ಕರ್ನಾಟಕ ಬಂದ್: ಅಮಿತ್ ಶಾ ಮುಂದೆ ಮುಜುಗರಕ್ಕೀಡಾಗುವ ಭಯದಲ್ಲಿ ಬಿಜೆಪಿ
ಮೈಸೂರು, ಜನವರಿ 25: ನಗರದಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆ ಯಶಸ್ಸಿನ ಬಗ್ಗೆ ಬಿಜೆಪಿ ಆತಂಕಗೊಂಡಂತೆ ಕಾಣಿಸುತ್ತಿದೆ. ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಪರಿವರ್ತನಾ ಯಾತ್ರೆಗೆ ಜನ ಬರದೆ ಎಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮುಂದೆ ಮುಜುಗರಕ್ಕೀಡಾಗುತ್ತೇವೆಯೋ ಎಂಬ ಭಯದಲ್ಲಿ ಬಿಜೆಪಿ ನಾಯಕರು ಇದ್ದಾರೆ.
ಇಂದು ಮಧ್ಯಾಹ್ನ ಮೈಸೂರಿನ ರಾಮಸ್ವಾಮಿ ವೃತ್ತದಿಂದ ಪರಿವರ್ತನಾ ಯಾತ್ರೆಯ ಜಾಥಾ ಆರಂಭವಾಗಲಿದೆ. ನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗವಹಿಸುತ್ತಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ 50 ಸಾವಿರಕ್ಕೂ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಕುರ್ಚಿಗಳನ್ನು ಭರ್ತಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಬಂದ್ ಇರುವುದರಿಂದ ಜನರ ಪ್ರಯಾಣಕ್ಕೆ ವಾಹನಗಳು ಅಲಭ್ಯವಾಗಿದ್ದು ಸಮಾವೇಶಕ್ಕೆ ಜನರು ಬರುವುದು ಹೇಗೆ ಎಂಬುದು ಬಿಜೆಪಿಗರಿಗೆ ತಲೆನೋವಾಗಿದೆ.
ಚಿತ್ರಗಳು : ಮಹದಾಯಿಗಾಗಿ ಕರ್ನಾಟಕ ಬಂದ್
Recommended Video


ಇಂದು ಬೆಳಿಗ್ಗೆ ಮೈಸೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸದ ಪ್ರತಾಪ್ ಸಿಂಗ್ ಬಸ್ ಮುಖದಲ್ಲಿ ಈ ಆತಂಕ ಎದ್ದು ಕಾಣಿಸುತ್ತಿತ್ತು. ಬಸ್ ನಿಲ್ದಾಣದಲ್ಲಿ ಅವರು ಬಸ್ ಸಂಚಾರ ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ನಿಂತಿದ್ದ ಪ್ರಯಾಣಿಕರ ಕಷ್ಟಗಳಿಗೂ ಅವರು ಕಿವಿಯಾದರು. ಈ ಸಂದರ್ಭದಲ್ಲಿ ಬಿಜೆಪಿ ಸಮಾವೇಶ ನಿಲ್ಲಿಸಲು ಕಾಂಗ್ರೆಸ್ ಸರಕಾರ ಬಂದ್ ಗೆ ಕರೆ ನೀಡಿದೆ ಎಂದು ರಾಜ್ಯ ಸರಕಾರದ ವಿರುದ್ಧ ಪ್ರಯಾಣಿಕರ ಮುಂದೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಬುಧವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಜೆಪಿ ನಾಯಕ ಎನ್.ಎಂ ನವೀನ್ ಕುಮಾರ್ ಕೂಡಾ ಸಮಾವೇಶವನ್ನು ವಿಫಲ ಮಾಡಲು ಬಂದ್ ಗೆ ಕರೆ ನೀಡಲಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರೂ ಈ ಬಗ್ಗೆ ಧ್ವನಿ ಎತ್ತಿದ್ದು, ಬಿಜೆಪಿ ಫೇಸ್ಬುಕ್ ಖಾತೆಯಲ್ಲೂ ಈ ಬಗ್ಗೆ ಪೋಸ್ಟ್ ಗಳನ್ನು ಹಾಕಲಾಗಿದೆ. ಒಟ್ಟಾರೆ ಸಮಾವೇಶ ವಿಫಲವಾಗುವ, ರಾಷ್ಟ್ರಾಧ್ಯಕ್ಷರ ಮುಂದೆ ಮರ್ಯಾದೆ ಕಳೆದುಕೊಳ್ಳುವ ಆತಂಕ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಳ್ಳುತ್ತಿದೆ.
ಎರಡನೇ ಮುಜುಗರ?
ಪರಿವರ್ತನಾ ಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಜನ ಸೇರಿಸಲಾಗದೆ ಬಿಜೆಪಿ ಭಾರೀ ಮುಜುಗರ ಅನುಭವಿಸಿತ್ತು. ಅಂದು ವೇದಿಕೆಯಲ್ಲೇ ಅಮಿತ್ ಶಾ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ವೈಯಕ್ತಿಕವಾಗಿ ರಾಜ್ಯ ನಾಯಕರಿಗೆ ಶಾ ಕ್ಲಾಸ್ ತೆಗೆದುಕೊಂಡಿದ್ದರು ಎಂಬ ವರದಿಗಳು ಹೊರ ಬಂದಿತ್ತು.
ಇದೀಗ ಮತ್ತೆ ಕುರ್ಚಿಗಳು ಖಾಲಿ ಉಳಿದರೆ ಎಲ್ಲಿ ಶಾ ಕೈಯಲ್ಲಿ ಮತ್ತೆ ಬೈಸಿಕೊಳ್ಳಬೇಕಾಗುತ್ತದೆ ಎಂಬ ಭಯದಲ್ಲಿ ಬಿಜೆಪಿಯವರಿದ್ದಾರೆ.












Click it and Unblock the Notifications