ಮೈಸೂರು : ತಾಯಿಯ ಕೊಂದವನ ಪತ್ತೆ ಹಚ್ಚಿದ ಬಾಲಕಿ
ಮೈಸೂರು, ಜೂ. 20 : ತನ್ನ ಕಣ್ಣೆದುರೇ ಹೆತ್ತ ತಾಯಿಯನ್ನು ಕೊಂದ ಆರೋಪಿಯನ್ನು ಬಾಲಕಿ ಸಂಜ್ಞೆಯ ಮೂಲಕ ಗುರುತಿಸಿ, ಆತನು ಜೈಲು ಸೇರುವಂತೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಇದರಿಂದ ಆರು ತಿಂಗಳ ಹಿಂದೆ ನಡೆದ ಕೊಲೆಯ ಆರೋಪಿ ಸೆರೆ ಸಿಕ್ಕಂತಾಗಿದೆ.
ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಲಿಂಗಪುರದ ಗ್ರಾಮದ ತೋಟದ ಮನೆಯಲ್ಲಿ ಆರು ತಿಂಗಳ ಹಿಂದೆ ತಾಯಿಯ ಕೊಲೆಯನ್ನು ಕಣ್ಣಾರೆ ಕಂಡ ವೈಭವಿ ಆರು ತಿಂಗಳ ಬಳಿಕ ಗುಣಮುಖಳಾಗಿ ಆರೋಪಿಯನ್ನು ಗುರುತಿಸಿದ್ದಾಳೆ. ಕೊಲೆ ಮಾಡಿದ್ದ ಸಿದ್ದಲಿಂಗಪುರ ಗ್ರಾಮದ ಆಟೋ ಚಾಲಕ ರವಿ (27)ಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವೈಭವಿ (10) ತಾಯಿಯನ್ನು ಕೊಲೆ ಮಾಡಿದ್ದ ರವಿ ಆಕೆಯ ಮೇಲೆಯೂ ರಾಡ್ ನಿಂದ ಹಲ್ಲೆ ನಡೆಸಿದ್ದ. ಆರು ತಿಂಗಳ ಕಾಲ ಚಿಕಿತ್ಸೆ ಪಡೆದು ತುಸು ಗುಣಮುಖಳಾದ ವೈಭವಿ ನೀಡಿದ ಸುಳಿವಿನ ಆಧಾರದ ಮೇಲೆ ಸಿಸಿಬಿ ಪೊಲೀಸರು, ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಮಾರಣಾಂತಿಕವಾಗಿ ಗಾಯಗೊಂಡಿದ್ದ ವೈಭವಿಗೆ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ಮೈಸೂರು ಮೃಗಾಲಯಕ್ಕೆ ನಾಲ್ಕು ಹೊಸ ಅತಿಥಿಗಳು]
ಮಾತನಾಡಲು ಕಷ್ಟ ಪಡುತ್ತಿದ್ದ ವೈಭವಿ, ಸಂಜ್ಞೆಯ ಮೂಲಕ ಏನೋ ಹೇಳುವ ಪ್ರಯತ್ನ ಮಾಡುತ್ತಿದ್ದಳು. ಪೊಲೀಸರು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ತಜ್ಞರು ಮತ್ತು ಶ್ರವಣ ದೋಷ ಮಕ್ಕಳ ಶಾಲೆಯ ಶಿಕ್ಷಕರ ಸಹಾಯದಿಂದ ಬಾಲಕಿಯ ಸಂದೇಶವನ್ನು ಅರ್ಥೈಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದ್ದಾರೆ.
ಕೊಲೆಯ ವಿವರ : ಸಿದ್ದಲಿಂಗಪುರದ ತೋಟದ ಮನೆಯಲ್ಲಿ ಪುತ್ರಿಯೊಂದಿಗೆ ವಾಸವಾಗಿದ್ದ ಪದ್ಮ (40) ಅವರು ಆಟೋ ಚಾಲಕ ರವಿ ಎಂಬಾತನ ಮನೆಗೆ ಬೇಕಾದ ಸಾಮಾನುಗಳನ್ನು ತರಿಸಿಕೊಳ್ಳುತ್ತಿದ್ದರು. ರವಿಗೆ ಆರು ಸಾವಿರ ರೂ. ಸಾಲವನ್ನು ಸಹ ನೀಡಿದ್ದರು.

ಜನವರಿ 23ರಂದು ರವಿ ಮನೆಗೆ ಬಂದಾಗ ಸಾವಲನ್ನು ವಾಪಸ್ ನೀಡುವಂತೆ ರವಿಯ ಬಳಿ ಪದ್ಮ ಕೇಳಿದ್ದರು. ಇದರಿಂದ ಇಬ್ಬರ ನಡುವೆ ಜಗಳ ನಡೆದು ರವಿ ಕಬ್ಬಿಣದ ರಾಡ್ನಿಂದ ಪದ್ಮ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ. ಆಗ ಮನೆಗೆ ಬಂದ ವೈಭವಿಯ ಮೇಲೂ ಹಲ್ಲೆ ನಡೆಸಿದ್ದ. ಇದದಿಂದ ಆಕೆ, ಪ್ರಜ್ಞಾಹೀನಳಾಗಿದ್ದಳು. ಆಕೆ ಸತ್ತಿದ್ದಾಳೆಂದು ಭಾವಿಸಿ ಸ್ಥಳದಿಂದ ಪರಾರಿಯಾಗಿದ್ದ.
ವೈಭವಿ ಬದುಕಿದ್ದಳು : ಕೊಲೆ ನಡೆದ ಸ್ಥಳಕ್ಕೆ ಪೊಲೀಸರು ಹೋದಾಗ ವೈಭವಿ ಬದುಕಿದ್ದಳು. ತಕ್ಷಣ ಆಕೆಯನ್ನು ಪೊಲೀಸರು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿಯ ಚಿಕಿತ್ಸೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮತ್ತು ಗ್ರಾಮಸ್ಥರು ಅಗತ್ಯ ಸಹಾಯ ಮಾಡಿದ್ದರು. ಚೇತರಿಸಿಕೊಂಡ ಬಾಲಕಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾಳೆ. [ಮೈಸೂರು ವಿಶ್ವವಿದ್ಯಾಲಯದ ಪದವಿಗಳು ಗೋತಾನಾ?]
ಗಾಮದಲ್ಲೇ ಇದ್ದ ಆರೋಪಿ : ಪದ್ಮ ಅವರನ್ನು ಕೊಲೆ ಮಾಡಿ, ವೈಭವಿ ಮೇಲೆ ಹಲ್ಲೆ ನಡೆಸಿದ ನಂತರ ಆರೋಪಿ ರವಿ, ಗ್ರಾಮದಲ್ಲೇ ಇದ್ದ. ಬಾಲಕಿಯ ಗಂಭೀರ ಸ್ಥಿತಿ ಕಂಡು ಗ್ರಾಮದಲ್ಲೇ ಆಟೋ ಓಡಿಸಿಕೊಂಡು ಓಡಾಡಿಕೊಂಡಿದ್ದ. ಬಾಲಕಿಯನ್ನು ನೋಡಲು ಸಹ ಆಸ್ಪತ್ರೆಗೆ ಆಗಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಸರು ಬರೆದು ಗುರುತಿಸಿದಳು : ವೈಭವಿ ಆರೋಪಿ ರವಿಯ ಹೆಸರು ಬರೆದು ಆತನನ್ನು ಗುರುತಿಸಿದಳು ಮತ್ತು ಠಾಣೆಯಲ್ಲಿ ಅನುಮಾನ ಬಂದ ವ್ಯಕ್ತಿಯೊಂದಿಗೆ ರವಿಯನ್ನು ಕರೆಸಿದಾಗ ಆತನನ್ನು ಸಂಜ್ಞೆ ಮೂಲಕ ಗುರುತಿಸಿದಳು ಎಂದು ಪೊಲೀಸರು ಹೇಳಿದ್ದಾರೆ.
ಸಿಸಿಬಿ ಎಸಿಪಿ ಕೆ.ಎನ್.ಮಾದಯ್ಯ, ಇನ್ಸ್ ಪೆಕ್ಟರ್ ಗಳಾದ ಆರ್.ಜಗದೀಶ್, ಕೆ.ಎನ್.ಯಶವಂತ್ ಕುಮಾರ್, ಎಸ್ಐ ಶ್ರೀನಿವಾಸ ಗೌಡ, ಎಎಸ್ಐ ಎಂ.ಜೆ.ಜಯಶೀಲನ್, ಎಂ.ಡಿ.ಶಿವರಾಜು, ಎ.ಜಾರ್ಜ್ ಮುಂತಾದವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications