ಮಗ ರಾಕೇಶ್ ನನ್ನು ನೆನೆದು ವರುಣಾ ಕ್ಷೇತ್ರದಲ್ಲಿ ಕಣ್ಣೀರಿಟ್ಟ ಸಿದ್ದರಾಮಯ್ಯ
ಮೈಸೂರು, ಏಪ್ರಿಲ್ 17 : ಸಿದ್ದರಾಮಯ್ಯ ಅವರು ಮಂಗಳವಾರ ವರುಣಾದಲ್ಲಿ ಚುನಾವಣೆ ಪ್ರಚಾರ ನಡೆಸುವ ವೇಳೆ ತಮ್ಮ ಹಿರಿಯ ಮಗ, ದಿವಂಗತ ರಾಕೇಶ್ ನನ್ನು ನೆನೆದು ಭಾವುಕರಾದ ಘಟನೆ ನಡೆಯಿತು.
ಮೈಸೂರು ವಿಧಾನಸಭಾ ಕ್ಷೇತ್ರವಾದ ವರುಣಾದಲ್ಲಿ ತಮ್ಮ ಎರಡನೇ ಮಗ ಡಾ.ಯತೀಂದ್ರ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಭೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಕೇಶ್ ನನ್ನು ನೆನೆದು ಸಿದ್ದರಾಮಯ್ಯ ಕಣ್ಣೀರಿಟ್ಟರು. ನನ್ನ ಮಗ ಈಗ ಇದ್ದಿದ್ದರೆ ನಾನು ಪ್ರಚಾರಕ್ಕೆ ಬರುವ ಅಗತ್ಯ ಇರುತ್ತಿರಲಿಲ್ಲ. ಆದರೆ ಮನುಷ್ಯನೆಂದ ಮೇಲೆ ಎಲ್ಲರೂ ಸಾಯಲೇ ಬೇಕು ಎಂದು ಭಾವುಕರಾದರು.
ನಾನು ಈ ಕ್ಷೇತ್ರದ ಮಣ್ಣಿನ ಮಗ. ನನ್ನ ಮಗ ಯತೀಂದ್ರ. ಕಷ್ಟ- ಸುಖಕ್ಕೆ ಆಗುವವರು ನಾವೇ ಹೊರತು ಹೊರಗಿನಿಂದ ಬಂದವರಲ್ಲ. ಸಂವಿಧಾನ ಬದಲಿಸಲು ಹೊರಟವರು ಬಿಜೆಪಿಯವರು. ಅದು ಢೋಂಗಿ ಪಕ್ಷ. ನುಡಿದಂತೆ ನಡೆಯುವವರು ನಾವು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನಾವು ಬಿಜೆಪಿಯವರಂತೆ ಬಾಯಿ ಮಾತಿನಲ್ಲಿ ಹೇಳುವವರಲ್ಲ. ಮಾಡಿ ತೋರಿಸುವವರು ಎಂದರು.

ನಾನು ವರುಣಾದಲ್ಲಿ 30 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಅದಕ್ಕಿಂತ ಹೆಚ್ಚು ಮತಗಳಿಂದ ಯತೀಂದ್ರ ಗೆಲ್ಲುತ್ತಾನೆ. ಎಲ್ಲಿಂದಲೋ, ಯಾರೋ ಬಂದು ಇಲ್ಲಿ ನಿಲ್ಲುತ್ತಾರೆ. ಇಲ್ಲಿನ ಬಗ್ಗೆ ಅವರಿಗೆ ಏನು ಗೊತ್ತು ಎಂದ ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಹರಿಹಾಯ್ದರು.
ಕ್ಷೇತ್ರದ ಕೊಣನೂರು, ಹನುಮನಪುರ, ಕಾರ್ಯ, ತಗಡೂರು ಗ್ರಾಮದಲ್ಲಿ ಸಿದ್ದರಾಮಯ್ಯ ರೋಡ್ ಶೋ ಮೂಲಕ ಪ್ರಚಾರ ನಡೆಸಿ, ಮತ ಯಾಚಿಸಿದರು. ಪ್ರಚಾರದ ವೇಳೆ ಹನುಮನಪುರ ಗ್ರಾಮದ ಮುಖಂಡ ಬಸವರಾಜಪ್ಪ ಅವರ ಮನೆಗೆ ತೆರಳಿದ ಅವರು, ಆರೋಗ್ಯ ವಿಚಾರಿಸಿದರು.












Click it and Unblock the Notifications