ಮೈಸೂರಿನಲ್ಲಿ ಗಂಗಾ ಆರತಿ ಮಾದರಿಯಲ್ಲಿ ನಡೆದ ಕಪಿಲಾ ಆರತಿ
ಮೈಸೂರು, ಡಿಸೆಂಬರ್ 7: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಗರದ ಕಪಿಲಾ ನದಿಯ ಮಣಿ ಕರ್ಣಿಕ ಘಟ್ಟದಲ್ಲಿ ಬುಧವಾರ ಹಾಗೂ ಗುರುವಾರ ತಾಲೂಕು ಯುವ ಬ್ರಿಗೇಡ್ ಆಯೋಜಿಸಿದ್ದ ಕಪಿಲಾ ಆರತಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ 6-30ರ ಸಮಯದಲ್ಲಿ ನದಿ ತೀರದಲ್ಲಿ ಹೋಮ ಹವನಗಳು ನಡೆದವು. 9 ಗಂಟೆಗೆ ಕಪಿಲಾ ನದಿಯ ತೀರ್ಥವನ್ನು 108 ಪೂರ್ಣಕುಂಭ ಕಲಶಗಳಲ್ಲಿ ತುಂಬಿಕೊಂಡ ಮಹಿಳೆಯರು ಮಂಗಳ ವಾದ್ಯಗಳೊಂದಿಗೆ ರಥ ಬೀದಿಯಲ್ಲಿ ಸಾಗಿದರು. ನಂತರ ಹದಿನಾರು ಕಲ್ಲು ಮಂಟಪದಲ್ಲಿ ಸ್ಥಾಪಿಸಲಾಗಿದ್ದ ಶಿವಲಿಂಗಕ್ಕೆ ಮಹಿಳೆಯರು ಅಷ್ಟ ತೀರ್ಥಗಳಿಂದ ಅಭಿಷೇಕ ಮಾಡಿದರು.
ಖುತ್ವಿಕರು ನವಗ್ರಹ ಪೂಜೆ, ಗಣಪತಿ ಹೋಮ, ರುದ್ರಪಾರಾಯಣ ನಡೆಸಿದರು. ಸಂಜೆ 7 ಗಂಟೆಗೆ ವಿವಿಧ ಬಗೆಯ ಹೂವು ಹಾಗೂ ಬಣ್ಣದ ಬಟ್ಟೆ, ತಳಿರು ತೋರಣ, ವಿದ್ಯುತ್ ದೀಪಗಳಿಂದ ಅಲಂಕರಿಸಲ್ಪಟ್ಟಿದ್ದ ಕಪಿಲಾ ನದಿಯ ಮಣಿ ಕರ್ಣಿಕ ಘಟ್ಟದಲ್ಲಿ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಕಪಿಲಾ ಮಾತೆಗೆ ಧೂಪ, ದೀಪ, ಕರ್ಪೂರದ ಆರತಿಯನ್ನು ವಾರಣಾಸಿಯ ಗಂಗಾ ಆರತಿಯ ಮಾದರಿಯಲ್ಲಿ ಭಕ್ತರ ಜಯ ಘೋಷದ ನಡುವೆ ನೆರವೇರಿಸಲಾಯಿತು.

ಕಪಿಲಾ ಆರತಿ ಆರಂಭವಾಗುತ್ತಿದ್ದಂತೆ ನದಿಯ ಆಚೆ ದಡದ ಹೆಜ್ಜಿಗೆ ಗ್ರಾಮದ ನದಿ ತೀರದಲ್ಲಿ ಅತ್ಯಾಕರ್ಷಕ ಬಾಣ- ಬಿರುಸುಗಳು ಕಿವಿ ಹಡಚಿಕ್ಕುವಂತೆ ಶಬ್ದ ಮಾಡುತ್ತಾ ಆಗಸಕ್ಕೆ ಹಾರಿ ಬೆಳಕಿನ ಚಿತ್ತಾರ ಮೂಡಿಸಿದವು. ಹದಿನಾರು ಕಲ್ಲು ಮಂಟಪಕ್ಕೆ ಸ್ನಾನ ಘಟ್ಟದಿಂದ ಮರದ ಸೇತುವೆ ನಿರ್ಮಿಸಿ ಭಕ್ತರಿಗೆ ಮಂಟಪ ತಲುಪಲು ಅನುವು ಮಾಡಿ ಕೊಡಲಾಗಿತ್ತು.

ಮಣಿ ಕರ್ಣಿಕ ಘಟ್ಟದ ಸೋಪಾನ ಕಟ್ಟೆಯ ಮೆಟ್ಟಿಲುಗಳಲ್ಲಿ 1 ಲಕ್ಷ ಮಣ್ಣಿನ ಹಣತೆ ಹಚ್ಚಿದ ಮಹಿಳೆಯರು ಕಾರ್ಯಕ್ರಮವನ್ನು ಕಳೆಗಟ್ಟಿಸಿದ್ದರು. ಹೆಜ್ಜಿಗೆ ಹೊಸ ಸೇತುವೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.












Click it and Unblock the Notifications