ಮೈಸೂರಲ್ಲಿ ತಂಬಾಕು ಬ್ಯಾರನ್ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ
ಮೈಸೂರು, ಆಗಸ್ಟ್ 9: ತಂಬಾಕು ಹದ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬ್ಯಾರನ್ ಹೊತ್ತಿ ಉರಿದ ಪರಿಣಾಮ ತಂಬಾಕು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಪದಾರ್ಥಗಳು ನಾಶವಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಭೋಗನಹಳ್ಳಿ ಗ್ರಾಮದ ಬಳಿ ನಡೆದಿದೆ.
ಗ್ರಾಮದ ನಿವಾಸಿ ಜೈಕರ್ ಎಂಬುವರಿಗೆ ಸೇರಿದ ಬ್ಯಾರನ್ನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಇದರಿಂದ ಅವರ ಪರಿಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬೋಗನಹಳ್ಳಿಯಲ್ಲಿ ಜಮೀನು ಹೊಂದಿರುವ ರೈತ ಜೈಕರ್ ಅವರು ಜಮೀನಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ತಂಬಾಕು ಕೃಷಿ ಮಾಡಿದ್ದರು. ಇದೀಗ ತಂಬಾಕು ಎಲೆ ಕೊಯ್ಲು ಮಾಡಿ ಬ್ಯಾರನ್ನಲ್ಲಿ ಹದ ಮಾಡುವ ಕಾಲವಾಗಿದ್ದು ಅದರಂತೆ ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು.

ಎಂದಿನಂತೆ ಮಧ್ಯಾಹ್ನ 12 ಸಮಯದಲ್ಲಿ ತಂಬಾಕು ಹದ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಉರಿಯ ತೊಡಗಿದೆ. ಇದನ್ನು ನೋಡಿದ ಜೈಕರ್ ಹಾಗೂ ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸುವ ಕಾರ್ಯಕ್ಕೆ ಮುಂದಾದರೂ ಪ್ರಯೋಜನವಾಗಿಲ್ಲ. ಆ ನಂತರ ಪಿರಿಯಾಪಟ್ಟಣದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿಲಾಯಿತಾದರೂ ಅಷ್ಟರಲ್ಲಾಗಲೆ ತಂಬಾಕು ಬ್ಯಾರನ್ ಹಾಗೂ ಬ್ಯಾರನ್ಗೆ ಹೊಂದಿಕೊಂಡಂತಿದ್ದ ಮನೆಗೂ ಬೆಂಕಿ ತಗುಲಿದೆ.

ಬೆಂಕಿ ಅವಘಡದಿಂದ 2 ಲಕ್ಷ ರೂ.ಗಳ ತಂಬಾಕು ಮತ್ತು ಬ್ಯಾರನ್, ಮನೆಗೆ ಹಾನಿಯಾಗಿದೆ. ಸಾಲ ಮಾಡಿ ತಂಬಾಕು ಬೆಳೆದಿದ್ದು ಕೈಯ್ಯಿಂದ ಬಾಯಿಗೆ ಬರುವ ವೇಳೆಗೆ ಬೆಂಕಿ ಅವಘಡ ಸಂಭವಿಸಿರುವುದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.












Click it and Unblock the Notifications