಮುಡಿ ಉತ್ಸವದಲ್ಲಿ ಭಾಗವಹಿಸುತ್ತಿರುವುದು ನನಗೆ ಖುಷಿ ತಂದಿದೆ. ನಮ್ಮ ವಂಶದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನನ್ನ ಜವಾಬ್ದಾರಿ ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

       ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ವಿತರಣೆ

      ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ವಿತರಣೆ

      ಉತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ಉಚಿತವಾಗಿ ಪುಳಿಯೊಗರೆ ವಿತರಣೆ ಮಾಡಲಾಯಿತು. ಪ್ರವೇಶದ್ವಾರದಿಂದ ರಸ್ತೆಯುದ್ದಕ್ಕೂ ಆಟೊದಲ್ಲಿ ಪುಳಿಯೊಗರೆ ಇಟ್ಟು ವಿತರಣೆ ಮಾಡಲಾಯಿತು. ಭಕ್ತರನ್ನು ಕರೆದು ಪುಳಿಯೊಗರೆ ವಿತರಣೆ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದು. ರಸ್ತೆಯುದ್ದಕ್ಕೂ ಕುಡಿಯುವ ನೀರಿನ ಕ್ಯಾನ್ ಇಡಲಾಗಿತ್ತು. ತಿಂಡಿಯ ತಟ್ಟೆಗಳನ್ನು ಇಡಲು ತೊಟ್ಟಿ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿತ್ತು. ಪಾದಯಾತ್ರೆಯ ಮೂಲಕ ಮೇಲುಕೋಟೆ ತಲುಪುವ ಭಕ್ತರಿಗೆ ದಾರಿಯುದ್ದಕ್ಕೂ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು.

       ಈ ಬಾರಿ ಭಕ್ತರ ಸಂಖ್ಯೆ ಕ್ಷೀಣಿಸಿತ್ತು

      ಈ ಬಾರಿ ಭಕ್ತರ ಸಂಖ್ಯೆ ಕ್ಷೀಣಿಸಿತ್ತು

      ಉತ್ಸವದಲ್ಲಿ ಮೈಸೂರು ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಇನ್ಫೋಸಿಸ್‌ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಭಾಗವಹಿಸಿದ್ದರು. ಚುನಾವಣಾ ನೀತಿ ಸಂಹಿತೆ ಇರುವ ಕಾರಣ ರಾಜಕಾರಣಿಗಳು ಭಾಗವಹಿಸಲಿಲ್ಲ. ಈ ಬಾರಿ ಪ್ರತಿ ವರ್ಷಕ್ಕಿಂತ ಭಕ್ತರ ಸಂಖ್ಯೆ ಕ್ಷೀಣಿಸಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+