Tumkur-Bengaluru Memu Train: ತುಮಕೂರು-ಬೆಂಗಳೂರು ಮೆಮು ರೈಲು ಸಂಚಾರಕ್ಕೆ ಮುಹೂರ್ತ ನಿಗದಿ
ರೈಲ್ವೆ ರಾಜ್ಯ ಖಾತೆ ಹಾಗೂ ಜಲಶಕ್ತಿ ಸಚಿವ ವಿ. ಸೋಮಣ್ಣ ರಾಜ್ಯಕ್ಕೆ ಭರ್ಜರಿ ಕೊಡುಗೆಗಳು ಸಿಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದಾರೆ. ಮೂರು ತಿಂಗಳಲ್ಲಿ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಗುವ ಸಾಧ್ಯತೆ ಇದೆ ಎಂದಿರುವ ಅವರು, ತುಮಕೂರು ಬೆಂಗಳೂರು ನಡುವೆ ದೈನಂದಿನ ಮೆಮು ರೈಲು ಸಂಚಾರ ಆರಂಭದ ದಿನಾಂಕದ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ದೇಶದಾದ್ಯಂತ ಹೊಸದಾಗಿ 13 ವಂದೇ ಭಾರತ್ ರೈಲು ಆರಂಭಿಸಲಾಗುತ್ತಿದೆ. ಹೀಗಾಗಿ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಗಲಿದೆ. ಬೆಂಗಳೂರು ಹೊರತಾದ ನಗರಗಳ ರೈಲ್ವೆ ಸೇತುವೆ ನಿರ್ಮಾಣಕ್ಕೆ 11 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದರು.

ಮುಂದಿನ ಎರಡು ತಿಂಗಳಲ್ಲಿ ಪ್ರತಿ ರೈಲುಗಾಡಿಗಳಿಗೂ ಹೆಚ್ಚುವರಿಯಾಗಿ ಎರಡು ಜನರಲ್ ಬೋಗಿಗಳನ್ನು ಅಳವಡಿಸಲಾಗುವುದು. ಅಲ್ಲದೇ ರಕ್ಷಣೆ ದೃಷ್ಟಿಯಿಂದ ಬೋಗಿಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಹೇಳಿದರು.
ತುಮಕೂರು-ಬೆಂಗಳೂರು ಮೆಮು ರೈಲು
ತುಮಕೂರು, ಮೈಸೂರು, ಬೆಂಗಳೂರು ಕಡೆಗೆ ಮೂರು ಹೊಸ ಮೆಮು ರೈಲು ಸೇವೆ ಆರಂಭಿಸಲಾಗುವುದು. ಸೆಪ್ಟೆಂಬರ್ 27ರಂದು ತುಮಕೂರು-ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿಗೆ ಚಾಲನೆ ನೀಡುತ್ತಿದ್ದೇನೆ ಎಂದರು. ಬೆಂಗಳೂರು ತುಮಕೂರು ನಡುವೆ ದೈನಂದಿನ ರೈಲು ಸಂಚಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇಡಲಾಗಿತ್ತು, ಕೊನೆಗೂ ವಿ ಸೋಮಣ್ಣ ಅದನ್ನು ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ರೈಲು ಸಂಚಾರ ಆರಂಭವಾದರೆ ತುಮಕೂರು ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅದರಲ್ಲೂ ನೌಕರರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ.
ನಾಗಮಂಗಲದಲ್ಲಿ ನಡೆದಿರುವ ಗಲಭೆ ಪ್ರಕರಣದಲ್ಲಿ ತಪ್ಪು ಮಾಡಿದವರು ಎಷ್ಟೇ ಪ್ರಭಾವಿಯಾಗಿದ್ದರೂ, ಅವರ ಮೇಲೆ ಕ್ರಮವಹಿಸಬೇಕು. ಅನುಭವಿಗಳಾದ ಗೃಹ ಸಚಿವರು ಯಾವ ಕಾರಣಕ್ಕಾಗಿ ಇದನ್ನು ಸಣ್ಣ ಪ್ರಕರಣ ಎಂದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ರಾಜ್ಯ ಸರ್ಕಾರ ಮತಗಳ ಓಲೈಕೆ ರಾಜಕಾರಣ ಬಿಡಬೇಕಿದೆ ಎಂದರು.
ಚಾಮುಂಡಿಬೆಟ್ಟಕ್ಕೆ ಭೇಟಿ
ಕಾರ್ಯಕ್ರಮಗಳ ನಿಮಿತ್ತ ನಗರಕ್ಕಾಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬೇರೆ ರಾಜ್ಯಗಳಿಂದ ಬಂದು ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕನ್ನಡ ಕಲಿತುಕೊಳ್ಳಬೇಕು. ಇದರಿಂದ ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ನಡೆಸಿ, ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.












Click it and Unblock the Notifications