ಹುಣಸೂರಿನಲ್ಲಿ ಅಂತರರಾಜ್ಯ ವಾಹನ ಕಳ್ಳನ ಬಂಧನ
ಮೈಸೂರು, ಸೆಪ್ಟೆಂಬರ್ 27: ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯದಲ್ಲೂ ಬೈಕ್, ಕಾರುಗಳನ್ನು ಕದಿಯುತ್ತಿದ್ದ ಖದೀಮನನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಣ್ಣೂರಿನ ಪಾಲೇಲೊ ಹೌಸ್ನ ನಿವಾಸಿ ಮನ್ಸೂರ್ ಅಹಮ್ಮದ್ ಅವರ ಪುತ್ರ ನಿಶಾನ್ ಅಹಮ್ಮದ್(24) ಬಂಧಿತ ಆರೋಪಿಯಾಗಿದ್ದಾನೆ. ಈತ ಮಾದಕ ವ್ಯಸನಿಯಾಗಿದ್ದು, ಹಣಕ್ಕಾಗಿ ವಾಹನ ಕದಿಯುವ ಕೃತ್ಯಕ್ಕೆ ಇಳಿದಿದ್ದನು.

ಸೆ.23ರಂದು ಹುಣಸೂರು ಪಟ್ಟಣದ ಸರಸ್ವತಿ ಮೂರಬ್ಬಲ್ ಎದುರು ಹರೀಶ್-ತಿಮ್ಮಯ್ಯ(ದತ್ತ) ಎಂಬುವರು ತಮ್ಮ ಕಾರನ್ನು ನಿಲ್ಲಿಸಿ ಹೋಗಿದ್ದರು. ಕೆಲಸ ಮುಗಿಸಿಕೊಂಡು ಬಂದು ನೋಡಿದಾಗ ಕಾರು ನಾಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಆದರೆ ಕಾರನ್ನು ಸಮಯ ಸಾಧಿಸಿ ನಿಶಾನ್ ಅಹಮ್ಮದ್ ಕಳ್ಳತನ ಮಾಡಿದ್ದನಲ್ಲದೆ, ಅದನ್ನು ಅಲ್ಲಿಂದ ಮೈಸೂರಿಗೆ ತಂದು ಮಾರಾಟ ಮಾಡಲು ಯತ್ನಿಸಿದ್ದನು. ಆದರೆ ವ್ಯವಹಾರ ಕುದುರದ ಕಾರಣದಿಂದಾಗಿ ಮತ್ತೆ ಹುಣಸೂರಿನತ್ತ ಅದೇ ಕಾರಿನಲ್ಲಿ ಹಿಂತಿರುಗಿದ್ದಾನೆ.
ಮಾದಕ ವ್ಯಸನಿಯಾಗಿದ್ದ ಆತ ಮೈಸೂರಿನಿಂದ ಮಧ್ಯರಾತ್ರಿ ಹೊರಟು ಬೆಳಗ್ಗಿನ ಜಾವ 3.30ರ ವೇಳೆಯಲ್ಲಿ ಹುಣಸೂರಿನ ಕಡೆಗೆ ತೆರಳಿದ್ದ. ಹೀಗೆ ಮರಳುವಾಗ ನಿದ್ದೆಯ ಮಂಪರಿನಲ್ಲಿ ಯಶೋಧಪುರ ಬಳಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುತ್ತು.
ಅದೇ ವೇಳೆಗೆ ಡಿವೈಎಸ್ಪಿ ಭಾಸ್ಕರ್ ರೈ ನೇತೃತ್ವದ ತಂಡ ಅಲ್ಲಿ ಗಸ್ತು ತಿರುಗುತ್ತಿತ್ತು. ಈ ತಂಡ ಅಪಘಾತವಾಗಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿದಾಗ ಕಳ್ಳ ಸ್ಥಳದಿಂದ ತಪ್ಪಿಸಿಕೊಂಡು ಹೋಗಲು ಮುಂದಾಗಿದ್ದನು.
ಪೊಲೀಸರಿಗೆ ಅಪಘಾತವಾಗಿದ್ದ ಕಾರು ಕಳುವಾದ ಕಾರು ಎಂಬುದು ಗೊತ್ತಾಗಿತ್ತು. ಹೀಗಾಗಿ ತಕ್ಷಣ ಅಪಘಾತ ಮಾಡಿದ್ದ ನಿಶಾನ್ ಅಹಮ್ಮದ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ಆತನೊಬ್ಬ ಅಂತರರಾಜ್ಯ ಕಳ್ಳ ಎಂಬುದು ಗೊತ್ತಾಗಿದೆ.
ವಿಚಾರಣೆ ವೇಳೆ ಈತ ಗೋಣಿಕೊಪ್ಪಲಿನಲ್ಲಿ 2.50ಲಕ್ಷ ಮಾಲ್ಯದ ಕೆ.ಟಿ.ಎಂ (ಡಿಯುಕ್) ಬೈಕನ್ನು ಕದ್ದು 4 ತಿಂಗಳ ಹಿಂದೆ ಹುಣಸೂರಿನ ಕಲ್ಲ ಹಳ್ಳಿ ಬೇಲಿಯೊಂದರಲ್ಲಿ ತಳ್ಳಿ ಪರಾರಿಯಾಗಿದ್ದನು. ಈ ಬೈಕ್ನ್ನು ಹುಣಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಸೆ. 24ರಂದು ಕೊಡಗಿನ ವಿರಾಜಪೇಟೆಯಲ್ಲಿ ಯಮಹಾ ಬೈಕ್ ಕಳ್ಳತನ ಮಾಡಿ ಹುಣಸೂರಿನ ಮುತ್ತಾರಾಯನ ಹೊಸಹಳ್ಳಿ ಬಳಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಪರಾರಿಯಾಗಿದ್ದನು. ಅಷ್ಟೇ ಅಲ್ಲದೆ 2013ರಲ್ಲಿ ತಲಚೇರಿಯಲ್ಲಿ 2 ಬೈಕ್ ಕದ್ದಿರುವುದು ಬೆಳಕಿಗೆ ಬಂದಿದೆ. ಸದ್ಯ ಈತನಿಂದ ಒಂದು ಕಾರು ಹಾಗೂ ಎರಡು ಬೈಕ್ ವಶ ಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications