ಕೆ.ಆರ್.ಪೇಟೆ: ಪತಿಯ ಕಿರುಕುಳಕ್ಕೆ ಬೇಸತ್ತು ಧರಣಿ ಕೂತ ಪತ್ನಿ
ಕೆ.ಆರ್.ಪೇಟೆ, ಜೂನ್ 03: ಶಿಕ್ಷಕನೊಬ್ಬ ಪತ್ನಿಗೆ ತವರು ಮನೆಯಿಂದ ವರದಕ್ಷಿಣೆ ತರಬೇಕೆಂದು ನಿತ್ಯ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಪತ್ನಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಕೆ.ಆರ್.ಪೇಟೆ ತಾಲೂಕು ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸಿದ ಘಟನೆ ನಡೆದಿದೆ.
ತಾಲೂಕಿನ ಬೂಕನಕೆರೆ ಹೋಬಳಿಯ ಹಳೆಯೂರು ಗ್ರಾಮದ ಶಿಕ್ಷಕ ಹೆಚ್.ಆರ್.ಮಂಜುನಾಥ್ ಎಂಬುವವರ ಪತ್ನಿ ಟಿ.ಆರ್.ವಾಣಿಶ್ರೀ(24) ಎಂಬಾಕೆಯೇ ತನ್ನ ಗಂಡನ ಕಿರುಕುಳ ತಾಳಲಾರದೆ ನ್ಯಾಯಕ್ಕಾಗಿ ತಾಲೂಕು ಕಚೇರಿಯಿಂದ ಮುಂದೆ ಧರಣಿ ನಡೆಸುತ್ತಿರುವ ಮಹಿಳೆ.
ಹಳೆಯೂರು ಗ್ರಾಮದ ರಾಮಯ್ಯ ಅವರ ಮಗ ಹೆಚ್.ಆರ್.ಮಂಜುನಾಥ್ ಎಂಬ ಶಿಕ್ಷಕ ಈಕೆಯ ಗಂಡನಾಗಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಕಾಡುಬೇಗೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ.

ವಾಣಿಶ್ರೀಯನ್ನು 07-02-2011ರಲ್ಲಿ ಮದುವೆಯಾದ ಮಂಜುನಾಥ್ ಸಾಕಷ್ಟು ವರದಕ್ಷಿಣೆಯನ್ನು ಪಡೆದಿದ್ದನು. ಮದುವೆಯಾದ 1ವರ್ಷದವರೆಗೆ ಚೆನ್ನಾಗಿಯೇ ಇದ್ದ ಆತ ಬಳಿಕ ವಾಣಿಶ್ರೀಗೆ ಹೆಚ್ಚಿನ ವರದಕ್ಷಿಣೆ ತರವಂತೆ ಪೀಡಿಸುತ್ತಾ ನಿತ್ಯ ಕಿರುಕುಳ ನೀಡುತ್ತಾ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾನೆ. ಈ ದಂಪತಿಗೆ ಎರಡು ವರ್ಷದ ರಿಕ್ಷಿತ್ ಎಂಬ ಗಂಡು ಮಗು ಇದೆ.
ಸಿಗದ ಪೊಲೀಸ್ ನೆರವು: ಈ ಬಗ್ಗೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಆದ್ದರಿಂದ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬಂದು ನನಗೆ ನ್ಯಾಯಕೊಡಿಸಬೇಕು. ಇಲ್ಲದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಣಿಶ್ರೀ ಧರಣಿ ಆರಂಭಿಸಿದ್ದಾರೆ.
ಧರಣಿ ನಡೆಸುತ್ತಿರುವ ವಾಣಿಶ್ರೀ ಅವರನ್ನು ಸಮಾಧಾನಪಡಿಸಿದ ತಹಶೀಲ್ದಾರ್ ಕೆ.ರತ್ನಾ, ಪಟ್ಟಣ ಪೋಲಿಸ್ ಠಾಣೆಯ ಇನ್ಸ್ ಪೆಕ್ಟರ್ಹೆಚ್.ಎನ್.ವಿನಯ್ ಮತ್ತು ಸಿಡಿಪಿಓ ದೇವಕುಮಾರ್ ಸಮಾಧಾನಪಡಿಸಿ ಸ್ಥಳ ಪರಿಶೀಲನೆ ಮಾಡಿ ನ್ಯಾಯ ಕೊಡಿಸುವ ಭರವಸೆ ನೀಡಿದರೂ ಸಹ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ನ್ಯಾಯ ಕೊಡಿಸುವ ಖಚಿತ ಭರವಸೆ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಧರಣಿಯನ್ನು ಮುಂದುವರೆಸಿದ್ದಾಳೆ.
ಪ್ರತಿಭಟನೆಗೆ ದಲಿತ ಪರ ಸಂಘಟನೆಗಳು ಹಾಗೂ ಛಲವಾದಿ ಮಹಾಸಭಾದ ತಾಲೂಕು ಘಟಕ ವಾಣಿಶ್ರೀ ಅವರ ಹೋರಾಟಕ್ಕೆ ಬೆಂಬಲ ನೀಡಿವೆ.












Click it and Unblock the Notifications