KRS Dam: ವಿಪರೀತ ಮಳೆ, ಜಲಾಶಯದಲ್ಲಿ ಒಂದೇ ದಿನದಲ್ಲಿ ಅತ್ಯಧಿಕ ಒಳಹರಿವು ದಾಖಲು, ಇಂದಿನ ಮಾಹಿತಿ
ಮೈಸೂರು, ಜೂನ್ 27: ವಾಡಿಕೆಯಂತೆ ಕರ್ನಾಟಕ ಕರಾವಳಿ ಹಾಗೂ ಮಲೆನಾಡಿನ ಭಾಗದಲ್ಲಿ ಅತ್ಯಧಿಕ ಮಳೆ ಶುರುವಾಗಿದೆ. ತಲಕಾವೇರಿ, ಮಡಿಕೇರಿ, ಕೊಡಗು, ಮೈಸೂರು ಸೇರಿದಂತೆ ಅನೇಕ ಕಡೆಗಳಲ್ಲಿ ಅತ್ಯಧಿಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಅನೇಕ ಜಲಾಶಯಗಳು ಭರ್ತಿಯಾಗಿವೆ. ಈ ಪೈಕಿ ಕೃಷ್ಣರಾಜ ಸಾಗರದಲ್ಲಿ ಒಳಹರಿವು ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.
ಈ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ. ಕಾವೇರಿ, ಕನ್ನಿಕೆ ಸುಜ್ಯೋತಿ ಮೂರು ನದಿಗಳು ಸೇರುವ ತ್ರಿವೇಣಿ ಸಂಗಮ ಸುತ್ತಮುತ್ತ, ಭಾಗಮಂಡಲ, ವಿರಾಜಪೇಟೆ, ಕೊಡಗು, ಮಡಿಕೇರಿ ಸೇರಿದಂತೆ ಕಾವೇರಿ ಜಲಾಯನಯನ ಪ್ರದೇಶಗಳಲ್ಲಿ ಮಳೆ ಅಬ್ಬರಿಸುತ್ತಿದೆ.

ಮುಂಗಾರು ರಾಜ್ಯದ ನಾನಾ ಕಡೆಗಳಲ್ಲಿ ಬಿರುಸುಕೊಂಡಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಪರಿಣಾಮ ಕೆಆರ್ಎಸ್ ಜಲಾಶಯದಲ್ಲಿ ಒಳಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೊರ ಹರಿವು ಸಾಮಾನ್ಯವಾಗಿದೆ.
ಕೆಆರ್ಎಸ್ ಇಂದಿನ ನೀರಿನ ಮಟ್ಟ?
KRS ಜಲಾಶಯವು 49.452 TMC ನೀರಿನ ಒಟ್ಟು ಸಾಮರ್ಥ್ಯ ಹೊಂದಿದೆ. ಈ ಪೈಕಿ ಇಂದು ಗುರುವಾರ (ಜೂನ್ 27) ನೀರಿನ ಒಳಹರಿವು ಬರೋಬ್ಬರಿ 3856 ಕ್ಯೂಸೆಕ್ ನಷ್ಟು ಹೆಚ್ಚಾಗಿದೆ. ಇತ್ತ ಹೊರ ಹರಿವು 472 ಕ್ಯೂಸೆಕ್ ಮಾತ್ರವೇ ಇದೆ.
ಇಷ್ಟು ಹೊರ ಹರಿವಿನಲ್ಲಿ ಕಾವೇರಿ ನದಿಗೆ 422 ಕ್ಯೂಸೆಕ್ ನೀರು ಮತ್ತು ನೀರಾವರಿಗಳಿಗೆ ಅನುಕೂಲವಾಗುವಂತೆ ಕಾಲುವೆಗಳಿಗೆ 50 ಕ್ಯೂಸೆಕ್ ನೀರನ್ನು ಎಂದಿನಂತೆ ಬಿಡಲಾಗುತ್ತದೆ. ನಿರಂತರ ಮಳೆಯಿಂದಾಗಿ ಸದ್ಯ ಒಟ್ಟು ನೀರಿನ ಸಂಗ್ರಹ ಶೇಕಡ 30.34 ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಅಬ್ಬರಿಸುತ್ತಿರುವ ವ್ಯಾಪಕ ಮಳೆ ವಿರಾಜಪೇಟೆ, ನಾಪೋಕ್ಲು, ಶಾಂತಹಳ್ಳಿ, ಅಮ್ಮತ್ತಿ, ಬಾಲೆಲೆ, ಸಂಪಾಜೆ, ಶ್ರೀಮಂಗಲ, ಮಡಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ ಮತ್ತು ಕುಶಾಲನಗರದಲ್ಲಿ ಗುರುವಾರವು ಮುಂದುವರಿದಿದೆ. ಮೈಸೂರು, ಮಂಡ್ಯ, ಭಾಗದಲ್ಲಿ ತಂತುರು ಮಳೆ ಆಗುತ್ತಿದೆ.
ವಿವಿಧ ಜಲಾಶಯಗಳು ಭರ್ತಿ
ಈ ವಾರ ಪೂರ್ತಿ ಇದೇ ರೀತಿ ಮಳೆ ವಾತಾವರಣ ಕಂಡು ಬರುವ ಕಾರಣ ಕೆಆರ್ಎಸ್ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ. ಕೆಆರ್ಎಸ್ ಮಾತ್ರವಲ್ಲದೇ, ಹಾರಂಗಿ, ಕಬಿನಿ, ಭದ್ರಾ, ಆಲಮಟ್ಟಿ, ತುಂಗಭದ್ರಾ, ಹೇಮಾವತಿ, ಲಿಂಗನಮಕ್ಕಿ, ವಾಣಿವಿಲಾಸ್ ಸಾಗರ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹ ಪ್ರಮಾಣ ಏರುಗತಿಯಲ್ಲಿದ್ದು, ಒಳಹರಿವು ಹೆಚ್ಚಾಗಿದೆ.












Click it and Unblock the Notifications