ಮಹಿಷಾ ಅಸುರನಲ್ಲ, ದೇವತೆಗಳೆಲ್ಲಾ ಕುಡುಕರು: ಕೆ.ಎಸ್.ಭಗವಾನ್
ಮೈಸೂರು, ಅಕ್ಟೋಬರ್. 7: ಚಾಮುಂಡಿ ದಸರಾಗೆ ಸೆಡ್ಡು ಹೊಡೆದ ಪ್ರಗತಿಪರ ಚಿಂತಕರು ಇಂದು ಭಾನುವಾರ (ಅ.07)ಮೈಸೂರಿನಲ್ಲಿ ಚಾಮುಂಡಿ ದಸರಾಗೆ ಪ್ರತಿಯಾಗಿ ಮಹಿಷ ದಸರಾಗೆ ಚಾಲನೆ ನೀಡಿದರು.
ಮಹಿಷಾ ದಸರಾ ಆಚರಣಾ ಸಮಿತಿ ವತಿಯಿಂದ ಮಹಿಷ ದಸರಾ ಆಚರಿಸಿದ ಚಿಂತಕರಾದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಜ್ಞಾನ ಪ್ರಕಾಶ ಸ್ವಾಮೀಜಿ, ಸಾಹಿತಿ ಕೆ.ಎಸ್.ಭಗವಾನ್, ಮಹೇಶ್ ಚಂದ್ರಗುರು ಭಾಗಿಯಾಗಿದ್ದರು.
ಇನ್ನು ಇದೇ ವೇಳೆ ಮಾತನಾಡಿದ ಚಿಂತಕ ಕೆ. ಎಸ್ ಭಗವಾನ್, ಮಹಿಷಾಸುರ ರಾಕ್ಷಸನಲ್ಲ, ಸರ್ವಜನಾಂಗದ ಏಳಿಗೆಗಾಗಿ ಇದ್ದವನು. ಆತ ರಾಕ್ಷಸನಾಗಿದ್ದರೆ ಅವನ ಹೆಸರನ್ನೇಕೆ ಮೈಸೂರಿಗೆ ಇಟ್ಟರು. ಮಹಿಷಾಸುರ ಬುದ್ಧನ ಮಹಾನ್ ಅನುಯಾಯಿ ಎಂದು ಭಾವಿಸಬೇಕು. ನಮ್ಮ ಜನ ಓದಬೇಕು, ಇತಿಹಾಸವನ್ನು ತಿಳಿದುಕೊಳ್ಳಬೇಕು.

ಹೊಸ ಹೊಸ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಪುರೋಹಿತಶಾಹಿಗಳ ಮಾತು ಕೇಳಿ ಮಹಿಷನ ಈ ವಿಗ್ರಹ ಈ ರೂಪಿತವಾಯಿತು. 1950ರಲ್ಲಿ ಜಯಚಾಮರಾಜ ಒಡೆಯರ್ ಅವರು ರಾಕ್ಷಸ ರೂಪದ ಮಹಿಷಾಸುರನ ವಿಗ್ರಹ ನಿರ್ಮಾಣ ಮಾಡಿಸಿದರು.
ನೀವು ಪೂಜೆ ಮಾಡುವ ದೇವತೆಗಳೆಲ್ಲಾ ಕುಡುಕರು. ಮಹಿಷಾ ಅಸುರನಲ್ಲ, ಉತ್ತಮವಾಗಿ ಆಡಳಿತ ನಡೆಸಿದ ರಾಜ. ಆತ ರಾಜನಾಗದಿದ್ದರೆ ಯಾಕೆ ಮೈಸೂರಿಗೆ ಮಹಿಷನ ಹೆಸರಿಡುತ್ತಿದ್ದರು. ಉತ್ತಮವಾಗಿ ಆಡಳಿತ ನಡೆಸಿದ ರಾಜನನ್ನ ಅಸುರ ಎಂದು ಬಿಂಬಿಸಿದ್ದಾರೆ. ನಾವು ಮಹಿಷನ ಅನುಯಾಯಿಗಳು ಅವರ ಆಚರಣೆಯನ್ನು ನಾವು ಮಾಡುತ್ತೇವೆ.
ಮಹಿಷ ಒಬ್ಬ ಶೂದ್ರ ಎಂಬ ಕಾರಣಕ್ಕೆ ಆತನನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ. ಸದ್ಯ ಚಾಮುಂಡಿ ಬೆಟ್ಟದ ಮೇಲಿನ ಮಹಿಷ ಪ್ರತಿಮೆ ಬದಲಾಯಿಸುವ ಬಗ್ಗೆ ಸ್ಥಳೀಯರೊಂದಿಗೆ ಸಮಾಲೋಚಿಸುವೆ. ಮಹಿಷ ರಾಜನಾಗಿ ಸಾಕಷ್ಟು ಒಳ್ಳೆ ಕೆಲಸ ಮಾಡಿದ್ದಾನೆ. ಅದನ್ನು ತಿಳಿಸುವ ಸಲುವಾಗಿ ಮಹಿಷ ದಸರಾ ಆಚರಣೆ ಮಾಡಲಾಗುತ್ತಿದೆ ಎಂದು ಭಗವಾನ್ ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಹಿಷ ಒಬ್ಬ ಮಹಾರಾಜ. ಆತ ಮಹಾರಾಜನಾಗಿ ಜನರಿಗೆ ಒಳ್ಳೆಯ ಕೆಲಸ ಮಾಡಿದ್ದಾನೆ. ಅವುಗಳನ್ನು ಜನರಿಗೆ ತಿಳಿಸುವ ಸಲುವಾಗಿ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದರು.












Click it and Unblock the Notifications