ಜೆಡಿಎಸ್ ಮೋದಿ ಮುಖವಾಡ ಹೊಂದಿದೆ: ರಣದೀಪ್ ಸಿಂಗ್ ಸುರ್ಜೇವಾಲಾ
ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿದೆ. ಅಲ್ಲದೆ, ಜೆಡಿಎಸ್ ಮೋದಿ ಮುಖವಾಡ ಹೊಂದಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಹೇಳಿದರು.
ಮೈಸೂರು, ಫೆಬ್ರವರಿ, 21: ರಾಜ್ಯದಲ್ಲಿ ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿದೆ. ಅಲ್ಲದೆ, ಜೆಡಿಎಸ್ ಮೋದಿ ಮುಖವಾಡ ಹೊಂದಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ ಮೈಸೂರಿನಲ್ಲಿ ವ್ಯಂಗ್ಯವಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರತಿ ಮನೆ ಮಹಿಳೆಯರಿಗೆ 2 ಸಾವಿರ ರೂಪಾಯಿಯ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಭೂಸ್ವಾಧೀನ ತಿದ್ದುಪಡಿ ಕಾಯ್ದೆಯ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ಮಾಡಿತ್ತು. ಆದರೆ ಜೆಡಿಎಸ್ ಸ್ವಲ್ಪವೂ ವಿರೋಧ ಮಾಡಲಿಲ್ಲ. ಮತಾಂತರ ನಿಷೇಧ ಕಾಯ್ದೆ ಜಾರಿ ವೇಳೆ ಸದನದಲ್ಲಿ ಧ್ವನಿ ಎತ್ತಲಿಲ್ಲ.
ಜೆಡಿಎಸ್ನಿಂದ ಬಿಜೆಪಿಗೆ ಸಹಕಾರ
ಮೈಸೂರಿನ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ನ ಪರೋಕ್ಷ ಹೊಂದಾಣಿಕೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹಾಗೆಯೇ ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಗೆ ಸಹಕಾರ ನೀಡಿತ್ತು. ಉಪ ರಾಷ್ಟ್ರಪತಿ ಆಯ್ಕೆ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವಾರವರ ವಿರುದ್ಧವಾಗಿ ಜೆಡಿಎಸ್ನವರು ಮತ ಚಲಾಯಿಸಿದರು ಎಂದು ಕಿಡಿಕಾರಿದರು.

ಭ್ರಷ್ಟಾಚಾರದ ಬಗ್ಗೆ ಮಾತಾಡಿಲ್ಲ ಏಕೆ?
ದೇಶದಲ್ಲಿ ಇಂದು ಕರ್ನಾಟಕ ಸರ್ಕಾರ ಶೇಕಡಾ 40ರಷ್ಟು ಕಮಿಷನ್ ಎಂದೇ ಖ್ಯಾತವಾಗಿದೆ. "ತಾನು ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ" ಎಂದು ಹೇಳುವ ನರೇಂದ್ರ ಮೋದಿ ಅವರು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದಾರೆ. ಆದರೆ, ಒಮ್ಮೆಯೂ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ ಎಂದು ದೂರಿದರು.
ಉಚಿತ ವಿದ್ಯುತ್, ಪ್ರತಿ ಮನೆಯ ಮಹಿಳೆಗೆ 2 ಸಾವಿರ ರೂಪಾಯಿ ಕೊಡುವ ಕಾಂಗ್ರೆಸ್ ಹಣವನ್ನು ಎಲ್ಲಿಂದ ತರಲಿದೆ ಎಂದು ಬಿಜೆಪಿ ಕೇಳುತ್ತಿದೆ. ಈಗಿನ ಸರ್ಕಾರ ಶೇಕಡಾ 40ರಷ್ಟು ಕಮಿಷನ್ ಪಡೆದು ಜನರ ಹಣವನ್ನು ಲೂಟಿ ಮಾಡುತ್ತಿದೆ. ನಮ್ಮ ಸರ್ಕಾರ ಬಂದಾಗ ಕಮಿಷನ್ ಪಡೆಯುವುದಿಲ್ಲ. ಆ ಹಣವನ್ನು ಈ ಯೋಜನೆಗೆ ವಿನಿಯೋಗಿಸಲಿದೆ ಎಂದು ಹೇಳಿದರು.
ಜೆಡಿಎಸ್ ಮೋದಿ ಮುಖವಾಡ ಹೊಂದಿದೆ
"ಜೆಡಿಎಸ್ ಮೋದಿ ಮುಖವಾಡವನ್ನು ಹೊಂದಿದೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ, ಒಬಿಸಿ ಬಗ್ಗೆ ಮಾತನಾಡಿ, ಚುನಾವಣೆ ಬಳಿಕ ಮೋದಿ ಬೇಕು ಎಂದು ಹೇಳುತ್ತಾರೆ. ಜೆಡಿಎಸ್ನ ಇಬ್ಬಂದಿ ನಿಲುವನ್ನು ಮತದಾರರು ಅರ್ಥ ಮಾಡಿಕೊಂಡು ಕಾಂಗ್ರೆಸ್ ಜೊತೆ ನಿಲ್ಲಬೇಕು. ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಎಲ್ಲವನ್ನೂ ಮಾರಾಟಕ್ಕಿಟ್ಟಿದೆ. ಪಿಎಸ್ಐ ಸ್ಕ್ಯಾಮ್ನಲ್ಲಿ ಡಿಜಿಪಿ ಜೈಲಿಗೆ ಹೋದರು. ಅವರದ್ದೇ ಸರ್ಕಾರದ ಸಚಿವರಾದ ಎಂಟಿಬಿ ನಾಗರಾಜ್ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಶಾಸಕ ಯತ್ನಾಳ್ ಮುಖ್ಯಮಂತ್ರಿ ಹುದ್ದೆ ಮಾರಾಟದ ವಸ್ತುವಾಗಿದೆ ಎನ್ನುತ್ತಾರೆ. ಆದರೂ ಯಾವುದೇ ನೈತಿಕ ಹೊಣೆ ಹೊರಲು ಸಿಎಂ ಸಿದ್ಧರಿಲ್ಲ," ಎಂದು ಲೇವಡಿ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಶಾಸಕ ಯತೀಂದ್ರ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ರೋಸಿ ಜಾನ್, ಕೆಪಿಸಿಸಿ ಕಾರ್ಯದರ್ಶಿ ಸಲೀಂ ಅಹಮದ್, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕ ವಾಸು, ಮುಖಂಡರಾದ ಸೂರಜ್ ಹೆಗಡೆ, ಸುಜೀಂದ್ರ , ಚಂದ್ರವೌಳಿ, ಲಕ್ಷ್ಮಣ್, ರಾಮಪ್ಪ, ಮಂಜುಳಾ ರಾಜ್, ರವಿಶಂಕರ್, ಮರಿಗೌಡ, ಎಚ್.ಎ. ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications