ಮೈಸೂರಿನಲ್ಲಿ ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ
ಮೈಸೂರು, ಏ. 21 : ಚುನಾವಣೆ ದಿನ ನಾಪತ್ತೆಯಾಗಿ ಸುದ್ದಿ ಮಾಡಿದ್ದ ಚಾಮರಾಜನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೋಟೆ ಶಿವಣ್ಣ ಮೈಸೂರಿನಲ್ಲಿ ಸೋಮವಾರ ಪತ್ರಕರ್ತರ ಮುಂದೆ ಗಳಗಳನೆ ಅತ್ತಿದ್ದಾರೆ. ಚುನಾವಣೆಯಲ್ಲಿ ತಾವು ಬಿಜೆಪಿಯೊಂದಿಗೆ ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಕಣ್ಣೀರು ಸುರಿಸಿದ್ದಾರೆ.
ಸೋಮವಾರ ಮೈಸೂರಿನ ಪ್ರೆಸ್ ಕ್ಲಬ್ ನಲ್ಲಿ ಕೋಟೆ ಶಿವಣ್ಣ ಪ್ರತಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಚುನಾವಣೆ ದಿನ ತಾವು ಕಾಣೆಯಾದ ಬಗ್ಗೆ ಹಬ್ಬಿದ ಸುದ್ದಿಗಳನ್ನು ನೆನಪಿಸಿಕೊಂಡ ಅವರು ಕಣ್ಣೀರು ಸುರಿಸಿದರು. ಇಂತಹ ಸುದ್ದಿ ಹಬ್ಬಲು ನನ್ನ ವಿರುದ್ಧ ನಡೆದಿರುವ ಷಡ್ಯಂತ್ರವೇ ಕಾರಣ ಎಂದು ಹೇಳಿದರು.

"ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಚುನಾವಣೆ ದಿನ ನಾನು ಕಾರ್ಯಕರ್ತರ ಕೈಗೆ ಸಿಗಲಿಲ್ಲ, ಗಂಟಲು ನೋವು ಇದ್ದ ಕಾರಣ ಮೊಬೈಲ್ ಕರೆಗಳಿಗೂ ಉತ್ತರಿಸಲು ಸಾಧ್ಯವಾಗಲಿಲ್ಲ" ಎಂದು ಕೋಟೆ ಶಿವಣ್ಣ ಸ್ಪಷ್ಟನೆ ನೀಡಿದರು. ಒಂದು ದಿನ ಕಾಣೆಯಾದ ಮಾತ್ರಕ್ಕೆ ನನ್ನ ವಿರುದ್ಧ ಹಲವರು ಅಪಪ್ರಚಾರ ಮಾಡಿದ್ದಾರೆ. ಇದು ನನ್ನ ವಿರುದ್ಧ ನಡೆದಿರು ಷಡ್ಯಂತ್ರ ಎಂದು ದೂರಿದರು. [ಕೋಟೆ ಶಿವಣ್ಣ 2 ದಿನಗಳಿಂದ ನಾಪತ್ತೆ]
ಚಾಮರಾಜನಗರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರು, ಕೋಟೆ ಶಿವಣ್ಣ ನನ್ನನ್ನು ಸೋಲಿಸಲು ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಕಷ್ಟಪಟ್ಟು ಚುನಾವಣಾ ಪ್ರಚಾರ ಮಾಡಿದ್ದೇನೆ. ಯಾರೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಚಾಮರಾಜನಗರದ ಜನರು ನನಗೆ ಈ ಬಾರಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ ಕೋಟೆ ಶಿವಣ್ಣ, ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಕೆಲವರೊಂದಿಗೆ ಸೇರಿ ಕ್ಷೇತ್ರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಇದು ನನ್ನನ್ನು ಸೋಲಿಸಲು ನೆಡೆಸಿದ ತಂತ್ರ ಎಂದರು. [ಮೈಸೂರಿನಲ್ಲಿ ಕಣ್ಣೀರು ಹಾಕಿದ ದೇವೇಗೌಡರು]
ಅಂದಹಾಗೆ ಚಾಮರಾಜನಗರದಲ್ಲಿ 2014ರ ಚುನಾವಣೆಯಲ್ಲಿ ಹಳೆ ಹುಲಿಗಳು ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. 2009ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ ಅವರು, 369,970 ಮತಗಳನ್ನು ಪಡೆದು ಸಂಸತ್ ಪ್ರವೇಶಿಸಿದ್ದರು. ಬಿಜೆಪಿ ಅಭ್ಯರ್ಥಿ ಕೃಷ್ಣಮೂರ್ತಿ 365,968 ಮತಗಳನ್ನು ಪಡೆದು ಸೋಲುಂಡಿದ್ದರು. ಜೆಡಿಎಸ್ ಅಭ್ಯರ್ಥಿ ಕೋಟೆ ಶಿವಣ್ಣ 106,876 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದ್ದರು.
ಈ ಮೂವರು 2014ರ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಏ.17ರ ಗುರುವಾರ ನಡೆದ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ 72.81ರಷ್ಟು ಮತದಾನವಾಗಿದೆ. [ಎಲ್ಲಿ ಎಷ್ಟು ಮತದಾನ ಪಟ್ಟಿ ನೋಡಿ]












Click it and Unblock the Notifications