ಹೈಕಮಾಂಡ್ ಮೆಚ್ಚಿಸಲು ಹೀಗೆ ಮಾಡಿದ್ರಾ ಪ್ರತಾಪ್ ಸಿಂಹ?
ಮೈಸೂರು, ಡಿಸೆಂಬರ್ 04: ಪ್ರತಾಪ್ ಸಿಂಹ ಹುಣಸೂರಿನಲ್ಲಿ ಉಗ್ರ ಪ್ರತಾಪ ತೋರಿರುವ ಹಿಂದೆ ರಾಜಕೀಯ ಲಾಭವಿದೆಯಾ ಅಥವಾ ಧರ್ಮಶ್ರದ್ಧೆ, ಅಥವಾ ಇವೆರಡೂ ಅಲ್ಲದೆ ಅವರ ದಾರ್ಷ್ಟ್ಯ ಮಾತ್ರವಾ.. ಹೀಗೊಂದು ಪ್ರಶ್ನೆ ಸಹಜವಾಗಿಯೇ ಉದ್ಭವವಾಗಿದೆ.
ಉಗುರಿನಲ್ಲಿ ಹೋಗಬಹುದಿದ್ದ ವಿಚಾರಕ್ಕೆ ಪ್ರತಾಪ್ ಸಿಂಹ ಕೊಡಲಿಯನ್ನು ಕೈಗೆತ್ತಿಕೊಂಡದ್ದು ರಾಜಕೀಯ ಲಾಭಕ್ಕಾಗಿ ಎನ್ನುತ್ತಿದ್ದಾರೆ ಕೆಲವರು. ಅದಕ್ಕೆ ಸಾಕ್ಷಿಯಾಗಿ ಪ್ರತಾಪ್ ಸಿಂಹ ಅವರೇ ಮಾತನಾಡಿರುವ ವಿಡೊಯೊ ಒಂದನ್ನು ನೀಡುತ್ತಾರೆ.

ಪ್ರತಾಪ್ ಸಿಂಹ ಅವರೇ ಕೆಲವು ತಿಂಗಳ ಹಿಂದೆ ಪ್ರತಾಪ್ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ವಿಡಿಯೊದಲ್ಲಿ 'ಯುವ ಮೋರ್ಚಾ ವತಿಯಿಂದ ಉಗ್ರ ಹೋರಾಟಗಳನ್ನು ಮಾಡಬೇಕು ಎಂದು ಹೈಕಮಾಂಡ್ ನಿಂದ ಆಜ್ಞೆ ಆಗಿರುವುದಾಗಿ ಹೇಳಿದ್ದರು.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ದೊಂಬಿ ಹುಟ್ಟುಹಾಕಲು ಅಮಿತ್ ಷಾ ಅವರೇ ಪ್ರತಾಪ್ ಸಿಂಹರಿಗೆ 'ಸುಫಾರಿ' ಕೊಟ್ಟಿದ್ದರು ಹಾಗಾಗಿ ಪ್ರತಾಪ್ ಸಿಂಹ ಬೇಕೆಂದೆ ಹನುಮ ಜಯಂತಿಯ ನೆಪದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆಲವು ನೆಟ್ಟಿಗರು.
ಅಮಿತ್ ಶಾ ಅವರು ಆಗಸ್ಟ್ ತಿಂಗಳಲ್ಲಿ ಬೆಂಗಳೂರಿಗೆ ಬಂದಿದ್ದಾಗ ರಾಜ್ಯ ಬಿಜೆಪಿ ಮುಖಂಡರಿಗೆ ಸರಿಯಾಗಿ ತಪರಾಕಿ ಹಾಕಿದ್ದರು. ಆಗ ಯುವ ಮೋರ್ಚಾ ಕ್ರಿಯಾಶೀಲವಾಗಿಲ್ಲದೆ ಇರುವುದರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದ ಅಮಿತ್ ಷಾ, ಯುವ ಮೋರ್ಚಾ ಮುಖಂಡರಾದ ಪ್ರತಾಪ್ ಸಿಂಹ ಅವರಿಗೆ 'ಯುವ ಮೋರ್ಚ ಉಗ್ರವಾದ ಪ್ರತಿಭಟನೆ ಮಾಡಬೇಕು, ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಆಗುವ ಹಂತಕ್ಕೆ ಪ್ರತಿಭಟನೆ ನಡೆಸಬೇಕು ಎಂದು ಹೇಳಿದ್ದರು' ಈ ವಿಷಯವನ್ನು ಸ್ವತಃ ಪ್ರತಾಪ್ ಸಿಂಹ ಅವರು ವಿಡಿಯೊನಲ್ಲಿ ಹೇಳಿದ್ದರು.
ಹೈಕಮಾಂಡ್ ಆಜ್ಞೆ ಮಾಡಿದ್ದ ಕಾರಣ ಪ್ರತಾಪ್ ಸಿಂಹ ಅವರು ಅಮಿತ್ ಷಾ ಅವರ ಗಮನಸೆಳೆಯಲು ಈ ರೀತಿ ಗಲಾಟೆ ಮಾಡಿ ಬೆಂಬಲಿಗರು ದೊಂಬಿ ಏಳುವಂತೆ ಮಾಡಿದ್ದಾರೆ ಎನ್ನುವ ಅನುಮಾನಗಳು ದಟ್ಟವಾಗಿವೆ.
ಟಿಯರ್ ಗ್ಯಾಸ್, ಲಾಠಿ ಚಾರ್ಜ್ ಆಗುವ ಹಂತಕ್ಕೆ ಗಲಾಟೆ ಮಾಡಬೇಕು ಎಂದು ಹೈಕಮಾಂಡ್ ಹೇಳಿದ ಕಾರಣಕ್ಕಾಗಿಯೇ ಪ್ರತಾಪ್ ಸಿಂಹ ಪೊಲೀಸರ ಮೇಲೆ ಪ್ರತಾಪ ತೋರಿ ಮೈಸೂರಿನ ಶಾಂತಿಗೆಡುವಂತೆ ಮಾಡಿದ್ದಾರೆ ಎಂಬುದು ಅವರ ವಿರೋಧಿಗಳ ವಾದ.











Click it and Unblock the Notifications