ಅಪಾಯ ಮಟ್ಟ ಮೀರಿದ ಕಪಿಲೆ: ಆತಂಕಕ್ಕೀಡಾಗಿರುವ ಜನತೆ
ಮೈಸೂರು, ಜು.13: ಮಲೆನಾಡು ಮತ್ತು ಕರಾವಳಿ ಮಾತ್ರವಲ್ಲದೆ ಮೈಸೂರು ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ನಗರದಲ್ಲಿ ಕೆಲವು ದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಮ್ಮೆ ಜಿಟಿಜಿಟಿ ಮತ್ತೊಮ್ಮೆ ರಭಸದಿಂದ ಮಳೆ ಸುರಿಯುತ್ತಿರುವುದರಿಂದಾಗಿ ಕೆಲವೆಡೆ ತೊಂದರೆಯಾಗಿದೆ.
ತಗ್ಗು ಪ್ರದೇಶದಲ್ಲಿ ನೀರು ಹರಿಯದೆ ನಿಂತಿತ್ತು ಮನೆಗೆ ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಿಂಗಾರು ಮಳೆಗೆ ನಗರದ ಕನಕಗಿರಿ ಬಡಾವಣೆ ಜಲಮಯವಾಗಿತ್ತು. ನಂತರ ಒಂದಷ್ಟು ಕ್ರಮ ಕೈಗೊಂಡು ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದರಾದರೂ ಜೋರಾಗಿ ಮಳೆ ಬಂದರೆ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ.
ಮಲೆನಾಡಲ್ಲಿ ಬಿಡುವು ಕೊಡದ ಮಳೆರಾಯ: ಕಂಗಲಾದ ರೈತರು
ಇನ್ನು ಕೆಲವೆಡೆ ಮಳೆಯಿಂದಾಗಿ ಕೆಸರುಮಯವಾಗಿ ಜನ ನಡೆದಾಡಲು ಹೆಣಗಾಡುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಳೆಯಿಂದಾಗಿ ಕೆರೆಕಟ್ಟೆಗಳಲ್ಲಿ ನೀರು ಕಾಣಿಸುವಂತಾಗಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ, ಹೆಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ಭತ್ತ ಕೊಯ್ಲಿಗೆ ಸಿದ್ದವಾಗಿದ್ದು ನೀರು ನಿಂತ ಪರಿಣಾಮ ಕೆಲವರಿಗೆ ನಷ್ಟವಾಗಿದ್ದರೆ, ಮತ್ತೆ ಕೆಲವರಿಗೆ ಕಟಾವು ಮಾಡಿಸಲು ತೊಂದರೆಯಾಗಿದೆ.
ಈ ಹಿಂದೆ ಗದ್ದೆಗೆ ಬಂದು ಮಾರಾಟಗಾರರು ಭತ್ತವನ್ನು ಖರೀದಿಸುತ್ತಿದ್ದರಾದರೂ ಮಳೆಯಿಂದಾಗಿ ಭತ್ತವನ್ನು ಕೇಳುವವರೇ ಇಲ್ಲದಂತಾಗಿದೆ. ಪಿರಿಯಾಪಟ್ಟಣ, ಹುಣಸೂರು, ಕೆ.ಆರ್.ನಗರ ವ್ಯಾಪ್ತಿಯಲ್ಲಿ ತಂಬಾಕು ಬೆಳೆದಿದ್ದು ಇದೀಗ ಹದ ಮಾಡುವ ಕಾಲವಾಗಿದೆ. ಆದರೆ ಮಳೆಯಿಂದಾಗಿ ಅದಕ್ಕೂ ತೊಂದರೆಯಾಗಿದೆ.
ಕಬಿನಿಯಿಂದ ಸುಮಾರು 56 ಸಾವಿರ ಕ್ಯೂಸೆಕ್ಸ್ಗಿಂತಲೂ ಹೆಚ್ಚಿನ ನೀರನ್ನು ನದಿಗೆ ಬಿಟ್ಟ ಪರಿಣಾಮ ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಬಿನಿ ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದ್ದು, ಜನ ದೋಣಿಗಳ ಮೂಲಕ ಸಾಗುವಂತಾಗಿದೆ.
ನೀರು ಹರಿದು ಬರುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳ ರೈತರ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿದೆ. ಭತ್ತದ ಗದ್ದೆಗಳು ಕೂಡ ಜಲಾವೃತವಾಗಿವೆ. ಸುತ್ತೂರು ಬಳಿ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದ್ದು ಸಂಪರ್ಕ ಕಳೆದುಕೊಳ್ಳುವ ಭೀತಿ ಉಂಟಾಗಿದೆ.
ಕಳೆದ ಐದು ವರ್ಷಗಳ ಹಿಂದೆ ಇದೇ ರೀತಿ ಮಳೆ ಬಂದು ಸೇತುವೆ ಮುಳುಗಡೆಯಾಗಿತ್ತು. ಆದರೆ ಬಹಳಷ್ಟು ವರ್ಷಗಳಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ ಈ ಬಾರಿ ಸುತ್ತೂರಲ್ಲಿ ಕಪಿಲಾ ನದಿ ವಿಶಾಲವಾಗಿ ಹರಡಿ, ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯವನ್ನು ನೋಡಲು ಜನ ಸಾಗರವೇ ಹರಿದು ಬರುತ್ತಿದೆ.
ಕೇರಳದ ವೈನಾಡಿನಲ್ಲಿ ವರುಣ ಅಬ್ಬರಿಸಿದರೆ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ವ್ಯಾಪ್ತಿಯ ಜನ ಭಯಭೀತರಾಗಿದ್ದು, ನದಿ ಬದಿಯ ಜಮೀನು ಹೊಂದಿದ್ದ ರೈತರು ಆತಂಕಗೊಂಡಿದ್ದಾರೆ.
ಕೇರಳದಲ್ಲಿ ಮಳೆ ಕಡಿಮೆಯಾಗಿ ಪ್ರವಾಹ ಪರಿಸ್ಥಿತಿ ತಗ್ಗಿದರೆ ಮಾತ್ರ ಇಲ್ಲಿಮ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಕೆಲ ವರ್ಷಗಳಿಂದ ನೀರಿಲ್ಲದೆ ಯಾವುದೇ ಬೆಳೆಯನ್ನು ಬೆಳೆಯಲಾಗದೆ ಅಂತರ್ಜಲವೂ ಕಡಿಮೆಯಾಗಿ ಬೋರ್ವೆಲ್ಗಳಲ್ಲೂ ನೀರಿಲ್ಲದೆ ಸಂಕಷ್ಟಕ್ಕೊಳಗಾಗಿದ್ದ ರೈತ ಈಗ ಸಂತೋಷಪಡುತ್ತಿದ್ದಾನೆ. ಆದರೆ ಪ್ರವಾಹ ಪರಿಸ್ಥಿತಿ ತಗ್ಗಿದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿರಲು ಸಾಧ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.