ಮೈಸೂರಿನಲ್ಲಿ ಪ್ರೇಮಕವಿ ಖಲೀಲ್ ಗಿಬ್ರಾನ್ ಬರ್ತಡೇ
ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಯಲ್ಲಿ ಅದ್ಭುತವಾಗಿ ಬರೆಯುತ್ತಿದ್ದ ಲಿಬಿಯಾದ ಕವಿ, ಕಲಾವಿದ, ಬರಹಗಾರ ಖಲೀಲ್ ಗಿಬ್ರಾನ್ ಅವರ ಹುಟ್ಟುಹಬ್ಬವನ್ನು ಮೈಸೂರಿನಲ್ಲಿ ಜ.6ರಂದು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಈ ರೋಮ್ಯಾಂಟಿಕ್ ಕವಿಯನ್ನು ಲಿಬಿಯಾದಲ್ಲಿ ಸಾಹಿತ್ಯಲೋಕದ ಹೀರೋ ಎಂದೇ ಇಂದಿಗೂ ಕರೆಯಲಾಗುತ್ತದೆ.
ಕೇವಲ 48 ವರ್ಷ ಬದುಕಿದ್ದ ಪ್ರೇಮ ಕವಿ ಖಲೀಲ್ ಗಿಬ್ರಾನ್ (ಜ. 6, 1883 - ಏ. 10, 1931) ಕಿರಿಯ ಕವಿಗಳ ಪಾಲಿನ ಹೀರೋ, ಆತನ ಹುಟ್ಟುಹಬ್ಬವೆಂಬುದೇ ದೊಡ್ಡ ಸಂಭ್ರಮ. ಈ ಹಬ್ಬವು ನಮ್ಮ ಹರುಷವನ್ನು ಇಮ್ಮಡಿಗೊಳಿಸುವಂತಹದ್ದು; ಲೋಕದ ಚೇಷ್ಟೆಗೆ ಕವಿ ಪರಿಯನ್ನು ಮತ್ತೆ ಮತ್ತೆ ಮೆಲುಕುಹಾಕುವಂತಹದ್ದು.
ಜನವರಿ 6ರಂದು 'ದಿ ಪಾಫೆಟ್' ಕೃತಿಯ ಕುರಿತು ವಿಶೇಷ ಉಪನ್ಯಾಸ, ಈ ಕೃತಿ ಕೆಲ ಭಾಗಗಳ ಓದು ಹಾಗೂ ಈ ಕೃತಿಗೆ ಕಲೆಯ ಸ್ಪಂದನವನ್ನು ನೀಡುವ ಒಂದು ಪುಟ್ಟ ಕಾರ್ಯಕ್ರಮವನ್ನು ಸಂಜೆ 5 ಗಂಟೆಗೆ ಬಿ.ಎಂ.ಶ್ರೀ ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮೈಸೂರಿನ ಹೆಮ್ಮೆಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗವಿದೆ. ಜೊತೆಗೆ ಬಳಗ ಮೈಸೂರು ಇವರು ಸಹ ಕೈಜೊಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಲು ಕವಿ ಹಾಗೂ ರಂಗಕರ್ಮಿ ಕೆ.ವೈ.ನಾರಾಯಣ ಸ್ವಾಮಿ ಆಗಮಿಸುತ್ತಿದ್ದಾರೆ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಆರ್. ರಾಮಕೃಷ್ಣ ವಹಿಸುವರು. ದಿ ಪ್ರಾಫೆಟ್ ಕೃತಿಗೆ ಚಿತ್ರ ಸ್ಪಂದನವನ್ನು ಕಲಾವಿದ ಅನಿಲ್ ಕುಮಾರ್ ಭೋಗಶೆಟ್ಟಿ ನೀಡಲಿದ್ದಾರೆ.
ಕಲಾವಿದರೊಳಗೆ ಸದಾ ಕಾಡುವ ರೂಪಕವಾಗಿ ಖಲೀಲ್ ಗಿಬ್ರಾನ್ ಕಂಡರೆ, ಅವರ ಈ 'ದಿ ಪ್ರಾಫೆಟ್' ಕಾವ್ಯ ರಸಿಕರಿಗೆ ಕಾವ್ಯ ಸನ್ನಧಿಯಾಗಿ ಭಾಸವಾಗುವುದು. ಬನ್ನಿ, ಈ ಕಾರ್ಯಕ್ರಮಕ್ಕೆ ನೀವು ನಿಮ್ಮ ಸ್ನೇಹಿತರೊಂದಿಗೆ. ನಾವು ನಿಮ್ಮನ್ನು ಬರಮಾಡಿಕೊಳ್ಳಲು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ದೊಡ್ಡಬಾಗಿಲಿನ ಬಳಿ ಕಾಯುತ್ತಿರುತ್ತೇವೆ..
ಇಂತಿ
ಅಕ್ಕರೆಯಿಂದ
ಸಮಾಜವಾದಿ
ಅಧ್ಯಯನ
ಕೇಂದ್ರ
ಟ್ರಸ್ಟ್
(ರಿ),
ಮೈಸೂರು