ಮ್ಯಾಜಿಕ್ ನಂಬರ್ಗಾಗಿ ಮೈಸೂರಿನಲ್ಲಿ ಕುಮಾರಣ್ಣನ ರಣಕಹಳೆ!
Recommended Video
ಮೈಸೂರು, ನವೆಂಬರ್ 07 : 2018ರ ವಿಧಾನಸಭೆ ಚುನಾವಣೆಯಲ್ಲಿ 113 ಸ್ಥಾನಗಳಲ್ಲಿ ಜಯಗಳಿಸುವ ಗುರಿಯೊಂದಿಗೆ ಕರ್ನಾಟಕ ಜೆಡಿಎಸ್ ಪ್ರಚಾರಕ್ಕೆ ಚಾಲನೆ ನೀಡಿದೆ. 'ಕುಮಾರಪರ್ವ' ಎಂಬ ಹೆಸರಿನಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ 'ವಿಕಾಸ ವಾಹಿನಿ' ವಿಶೇಷ ಬಸ್ಸಿನಲ್ಲಿ ರಾಜ್ಯ ಪ್ರವಾಸ ಮಾಡಲಿದ್ದಾರೆ.
ಸಿದ್ದರಾಮಯ್ಯ ಸೋಲಿಸಲು ರಾಜ್ಯದ ಜನರು ಸಾಕು : ಎಚ್ಡಿಕೆ
ಮಂಗಳವಾರ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ, ಚನ್ನಮ್ಮ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದರು. ನಂತರ 'ವಿಕಾಸ ವಾಹಿನಿ' ವಿಶೇಷ ಬಸ್ಸಿಗೆ ಪೂಜೆ ಸಲ್ಲಿಸಿ ರಾಜ್ಯ ಪ್ರವಾಸವನ್ನು ಆರಂಭಿಸಿದರು.
ನೂರಾರು ಕಾರ್ಯಕರ್ತರ ಜೊತೆ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಲಿಂಗದೇವರಕೊಪ್ಪ ಮೈದಾನಕ್ಕೆ ಆಗಮಿಸಿದರು. ಬೃಹತ್ ಸಮಾವೇಶದಲ್ಲಿ ಚುನಾವಣಾ ಪ್ರಚಾರಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಕುಮಾರಸ್ವಾಮಿ ಅವರು ಇಂದಿನಿಂದ ರಾಜ್ಯ ಪ್ರವಾಸ, ಗ್ರಾಮ ವಾಸ್ತವ್ಯವನ್ನು ಪ್ರಾರಂಭಿಸಿದರು.
ಚಿತ್ರಗಳು : ಕುಮಾರಸ್ವಾಮಿ ರಾಜ್ಯ ಪ್ರವಾಸದ ಬಸ್ ವಿಶೇಷತೆಗಳು
ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ, 'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 113 ರ ಗಡಿ ತಲುಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ಇತ್ತೀಚಿನ ಬಹುತೇಕ ಸಮೀಕ್ಷೆಗಳು ಜೆಡಿಎಸ್ 65 ಸ್ಥಾನ ಗಳಿಸಲಿದೆ ಎಂದು ಹೇಳಿವೆ. ಆದರೆ, ಇದನ್ನು ಮೀರಿ 113ರ ಗಡಿ ತಲುಪುವುದೇ ನಮ್ಮ ಏಕೈಕ ಗುರಿಯಾಗಿದೆ' ಎಂದು ಹೇಳಿದರು.
ಹೊರ ಹೋಗುವಂತೆ ಮಾಡಿದರು
'ಸಿದ್ದರಾಮಯ್ಯ ಕಾಂಗ್ರೆಸ್ ಸೇರಲು ಎಚ್.ವಿಶ್ವನಾಥ್ ಹಾಗೂ ಎಸ್.ಎಂ.ಕೃಷ್ಣ ಅವರು ಕಾರಣ. ಆದರೆ, ಈಗ ಅವರನ್ನೇ ಪಕ್ಷದಿಂದ ಹೊರಹೋಗುವಂತೆ ಮಾಡಿ ಮನುಷ್ಯತ್ವವನ್ನೇ ಮರೆತಿದ್ದಾರೆ' ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹಿರಿಯರನ್ನು ಕಡೆಗಣಿಸಲಾಗುತ್ತಿದೆ
'ಸಿಎಂ ಮಾಡದೆ ವಂಚಿಸಿದರು ಎಂದು ಸಿದ್ದರಾಮಯ್ಯ ಜೆಡಿಎಸ್ ಬಿಟ್ಟರು. ಅವರನ್ನ ಕಾಂಗ್ರೆಸ್ ಸೇರಿಸಿದ್ದು ಮಾಜಿ ಸಂಸದ ಎಚ್.ವಿಶ್ವನಾಥ್ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣ. ಆದರೆ, ಇದೀಗ ಎಸ್.ಎಂ.ಕೃಷ್ಣ ಅವರನ್ನ ಬಿಜೆಪಿಗೆ, ವಿಶ್ವನಾಥ್ ಅವರನ್ನು ಜೆಡಿಎಸ್ ಗೆ ಬರುವಂತೆ ಮಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ' ಎಂದರು.
ರೈತರ ಹಿತ ಕಾಯಲು ಜೆಡಿಎಸ್ ಬೆಂಬಲಿಸಿ
'ಎರಡು ರಾಷ್ಟ್ರೀಯ ಪಕ್ಷಗಳು ರೈತರ ಹಿತ ಕಾಯಲು ಸಾಧ್ಯವಿಲ್ಲ. ಹೀಗಾಗಿ ರೈತರ ಹಿತ ಕಾಯಲು ಜೆಡಿಎಸ್ ಬೆಂಬಲಿಸಿ ಎಂದು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ ಮಾಜಿ ಎಚ್.ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರ ಆತ್ಮಹತ್ಯೆಗೆ ಶರಣಾದ ರೈತರಿಗೆ ಈವರೆಗೂ ಪರಿಹಾರ ನೀಡಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಜನರಿಗೆ ಸಮಸ್ಯೆ ನೀಡುತ್ತಿವೆ' ಎಂದು ಆರೋಪಿಸಿದರು.
ಇದು ನನ್ನ ಎರಡನೇ ಬದುಕು, ನಿಮಗಾಗಿ ಮೀಸಲು…
'ಇದು ನನ್ನ 2ನೇ ಬದುಕು, ಈ ಬದುಕನ್ನ ನಿಮಗೆ ಮೀಸಲಿಟ್ಟಿದ್ದೇನೆ. ನಾನು ನನ್ನ ತಂದೆಗೆ ನೋವು ಕೊಟ್ಟು ಮುಖ್ಯಮಂತ್ರಿಯಾದೆ. ನಾನು ಸಿಎಂ ಆಗಿದ್ದು ಆಕಸ್ಮಿಕ, ನೀವು ಆರಿಸಿದ್ದಲ್ಲ. ಆದರೆ, ಜನರ ಆಶೀರ್ವಾದದೊಂದಿಗೆ ನಾನು ಸಿಎಂ ಆಗಬೇಕು ಎಂಬುದು ಎಚ್.ಡಿ ದೇವೇಗೌಡರ ಆಸೆ. ಜೆಡಿಎಸ್ ಗೂ ಅಧಿಕಾರ ಕೊಟ್ಟು ನೋಡಿ' ಎಂದು ಕುಮಾರಸ್ವಾಮಿ ಮನವಿ ಮಾಡಿದರು