ಈಗ 'ಮಾರಮ್ಮನೇ' ಹೇಳಿದ್ದಾಳೆ; ಆರೋಪಿಗಳು ಇನ್ನೂ ಆರು ಮಂದಿ ಇದ್ದಾರಂತೆ!
ಮೈಸೂರು, ಡಿಸೆಂಬರ್ 23: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಚಿನ್ನಪ್ಪಿ ಮೈ ಮೇಲೆ ನಿನ್ನೆ ಶನಿವಾರ ರಾತ್ರಿ ದೇಗುಲದ ಮಾರಮ್ಮ ಬಂದಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇದೇ ವೇಳೆ ಚಿನ್ನಪ್ಪಿ ಉರುಳುಸೇವೆ ಮಾಡಿದ್ದು ಈ ವೇಳೆ ಮಾರಮ್ಮ ಪ್ರಸಾದದಲ್ಲಿ ವಿಷ ಹಾಕಿದ ಆರೋಪಿಗಳ ಸುಳಿವು ನೀಡಿದ್ದಾಳೆ ಎನ್ನಲಾಗಿದೆ.
ವಿಷ ಪ್ರಸಾದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಕೇಳಿದ ಪ್ರಶ್ನೆಗೆ ಚಿನ್ನಪ್ಪಿ 6 ಬೆರಳನ್ನು ಎತ್ತಿ ತೋರಿಸುವ ಮೂಲಕ ದೇವರೇ ಆರೋಪಿಗಳ ಬಗ್ಗೆ ಮಾಹಿತಿ ನೀಡಿದೆ ಎಂಬುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಶನಿವಾರ ಹುಣ್ಣಿಮೆ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಪೂಜೆಯಲ್ಲಿ ಭಾಗಿಯಾಗಿದ್ದ ಚಿನ್ನಪ್ಪಿ ಮೈಮೇಲೆ ಮಾರಮ್ಮ ದೇವಿಯ ಆಹ್ವಾನೆಯಾಗಿತ್ತು.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಈ ವೇಳೆ ಭಕ್ತರು ಆರೋಪಿಗಳು ಎಷ್ಟು ಜನ? ಎಂದು ಕೇಳಿದರು. ಆಗ ಚಿನ್ನಪ್ಪಿ ಯಾವುದೇ ಮಾತುಗಳನ್ನಾಡದೇ ಬರೀ ಕೈ ಬೆರಳುಗಳನ್ನು ತೋರಿಸಿದ್ದಾರೆ. ಮೊದಲು ನಾಲ್ಕು ಬೆರಳು ತೋರಿಸಿ, ನಂತರ ಎರಡು ಬೆರಳು ತೋರಿಸುವ ಮೂಲಕ ಪ್ರಕರಣದಲ್ಲಿ ಆರು ಜನರ ಕೈವಾಡವಿದೆ ಎಂಬ ಸೂಚನೆಯನ್ನೇ ಮಾರಮ್ಮ ದೇವಿ ಚಿನ್ನಪ್ಪಿ ಮೂಲಕ ಹೇಳಿಸಿದ್ದಾರೆ ಅನ್ನೋದು ಜನರ ನಂಬಿಕೆಯಾಗಿದೆ.
ವಿಷಪ್ರಸಾದ ಪ್ರಕರಣದ ಆರೋಪಿಗಳಿಗೆ ಸಿಕ್ತು ಕೈದಿ ನಂಬರ್
ಸದ್ಯ ದುರಂತಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿದ್ದು, ಮತ್ತಿಬ್ಬರು ಯಾರು ಎಂಬ ಚರ್ಚೆ ಸುಳ್ವಾಡಿಯಲ್ಲಿ ಹುಟ್ಟಿಕೊಂಡಿದೆ. ಇನ್ನು, ಕಲ್ಲು-ಮುಳ್ಳುಗಳ ನಡುವೆ ಚಿನ್ನಪ್ಪಿ ಉರುಳುಸೇವೆ ಮಾಡಿದ್ದು ಹೊಟ್ಟೆಯಲ್ಲಿ ರಕ್ತ ಹರಿಯುತ್ತಿದ್ದರೂ ಸೇವೆ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.