ತುಂಬಿ ಹರಿವ ಲಕ್ಷ್ಮಣತೀರ್ಥವನ್ನು ನೋಡುವುದೇ ಆನಂದ
ಮೈಸೂರು, ಜುಲೈ 05 : ಕೊಡಗಿನಲ್ಲಿ ಮಳೆ ಬಂದು ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿದಾಗ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹನಗೋಡು ಅಣೆಕಟ್ಟೆಯಲ್ಲಿ ಸುಂದರ ರಮಣೀಯ ದೃಶ್ಯ ಸೃಷ್ಟಿಯಾಗಿ ಬಿಡುತ್ತದೆ.
ಮಳೆಯಿಲ್ಲದೆ ಬೇಸಿಗೆಯಲ್ಲಿ ಸೊರಗಿ ಹೋಗಿದ್ದ ಲಕ್ಷ್ಮಣತೀರ್ಥ ನದಿ ಈಗ ಮಳೆಯ ಕಾರಣ ತುಂಬಿ ಹರಿಯುತ್ತಿದ್ದು, ಕೆಮ್ಮಣ್ಣಿನಿಂದ ತುಂಬಿ ರಭಸದಿಂದ ಹರಿಯವ ನೀರನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಕೊಡಗಿನಿಂದ ನಾಗರಹೊಳೆ ಅಭಯಾರಣ್ಯದ ಮೂಲಕ ಹರಿಯುವಾಗ ಈ ನದಿಗೆ ಸಣ್ಣಪುಟ್ಟ ತೊರೆಗಳು ಸೇರ್ಪಡೆಗೊಳ್ಳುವುದರಿಂದ ನೀರಿನ ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ವಿಸ್ತಾರವಾಗಿ ಹರಿಯುವ ನೀರು ನದಿ ದಡದಲ್ಲಿರುವ ಒಣಗಿದ ಬಿದಿರುಮೆಳೆ, ಮರದ ಕೊಂಬೆಗಳನ್ನೆಲ್ಲ ತನ್ನೊಂದಿಗೆ ಹೊತ್ತು ಪಯಣ ಬೆಳೆಸುತ್ತದೆ. [ಕೊಡಗಿನಲ್ಲಿ ಕುಂಭದ್ರೋಣ ಮಳೆ, ಭಾಗಮಂಡಲ ಜಲಾವೃತ]

ಹುಣಸೂರು ತಾಲೂಕಿನ ಹನಗೋಡಿನ ಬಳಿ ಲಕ್ಷಣತೀರ್ಥ ನದಿಗೆ ಕಟ್ಟೆ ಕಟ್ಟಲಾಗಿದ್ದು, ಈ ಕಟ್ಟೆ ತುಂಬಿ ನೀರು ರಭಸದಿಂದ ಹರಿಯುವುದನ್ನು ನೋಡಲು ಮಜಾ ಎನಿಸುತ್ತದೆ. ಈ ವ್ಯಾಪ್ತಿಯಲ್ಲಿ ಲಕ್ಷ್ಮಣತೀರ್ಥ ನದಿಯ ನೀರನ್ನು ನಂಬಿಕೊಂಡು ಕೃಷಿ ಮಾಡುವ ರೈತರ ಸಂಖ್ಯೆ ದೊಡ್ಡಮಟ್ಟದಲ್ಲಿದ್ದು, ಇದೀಗ ನದಿ ತುಂಬಿ ಹರಿಯುತ್ತಿರುವುದರಿಂದ ರೈತರು ನೆಮ್ಮದಿಯುಸಿರು ಬಿಟ್ಟಿದ್ದಾರೆ. [ಚಿಕ್ಲಿಹೊಳೆಯ ಅರ್ಧ ಚಂದ್ರಾಕೃತಿಯ ತೂಬಿನಲ್ಲಿ ಜಲನರ್ತನ]

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಾಡಿಕೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ಕೊಡಗಿನಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಹೆಚ್ಚಿ, ನದಿಯಲ್ಲಿ ನೀರು ಹರಿದಿದ್ದೇ ಆದರೆ ಲಕ್ಷ್ಮಣತೀರ್ಥ ನದಿ ಅಚ್ಚುಕಟ್ಟು ಪ್ರದೇಶದ ಜನ ನೆಮ್ಮದಿಯಿಂದ ಕೃಷಿ ಮಾಡಲು ಸಾಧ್ಯವಾಗುತ್ತದೆ.
ಕಳೆದ ವರ್ಷ ಉತ್ತಮವಾಗಿ ಮುಂಗಾರು ಮಳೆ ಸುರಿಯದ ಕಾರಣ ಯಾವುದೇ ಬೆಳೆ ಬೆಳೆಯಲಾರದೆ ರೈತರು ಕಂಗಾಲಾಗಿದ್ದರು. ಈ ಬಾರಿ ಮುಂಗಾರು ಆಶಾಭಾವನೆ ಮೂಡಿಸಿದ್ದು, ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತಿದೆ. [ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ]












Click it and Unblock the Notifications