ಮೈಸೂರು ಮೃಗಾಲಯದಲ್ಲಿ ಗುಜರಾತ್ ನಿಂದ ತಂದಿದ್ದ ಸಿಂಹಿಣಿ ಸಾವು
ಮೈಸೂರು, ಡಿಸೆಂಬರ್ 28 : ಗಂಡು ಸಿಂಹದೊಂದಿಗೆ ಕಾದಾಡಿ ಗಾಯಗೊಂಡಿದ್ದ ಹೆಣ್ಣು ಸಿಂಹ 'ರನಿತಾ' ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮೃತಪಟ್ಟಿದೆ.
ಗುಜರಾತಿನ ಜುನಾಗಡ್ ನಗರದ ಸಕ್ಕರ್ ಭಾಗ್ ಮೃಗಾಲಯದಿಂದ 2016ರ ಆಗಸ್ಟ್ 4ರಂದು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮೈಸೂರಿನ ಮೃಗಾಲಯಕ್ಕೆ ತರಲಾಗಿತ್ತು. ಡಿ.26ರಂದು ಗಂಡು ಸಿಂಹದೊಂದಿಗೆ ಕಾದಾಡಿದ ರನಿತಾಗೆ ಬಲ ಮತ್ತು ಎಡ ಭುಜಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿತ್ತು.

ಆ ನಂತರ ಡಿ.27ರಂದು ಆಹಾರ ಸೇವಿಸುವುದಕ್ಕೆ ನಿರಾಸಕ್ತಿ ತೋರಿಸಿದ್ದನ್ನು ಗಮನಿಸಿ, ಕೂಡಲೇ ಚಿಕಿತ್ಸೆ ನೀಡಲು ಮೃಗಾಲಯ ವೈದ್ಯರು ಮುಂದಾಗಿದ್ದರು. ರಕ್ತ ಪರೀಕ್ಷೆಯ ವರದಿಯಂತೆ ಸಾಮಾನ್ಯ ಸೋಂಕು ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲಾಯಿತು.
ಆದರೂ ಸಿಂಹದ ಆರೋಗ್ಯದಲ್ಲಿ ಯಾವುದೇ ಸುಧಾರಣೆಯಾಗದ ಹಿನ್ನೆಲೆಯಲ್ಲಿ ರಕ್ತ ಮತ್ತು ಅಂಗಗಳ ಮಾದರಿಯನ್ನು ಹೈದರಾಬಾದಿನ ಸಿಸಿಎಂಬಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಸಿಂಹದ ಚೇತರಿಕೆಗಾಗಿ ತಜ್ಞರನ್ನು ಕರೆಸಿ ತೀವ್ರ ಪರೀಕ್ಷೆಗಳನ್ನು ನಡೆಸಲಾಯಿತು.
ಆದರೆ ಹಿಂದಿನ ಕಾಲುಗಳಿಗೆ ಪಾರ್ಶ್ವವಾಯು ಪೀಡಿತವಾದ ರನಿತಾ ನಡೆಯಲಾರದೆ ಮೈ ಚಾಚಿಕೊಂಡಿತ್ತು. ಅಲ್ಲದೇ ಒಂದು ವಾರದಿಂದ ಆಹಾರ ಸೇವನೆಯನ್ನೂ ತ್ಯಜಿಸಿತ್ತು. ತಜ್ಞರ ಸಲಹೆಯಂತೆ ಎಲ್ಲ ಚಿಕಿತ್ಸೆಗಳನ್ನು ನೀಡಿದರೂ ಆರೋಗ್ಯದಲ್ಲಿ ಚೇತರಿಕೆಯಾಗದೆ ಡಿ.27ರ ಸಂಜೆ 4.30ಕ್ಕೆ ಮೃತಪಟ್ಟಿದೆ.












Click it and Unblock the Notifications