ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ: ಸಾ.ರಾ. ಮಹೇಶ್ ಸಂದರ್ಶನ
ಮೈಸೂರು, ಮೇ 1 : ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಎಲ್ಲ ಪಕ್ಷದ ಹುರಿಯಾಳುಗಳು ಗೆಲ್ಲಲೇಬೇಕೆಂಬ ಕಾರಣಕ್ಕೆ ನೀಲ ನಕಾಶೆಯೊಂದನ್ನು ಸಿದ್ಧಗೊಳಿಸಿದ್ದಾರೆ. ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರಿನಲ್ಲಿ ಪ್ರತಿಯೊಂದು ಕ್ಷೇತ್ರವೂ ಜನರ ಕುತೂಹಲ ಮೂಡಿಸುತ್ತಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಇಲ್ಲಿನ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಕುತೂಹಲ ಮೂಡಿಸಿರುವುದು ಕೆ.ಆರ್.ನಗರ ಕ್ಷೇತ್ರ. ಈ ಭಾಗದಲ್ಲಿ ತೆನೆ ಹೊತ್ತ ಮಹಿಳೆಯ ಪ್ರಾಬಲ್ಯವೇ ಹೆಚ್ಚು. ಸಾ.ರಾ.ಮಹೇಶ್ ಇಲ್ಲಿನ ಶಾಸಕರಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅವರ ಕನಸುಗಳು ಏನು, ಕ್ಷೇತ್ರದ ಕುರಿತಾದ ಅವರ ಆಶೋತ್ತರಗಳೇನು, ಇಲ್ಲಿದೆ ಅವರ ಸಂದರ್ಶನದ ಭಾಗ.

ಪ್ರಶ್ನೆ: ಹೇಗಿದೆ ಚುನಾವಣೆಯ ಕುರಿತಾದ ಪೂರ್ವ ತಯಾರಿ ?
ಸಾ.ರಾ.ಮಹೇಶ್: ನನ್ನದು ನಿನ್ನೆ ಮೊನ್ನೆಯ ತಯಾರಿಯಲ್ಲ. 14 ವರ್ಷಗಳಿಂದಲೂ ರಾಜಕೀಯ ಜೀವನವನ್ನು ಇದೇ ಕ್ಷೇತ್ರದಲ್ಲೇ ನಡೆಸುತ್ತಿದ್ದೇನೆ. ಇಲ್ಲಿನ ಜನರು ನಾನು ಏನೆಂಬುದನ್ನು ಅರಿತಿದ್ದಾರೆ. ನಾನು ಕೊನೆಯ ಸಂದರ್ಭದಲ್ಲಿ ಆಳ ನೋಡುವುದಿಲ್ಲ. ನನ್ನ ಕಾಯಕವೇ ಗೆಲುವಿಗೆ ಶ್ರೀರಕ್ಷೆಯಾಗಲಿದೆ.
ಪ್ರಶ್ನೆ: ಚುನಾವಣೆ ವೇಳೆಯಲ್ಲಿ ನಿಮ್ಮನ್ನು ಮಾನಸಿಕವಾಗಿ ಕುಂದಿಸುವ ಕೆಲಸ ಆಗುತ್ತಿದೆಯಾ?
ಸಾ.ರಾ.ಮಹೇಶ್: ಹೌದು. ಇದು ನನ್ನ ಏಳಿಗೆ ಸಹಿಸದೆ ಇರುವವರು ಮಾಡುತ್ತಿರುವ ಕುತಂತ್ರ. ಕೆ.ಆರ್.ನಗರ ಕ್ಷೇತ್ರದ ಅಭ್ಯುದಯ ಎಂಬುದು ನನ್ನ ಕುಟುಂಬದ ಏಳಿಗೆ ಇದ್ದ ಹಾಗೆ. ನನಗೆ 52 ವರ್ಷ. ನಾನೆಂದಿಗೂ ಬದಲಾಗದ ವ್ಯಕ್ತಿತ್ವದವನು. ಸ್ವಲ್ಪ ಸ್ಟ್ರಿಕ್ಟ್. ಸ್ವಂತ ವಿಚಾರವನ್ನು ಇಟ್ಟುಕೊಂಡು ನನ್ನನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಆದರೆ ನಾನು ಯಾವುದಕ್ಕೂ ಹೆದರುವುದಿಲ್ಲ.

ಪ್ರಶ್ನೆ: ನಿಮ್ಮನ್ನು ಏಕೆ ಜನ ಆರಿಸಬೇಕು ? ನಿಮ್ಮ ಗೆಲುವು ಅಷ್ಟು ಸುಲಭವಿದೆಯೇ ?
ಸಾ.ರಾ.ಮಹೇಶ್: ಗೆಲುವು ಸುಲಭವಿದ್ದರೆ ಥ್ರಿಲ್ ಇರುವುದಿಲ್ಲ. ಜೀವನದಲ್ಲಿ ಎಲ್ಲವನ್ನೂ ಜಯಿಸಲೇಬೇಕು. ಎದುರಾಳಿ ಇಲ್ಲದಿದ್ದರೆ ಅದು ಆಟವೇ ಅಲ್ಲ. ನನ್ನನ್ನು ಸುಲಭವಾಗಿ ಗೆಲ್ಲಲೂ ಇಲ್ಲಿನ ಜನರು ಬಿಟ್ಟಿಲ್ಲ. ಮೊದಲನೇ ಚುನಾವಣೆಯಲ್ಲಿ ನನ್ನ ಎದುರಾಗಿ ಇದ್ದದ್ದು ವಿಶ್ವನಾಥ್. ನಾನು ಗೆದ್ದಿದ್ದು 25 ಸಾವಿರ ಮತಗಳ ಅಂತರದಿಂದ. ಎರಡನೇ ಬಾರಿ ಚುನಾವಣೆಯಲ್ಲಿ ದೊರೆಸ್ವಾಮಿಯವರು ನಿಂತರು. ಅಲ್ಲಿಯೂ ಗೆಲ್ಲುವ ನನ್ನದಾಗಿತ್ತು. ಹಾಗಾಗಿ ನನಗೆ ಸೆಣಸಾಡಿ ಗೆಲ್ಲುವುದು ತುಂಬಾ ಇಷ್ಟ.
ಪ್ರಶ್ನೆ: ಈ ಹಿಂದೆ 2 ಬಾರಿ ಶಾಸಕಾಗಿ ಆಯ್ಕೆಯಾಗಿದ್ದವರು ನೀವು. ನಿಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ?
ಸಾ.ರಾ.ಮಹೇಶ್: ಕೆ.ಆರ್.ನಗರದಲ್ಲಿ 200 ಹಳ್ಳಿಗಳಿದೆ. ಶಾಶ್ವತವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದೇನೆ. ಹಂಪಾಪುರ, ಮಾಲನಾಯಕನಹಳ್ಳಿ, ಹನಸೋಗೆ ಸೇರಿದಂತೆ ಹಲವು ಹಳ್ಳಿಗಳ ಭಾಗದ ಜನರಿಗೆ ಇದರಿಂದ ಉಪಯೋಗವಾಗಿದೆ. ನಾಲೆಗಳ ಆಧುನೀಕರಣಕ್ಕೆ ಒತ್ತು ನೀಡಿದ್ದೇನೆ. ಚಾಮರಾಜ ಎಡದಂಡೆ, ಬಲದಂಡೆ, ರಾಮಸಮುದ್ರ, ಮಿರ್ಲೆ ಸೇರಿದಂತೆ ಸುಮಾರು 165 ನಾಲೆಗಳು ಅಭಿವೃದ್ಧಿ ಕಂಡಿವೆ. ಹಾರಂಗಿ ನಾಲೆಗಳ ನೀರನ್ನು ಬಿಡುವ ಕುರಿತಾದ ಹೋರಾಟದ ವೇಳೆ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದು ಯಾರೂ ಮರೆಯುವಂತಿಲ್ಲ. ಶ್ರೀರಾಮ ಸಕ್ಕರೆ ಕಾರ್ಖಾನೆ ಸಮಸ್ಯೆ ಕೂಡ ಬಗೆಹರಿಸಿದ್ದೇನೆ.

ಪ್ರಶ್ನೆ: ನಿಮ್ಮ ಮಗನ ವಿಚಾರದಲ್ಲಿ ಹಿನ್ನಡೆ ಆಗುತ್ತಿದೆಯಾ ?
ಸಾ.ರಾ.ಮಹೇಶ್: ನಾನು ಮಾಡಿದ್ದು ತಪ್ಪು, ನನ್ನ ಮಗನ ಬಗ್ಗೆ ಗಮನ ಕೊಡಬೇಕಿತ್ತು. ಕೊಡುತ್ತೇನೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುತ್ತೇನೆ.
ಪ್ರಶ್ನೆ: ನಿಮ್ಮನ್ನು ಏಕೆ ಮತದಾರರು ಆಯ್ಕೆ ಮಾಡಬೇಕು ?
ಸಾ.ರಾ.ಮಹೇಶ್: ಇನ್ನೂ ಕೆಲವು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಿಕೊಡಬೇಕೆಂಬ ಹಂಬಲವಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊರಾರ್ಜಿ ದೇಸಾಯಿ ಶಾಲೆ, ಕಸ್ತೂರ ಬಾ ಶಾಲೆ, ಪ್ರತ್ಯೇಕ ಮಹಿಳಾ ಶಾಲೆ ಹಾಗೂ ಕಾಲೇಜು, 3 ದೇವಸ್ಥಾನಗಳು ಮಾಡಬೇಕೆಂಬ ಹಂಬಲವಿದೆ. ಚುಂಚನಕಟ್ಟೆ ಜಲಪಾತೋತ್ಸವವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿ ಪ್ರವಾಸೋದ್ಯಮ ಕ್ಷೇತ್ರವನ್ನು ಮಾಡಬೇಕೆಂಬ ಆಸೆಯಿದೆ. ಇದರೊಟ್ಟಿಗೆ ನಮ್ಮ ಕ್ಷೇತ್ರಕ್ಕೆ ಕಾರ್ಖಾನೆಗಳನ್ನು ಸ್ಥಾಪಿಸಿ, ನಿರುದ್ಯೋಗದ ಸಮಸ್ಯೆಯನ್ನು ಬಗೆಹರಿಸುವ ಹಂಬಲವಿದೆ. ಮನೆಯ ಮಗನಾಗಿ ನನ್ನನ್ನು ಮತದಾರರು ಆಶೀರ್ವದಿಸಲಿ. ಅಕಸ್ಮಾತ್ ನಾನು ಸೋತರೆ ರಾಜಾಕೀಯದಿಂದ ಹಿಂದೆ ಸರಿಯುತ್ತೇನೆ.












Click it and Unblock the Notifications