ಹೈಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ: ಸಂತೋಷ್ ಹೆಗ್ಡೆ
ಮೈಸೂರು, ಆಗಸ್ಟ್ 12: "ಹೈಕೋರ್ಟ್ ತೀರ್ಪಿನಿಂದ ಲೋಕಾಯುಕ್ತಕ್ಕೆ ಮತ್ತೆ ಬಲ ಬಂದಿದೆ. ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ. ಮೂರು ಪಕ್ಷದವರೂ ಈ ತೀರ್ಪುನ್ನು ವಿರೋಧಿಸಬಹುದು" ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಎಸಿಬಿಯಿಂದ ಒಬ್ಬ ಜನಪ್ರತಿನಿಧಿಗೆ ಶಿಕ್ಷೆ ಆಗಿಲ್ಲ. ಒಬ್ಬ ಶಾಸಕನನ್ನು ಕೂಡ ವಿಚಾರಣೆ ಮಾಡಿಲ್ಲ. ಆದರೆ ಈಗ ಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿದೆ. ಹೈಕೋರ್ಟ್ ತೀರ್ಪು ಲೋಕಾಯುಕ್ತಕ್ಕೆ ಮತ್ತೆ ಬಲವನ್ನು ತಂದುಕೊಟ್ಟಿದೆ. ಇದರಿಂದ ಭ್ರಷ್ಟಾಚಾರಿಗಳಿಗೆ ನಡುಕ ಹುಟ್ಟಿದೆ" ಎಂದು ತಿಳಿಸಿದ್ದಾರೆ.
"ಹೈಕೋರ್ಟ್ ತೀರ್ಪು ವಿರೋಧಿಸಿದ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋದರೆ ಅಧಿಕಾರ ಕಳೆದುಕೊಳ್ಳುವ ಭಯ ಇದೆ. ಚುನಾವಣೆ ಸಮೀಪಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಹಾಗಾಗಿ ಹಿಂಬಾಲಕರು ಹಿಂಬಾಗಿಲ ಮೂಲಕ ಸುಪ್ರೀಂಮೊರೆ ಹೋಗಬಹುದು. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ, ಶೇ 40 ಕಮಿಷನ್ ಆಸೆಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಸೈಲೆಂಟ್ ಆಗಿದ್ದಾರೆ" ಎಂದು ಆರೋಪಿಸಿದರು.

ಎಸಿಬಿಯಿಂದ ಒಬ್ಬ ಜನಪ್ರತಿನಿಧಿಗೆ ಶಿಕ್ಷೆ ಆಗಿಲ್ಲ; "ಒಬ್ಬ ಶಾಸಕನನ್ನು ಕೂಡ ವಿಚಾರಣೆ ಮಾಡಿಲ್ಲ. ಸಾಮಾನ್ಯ ಜನರು ತಪ್ಪು ಮಾಡಿದರೆ ಹೀಗೆ ನಡೆದುಕೊಳ್ಳುತ್ತಿದ್ದಾರಾ?. ಸರಕಾರಿ ಅಧಿಕಾರಿಗಳು ತನಿಖೆ ಮಾಡಬೇಕಾದರೆ ಸರಕಾರದ ಅನುಮತಿ ಕೇಳುತ್ತಾರೆ. ಇದು ಬ್ರಿಟಿಷ್ ಆಡಳಿತದ ಕಾನೂನು. ಅಂದಿನ ಬ್ರಿಟಿಷರು ತಮ್ಮ ಪ್ರಾಬಲ್ಯಕ್ಕಾಗಿ ಈ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ನಮ್ಮದೇ ಸರಕಾರ ಇರುವಾಗ ಅನುಮತಿ ಯಾಕೆ ಬೇಕು?" ಎಂದು ಪ್ರಶ್ನಿಸಿದರು.
"ಭ್ರಷ್ಟರಿಗೆ ಜನ ಮಣೆ ಹಾಕ್ತಾರೆ. ಮೂರು ಪಕ್ಷಗಳಲ್ಲೂ ಭ್ರಷ್ಟಾಚಾರಿಗಳಿದ್ದು, ಮೂರು ಪಕ್ಷದವರು ಲೋಕಾಯುಕ್ತಕ್ಕೆ ವಿರೋಧಿಯಾಗಿದ್ದಾರೆ. ಜೈಲಿಗೆ ಹೋಗಿ ಬಂದವರಿಗೆ ಸೇಬಿನ ಹಾರ ಹಾಕುತ್ತಾರೆ. ಭ್ರಷ್ಟರಿಗೆ, ಭ್ರಷ್ಟಾಚಾರಿಗಳಿಗೆ ಜೈಕಾರ ಹಾಕಲಾಗುತ್ತದೆ. ಏರ್ಪೋರ್ಟ್ ಹೊರಗೆ ಹೋಗಿ ಸ್ವಾಗತ ಕೋರುತ್ತಾರೆ. ಸದ್ಯ ಜನರ ಮನಃಸ್ಥಿತಿ ಹಣ, ಅಧಿಕಾರದ ಹಿಂದೆ ಸಾಗಿದೆ" ಎಂದು ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

"ಲೋಕಾಯುಕ್ತ ಆಗಿದ್ದಾಗ ಸಾಕಷ್ಟು ಪ್ರಕರಣಗಳಲ್ಲಿ ಶಿಕ್ಷೆ ಆಗಿತ್ತು. ಆದರೆ, ಎಸಿಬಿ ಬಂದ ಬಳಿಕ ಯಾವೊಬ್ಬ ರಾಜಕಾರಣಿ ಮೇಲೆ, ಅಧಿಕಾರಿಯ ಮೇಲೆ ಕ್ರಮ ಜರುಗಿಸಲಿಲ್ಲ. ಎಸಿಬಿಯಲ್ಲಿ ಸಾವಿರಾರು ಕೇಸ್ಗಳು ದಾಖಲಾಗಿವೆ. ಆದರೆ ಯಾರಿಗೂ ಶಿಕ್ಷೆ ಆಗಿಲ್ಲ. ಈ ನಿಟ್ಟಿನಲ್ಲಿ ಲೋಕಾಯುಕ್ತಕ್ಕೆ ಸ್ವಾತಂತ್ರ್ಯವಾದ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಿ ಬಲಪಡಿಸಬೇಕು" ಎಂದು ತಿಳಿಸಿದರು.












Click it and Unblock the Notifications