ಕರ್ನಾಟಕ ಬಜೆಟ್; ಮೈಸೂರಿಗರ ನಿರೀಕ್ಷೆಗೆ ಸಿಗುತ್ತಾ ಮನ್ನಣೆ?
ಮೈಸೂರು, ಮಾರ್ಚ್ 03; ಕರ್ನಾಟಕದಲ್ಲಿ ತನ್ನದೇ ಆದ ವೈಶಿಷ್ಟ್ಯತೆಯ ಮೂಲಕ ಗಮನಸೆಳೆದಿರುವ ಪಾರಂಪರಿಕ ನಗರಿ ಮೈಸೂರು. ಪ್ರತಿಬಾರಿಯೂ ರಾಜ್ಯ ಬಜೆಟ್ನಲ್ಲಿ ಹಲವು ರೀತಿಯ ನಿರೀಕ್ಷೆಗಳನ್ನು ಮಾಡುತ್ತಲೇ ಇದೆ.
ಪ್ರವಾಸೋದ್ಯಮವನ್ನು ಹೊರತುಪಡಿಸಿದಂತೆ ಆಗಬೇಕಾದಂತಹ ಹಲವಾರು ಯೋಜನೆಗಳಿದ್ದು, ಇವುಗಳ ಪೈಕಿ ಯಾವುದಕ್ಕೆ ಬಜೆಟ್ನಲ್ಲಿ ಆದ್ಯತೆ ನೀಡಬಹುದು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಒಂದಷ್ಟು ನಿರೀಕ್ಷೆಗಳನ್ನಿಟ್ಟು ಕಾಯುವುದರಲ್ಲಿ ತಪ್ಪೇನಿಲ್ಲ. ಒಂದು ವೇಳೆ ನಿರೀಕ್ಷಿಸಿದಂತೆ ಆದರೆ ಅದಕ್ಕಿಂತ ಸಂತಸವೂ ಬೇರೊಂದಿಲ್ಲ.
ಹಾಗಾದರೆ ಮೈಸೂರಿನ ಜನರು ಏನೆಲ್ಲ ನಿರೀಕ್ಷೆಗಳನ್ನಿಟ್ಟು ಕೊಂಡಿದ್ದಾರೆ ಎನ್ನುವುದನ್ನು ನೋಡಿದ್ದೇ ಆದರೆ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಹಬ್ ಸ್ಥಾಪನೆ, ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಕಾಮಗಾರಿ ಬೇಗ ಮುಗಿಸುವುದು, ವಿಮಾನ ನಿಲ್ದಾಣದ ರನ್ವೇ ವಿಸ್ತರಣೆ, ದಸರಾ ಪ್ರಾಧಿಕಾರ ರಚನೆ, ಚಿತ್ರನಗರಿ ನಿರ್ಮಾಣ, ಕೃಷಿ, ಕೈಗಾರಿಕೆಗೆ ಉತ್ತೇಜನ ನೀಡುವುದು ಹೀಗೆ ಮುಂದುವರೆಯುತ್ತಾ ಹೋಗುತ್ತದೆ.
ಮೈಸೂರಿನಲ್ಲಿ ವಿಮಾನ ನಿಲ್ದಾಣ ಇದ್ದರೂ ಇಲ್ಲಿ ದೊಡ್ಡ ವಿಮಾನಗಳ ಹಾರಾಟ ನಡೆಯುತ್ತಿಲ್ಲ. ಕಾರಣ ಈಗಿರುವ ರನ್ ವೇ ಸೂಕ್ತವಾಗಿಲ್ಲ. ಹಾಗಾಗಿ ಅದನ್ನು ವಿಸ್ತರಿಸುವುದು ಅಗತ್ಯವಾಗಿದೆ. ರನ್ ವೇ ವಿಸ್ತರಣೆಗೆ ಸಂಬಂಧಿಸಿದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಅನುದಾನ ಮೀಸಲಿಟ್ಟು ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತಾಗಬೇಕು.

ಮೈಸೂರು ವಿಮಾನ ನಿಲ್ದಾಣ
ದಶಕಗಳ ಹಿಂದೆ ಬಿ. ಎಸ್. ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗಲೇ ರನ್ ವೇ ವಿಸ್ತರಣೆ ಮಾಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಅದು ಇಲ್ಲಿವರೆಗೆ ಸಾಧ್ಯವಾಗಿಲ್ಲ. ಈ ಬಾರಿಯಾದರೂ ರನ್ ವೇ ವಿಸ್ತರಣೆಗೆ ಬೇಕಾಗಿರುವ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಅನುದಾನ ನೀಡುವ ಮೂಲಕ ಅವಕಾಶ ಮಾಡಿಕೊಡುತ್ತಾ ನೋಡಬೇಕು.
ಇನ್ನು ಮೈಸೂರು- ಬೆಂಗಳೂರು ದಶಪಥ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವಂತೆ ಅನುದಾನ ಮೀಸಲಿಡುತ್ತಾರಾ?. ಇದಲ್ಲದೆ ಮೈಸೂರು ನಗರ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಠಾಣೆಗಳ ಸ್ಥಾಪನೆಯೂ ಅನಿವಾರ್ಯವಾಗಿದೆ. ಅದಕ್ಕೆ ಒತ್ತು ನೀಡಲಿ ಎಂಬ ಒತ್ತಾಯಗಳು ಜನ ವಲಯದಲ್ಲಿದೆ.

ಚಿತ್ರನಗರಿ ನಿರ್ಮಾಣವಾಗುತ್ತಾ?
ಕುಡಿಯುವ ನೀರು ವ್ಯವಸ್ಥೆ, ಒಳಚರಂಡಿಯ ಉನ್ನತೀಕರಣ, ಮತ್ತು ಆಧುನೀಕರಣಕ್ಕೆ ಆದ್ಯತೆ ನೀಡಿ ಅನುದಾನ ಬಿಡುಗಡೆ ಮಾಡಬೇಕಿದೆ. ಸಾಂಸ್ಕೃತಿಕವಾಗಿ ಮೈಸೂರು ಹತ್ತಾರು ಕೊಡುಗೆಗಳನ್ನು ನೀಡಿದ್ದು ಆ ಸಂಬಂಧ ಚಿತ್ರನಗರಿಗೆ ಸ್ಥಾಪನೆಗೆ ಒಲವು ತೋರಿ ಅನುದಾನ ಮೀಸಲಿಡುತ್ತಾರಾ? ಎಂಬ ಪ್ರಶ್ನೆಯೂ ಇಲ್ಲದಿಲ್ಲ.
ಸಿದ್ದರಾಮಯ್ಯ ಕಾಲದಲ್ಲಿ ಚಿತ್ರನಗರಿ ಸ್ಥಾಪನೆಗೆ ಮೈಸೂರಿನಲ್ಲಿ ಜಾಗ ಗುರುತಿಸಲಾಗಿತ್ತು. ಆದರೆ ಕುಮಾರಸ್ವಾಮಿ ಕಾಲದಲ್ಲಿ ಅದು ರಾಮನಗರಕ್ಕೆ ಸ್ಥಳಾಂತರವಾಯಿತು. ಬಿ. ಎಸ್. ಯಡಿಯೂರಪ್ಪ ಕಾಲದಲ್ಲಿ ಮತ್ತೆ ಮೈಸೂರಿನ ಇಮ್ಮಾವುಗೆ ಬಂತು. ಆಗ 500 ಕೋಟಿ ಅನುದಾನವನ್ನು ಘೋಷಣೆ ಮಾಡಲಾಯಿತು. ಈ ಬಾರಿ ಅದಕ್ಕೆ ಜೀವ ತುಂಬುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಮಾಡುತ್ತಾರಾ ಎಂಬುದಾಗಿ ಕಲಾ ಪ್ರೇಮಿಗಳು ಮಾತ್ರವಲ್ಲದೆ ಇಲ್ಲಿನ ಜನ ಕಾಯುತ್ತಿದ್ದಾರೆ.

ರೈತರ ಕೈಹಿಡಿಯುತ್ತಾರಾ?
ಇದೆಲ್ಲದರ ನಡುವೆ ರೈತ ಮುಖಂಡರು ಕೂಡ ರೈತರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಬಜೆಟ್ ಮಂಡಿಸಬೇಕು. ಈ ಬಾರಿಯ ಬಜೆಟ್ ರೈತರ ಅಭಿವೃದ್ಧಿಗೆ ಪೂರಕವಾಗಿರಬೇಕು. ರೈತರಿಗೆ ಮುಖ್ಯವಾಗಿ ನೀರು ಸಮರ್ಪಕ ವಿದ್ಯುತ್, ಶಾಸನಬದ್ಧ ಖಾತ್ರಿಯ ಕನಿಷ್ಠ ಬೆಂಬಲ ಬೆಲೆ ನೀಡುವ ಯೋಜನೆ, ಕನಿಷ್ಠ ಖಾತರಿ ಆದಾಯ ಯೋಜನೆಯನ್ನು ಘೋಷಣೆ ಮಾಡಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ.
ಮೈಸೂರು ಕ್ರೀಡಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡುತ್ತಾ ಬಂದಿದ್ದು, ಕ್ರೀಡಾಪಟುಗಳ ಉತ್ತೇಜಿಸುವ ಸಲುವಾಗಿ ಸೈಕ್ಲಿಂಗ್ ಟ್ರ್ಯಾಕ್ ಮತ್ತು ಹೆಚ್ಚಿನ ಈಜುಕೊಳಗಳ ನಿರ್ಮಾಣ ಮಾಡಬೇಕು, ಹೆಚ್ಚುವರಿ ಕ್ರೀಡಾ ಸಂಕೀರ್ಣ ನಿರ್ಮಾಣ, ಕ್ರೀಡಾ ವಸತಿ ಕೇಂದ್ರಗಳತ್ತ ಗಮನಹರಿಸಬೇಕೆಂಬುದು ಕ್ರೀಡಾಪ್ರೇಮಿಗಳ ಮನವಿಯಾಗಿದೆ.

ಕೈಗಾರಿಕೆಗೆ ಸಿಗುತ್ತಾ ಒತ್ತು?
ನಗರಗಳ ಅಭಿವೃದ್ಧಿ ಹಿಂದೆ ಕೈಗಾರಿಕೆಗಳ ಪಾತ್ರವಿದೆ. ಹೆಚ್ಚಿನ ಉದ್ಯೋಗ ಸೃಷ್ಟಿಯ ಅವಕಾಶವಿರುವುದು ಕೈಗಾರಿಕಾ ಕ್ಷೇತ್ರಗಳಲ್ಲಿ ಮಾತ್ರ. ಆದರೆ ಬೇರೆ ನಗರಗಳಿಗೆ ಹೋಲಿಸಿದರೆ ಅದರ ಪ್ರಮಾಣ ಕಡಿಮೆಯಿದೆ. ಹೀಗಾಗಿ ಮೈಸೂರು ಕೈಗಾರಿಕಾ ಪಟ್ಟಣ ಪ್ರಾಧಿಕಾರ ರಚನೆ ಮಾಡಿ ನೂರು ಕೋಟಿ ರೂ ಆರ್ಥಿಕ ಬೆಂಬಲ ನೀಡಬೇಕು. ಕೈಗಾರಿಕಾ ಪ್ರದೇಶಗಳ ಮೂಲ ಸೌಕರ್ಯ ಪೂರೈಕೆಗೆ 75 ಕೋಟಿ ಅನುದಾನ ನೀಡಬೇಕು.
ಸಂಕಷ್ಟದಲ್ಲಿರುವ ಸೂಕ್ಷ್ಮ ಕೈಗಾರಿಕೆಗಳಿಗೆ ಪುನಶ್ಚೇತನ ಮಾಡಬೇಕು. ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಹೆಲಿಪ್ಯಾಡ್ ಮಂಜೂರು ಮಾಡಬೇಕು. ವಿಶೇಷಚೇತನ ಉದ್ಯಮಿಗಳಿಗೆ ರಿಯಾಯಿತಿ ನೀಡಬೇಕು ಹೀಗೆ ಹಲವು ರೀತಿಯಲ್ಲಿ ಸರ್ಕಾರ ಕೈಗಾರಿಕೋದ್ಯಮಿಗಳ ಪರ ನಿಲ್ಲಬೇಕು. ಆಗ ಕೈಗಾರಿಕೆ ಅಭಿವೃದ್ಧಿಯಾಗಿ ಸ್ಥಳೀಯರಿಗೆ ಉದ್ಯೋಗ ದೊರೆಯಲು ಅನುಕೂಲ ವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.












Click it and Unblock the Notifications