ಜೆಡಿಎಸ್ ನ ಐಕಾನ್ ಆಗ್ತಾರಾ ಪ್ರಜ್ವಲ್ ರೇವಣ್ಣ
ಮೈಸೂರು, ಡಿಸೆಂಬರ್ 1 : ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಕೊನೆಗೂ ರಾಜಕೀಯಕ್ಕೆ ಬಂದಾಯಿತು. ಅಷ್ಟೇ ಅಲ್ಲದೆ ಜೆಡಿಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿಯೂ ಆಗಿದೆ.
ಇದೀಗ ಜೆಡಿಎಸ್ ನ ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಮೂಲಕ ಪಕ್ಕಾ ಅನುಭವಿ ರಾಜಕಾರಣಿಯಂತೆ ಭಾಷಣ ಬಿಗಿಯುತ್ತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ತರಿಸಿದೆ. ಹಿರಿಯ ನಾಯಕರೇ ಬೆಚ್ಚಿಬೀಳುವಂತೆ ಮಾತನಾಡುತ್ತಿರುವುದನ್ನು ನೋಡಿದರೆ ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷದ ಸಂಘಟನೆಯೊಂದಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇರಾದೆಯೂ ಗೋಚರಿಸುತ್ತಿದೆ.

ಜತೆಗೆ ಪಕ್ಷದಿಂದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ: ಹಾಗೆನೋಡಿದರೆ ಜೆಡಿಎಸ್ ನ ವಿರುದ್ಧ ಬಂಡಾಯ ಶಾಸಕರು ಸಮರ ಸಾರಿದ್ದು, ಒಂದಷ್ಟು ನಾಯಕರ ಕೊರತೆಯೂ ಜೆಡಿಎಸ್ ನ್ನು ಕಾಡುತ್ತಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ವೇಳೆ ಪ್ರಜ್ವಲ್ ರಾಜಕೀಯದತ್ತ ಹುರುಪು ತೋರುತ್ತಾ ಅನುಭವಿ ರಾಜಕಾರಣಿಯಂತೆ ಮಾತನಾಡುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇವರ ರಾಜಕೀಯ ಭವಿಷ್ಯ ವಿಫುಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮದ್ದೂರಿನಲ್ಲಿ ನಡೆದ ಯುವಕರ ನಡಿಗೆ ಕುಮಾರಣ್ಣನ ಕಡೆಗೆ ಯುವ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ಆಡಿದ ಮಾತಿನ ಪರಿ ಹಿರಿಯ ಮುಖಂಡರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿತ್ತು. ಅವರು ಬಿಜೆಪಿಯನ್ನು ಕಟುಕಿದ ರೀತಿಯೂ ಅಚ್ಚರಿ ಮೂಡಿಸುವಂತಿತ್ತು. ಅವರ ಮಾತಿನ ಕೆಲವೊಂದು ತುಣುಕುಗಳು ಇಲ್ಲಿವೆ.
ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡದ, ಬಿತ್ತನೆ ಬೀಜ ಹಾಗೂ ಗೊಬ್ಬರಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗೋಲಿಬಾರ್ ನಡೆಸಿ ಇಬ್ಬರನ್ನು ಬಲಿ ತೆಗೆದುಕೊಂಡ ಬಿಜೆಪಿಯವರಿಗೆ ರೈತರನ್ನು ರಕ್ಷಣೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಕಾವೇರಿ ಕಣಿವೆ ಪ್ರದೇಶದ ರೈತರಿಗೆ ಮರಣಶಾಸನವಾಗಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿ ಅಸ್ತಿತ್ವಕ್ಕೆ ತರಲು ಕೇಂದ್ರ ಮುಂದಾದಾಗ 85ರ ಇಳಿ ವಯಸ್ಸಿನಲ್ಲಿ ದೇವೇಗೌಡರು ಉಪವಾಸ ಸತ್ಯಾಗ್ರಹ ನಡೆಸಿ ಕೇಂದ್ರದ ಮೇಲೆ ಒತ್ತಡ ಹೇರಿ ಅದನ್ನು ತಡೆಯುವಲ್ಲಿ ಯಶಸ್ವಿಯಾದರು.
ಬಿಜೆಪಿಯಿಂದ 18 ಸಂಸದರನ್ನು ಆರಿಸಿ ಕಳುಹಿಸಲಾಗಿದ್ದರೂ ಎರಡು ವರ್ಷಗಳಿಂದ ಬರಗಾಲ ಎದುರಾಗಿ ನೀರಿಗೆ ಸಂಕಷ್ಟ ಎದುರಾಗಿದ್ದಾಗ ಕಾವೇರಿ ನೀರನ್ನು ಉಳಿಸಿಕೊಡಲು ಇವರಿಂದ ಸಾಧ್ಯವಾಗಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡಿಸಲಾಗಲಿಲ್ಲ. ಇವರೆಲ್ಲಾ ರೈತಪರ ನಾಯಕರೇ, ಇವರಿಂದ ರೈತರ ರಕ್ಷಣೆ ಸಾಧ್ಯವೇ?
ಇನ್ನು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಲಾಠಿ ಪ್ರಹಾರ ನಡೆಸಿತು. ಬಾಸುಂಡೆ ಬರುವಂತೆ ಹೊಡೆದರು. ಆಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆ ರೈತರಿಗೆ ಶಕ್ತಿ ಕೊಡುವ ಭರವಸೆ ನೀಡಿದರು. ನಮಗೆ ರೈತರ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಾಯಕ ಬೇಕು. ರೈತರ ಕಲ್ಯಾಣದ ಬಗ್ಗೆ ಕನಸು ಕಂಡಿರುವ ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಿದರಷ್ಟೇ ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ.
ಒಟ್ಟಾರೆ ಮಾತಿನಲ್ಲೇ ಮೋಡಿ ಮಾಡುವ ಕಲೆ ಹೊಂದಿರುವ ಪ್ರಜ್ವಲ್ ಪ್ರಬಲ ರಾಷ್ಟ್ರೀಯ ಪಕ್ಷಗಳ ಹಿರಿಯ ನಾಯಕರನ್ನೇ ಟೀಕೆ ಮಾಡಿ, ಆಡಳಿತ ಪಕ್ಷದ ವೈಫಲ್ಯಗಳನ್ನು ಬೊಟ್ಟು ಮಾಡಿ, ತಮ್ಮ ಪಕ್ಷದತ್ತ ಒಲವು ಗಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಜೆಡಿಎಸ್ನ ಐಕಾನ್ ಆಗಿ ಕಂಗೊಳಿಸುತ್ತಿದ್ದಾರೆ. ಮುಂದಿನ ದಿನಗಳು ಹೇಗಿರುತ್ತವೆ ಎನ್ನುವುದನ್ನು ಕಾದು ನೋಡೋಣ.












Click it and Unblock the Notifications