ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ
ಮೈಸೂರು, ಜೂನ್ 1 : ಮೇ 6ರಂದು ನಗರದ ಲಿಂಗಾಂಬುದಿಪಾಳ್ಯದ ನಿರ್ಜನ ಪ್ರದೇಶದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಕುವೆಂಪುನಗರ ಪೊಲೀಸರು ಮೂವರು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ 5 ಮಂದಿ ಯುವಕರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು, ನಗರದ ಕೆ.ಜಿ ಕೊಪ್ಪಲ್ ನಿವಾಸಿಯಾದ ಕಾರ್ತಿಕ್ ಕುಮಾರ್ (25) ಜೀವನ್ (26) ಹಾಗೂ ಸೂರ್ಯ ಕುಮಾರ್ (35) ಎಂಬುವವರನ್ನು ಬಂಧಿಸಿ ಶುಕ್ರವಾರ ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.
ನಗರದ ಲಿಂಗಾಂಬುದಿ ಪಾಳ್ಯ ದೇವಸ್ಥಾನವೊಂದರ ಬಳಿ ಸ್ನೇಹಿತನ ಜೊತೆ ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಕೆಲವು ಯುವಕರು ದಾಳಿ ನಡೆಸಿದ್ದರು. ಅವರಲ್ಲಿ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದರು. ಜತೆಯಲ್ಲಿದ್ದ ಸ್ನೇಹಿತ ಶಿವಸಿದ್ದಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಸಂಬಂಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಬಾಲಕೃಷ್ಣ ಅವರು, ಕೆ.ಆರ್ ವಿಭಾಗದ ಎಸಿಪಿ ಜಿ ಟಿ ನಾಯಕ್, ಕುವೆಂಪು ನಗರ ಠಾಣೆ ಇನ್ಸ್ಪೆಕ್ಟರ್ ರಾಜು, ಎಸ್ಐಗಳಾದ ಅರುಣ್, ರಘು ನೇತೃತ್ವದಲ್ಲಿ ಆರೋಪಿ ಪತ್ತೆಗೆ ಮೂರು ತಂಡಗಳನ್ನು ರಚನೆ ಮಾಡಿದ್ದರು.

ಘಟನೆ ನಡೆದ ದಿನದಿಂದಲೇ ಸುತ್ತಮುತ್ತಲಿನ 25 ಮಂದಿ ಶಂಕಿತರನ್ನು ಕರೆತಂದು ಪೊಲೀಸರು ವಿಚಾರಣೆಗೈದಿದ್ದರು. ಘಟನಾ ಸ್ಥಳದ ಮುಖ್ಯ ರಸ್ತೆಯಲ್ಲಿನ ಮನೆಗಳಲ್ಲಿ ಅಳವಡಿಸಿರುವ ಹಾಗೂ ವರ್ತುಲ ರಸ್ತೆಯ ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿರುವ ಸಿಸಿಟಿವಿ ಫೂಟೇಜ್ ಗಳನ್ನು ಪೊಲೀಸರು ಪರಿಶೀಲಿಸಿದ್ದರು. ಘಟನಾ ಸ್ಥಳದ ಸಮೀಪದಲ್ಲಿ ಚಾಲನೆಯಲ್ಲಿದ್ದ ಮೊಬೈಲ್ ಸಂಖ್ಯೆಗಳನ್ನು ಮೊದಲಿಗೆ ಕಲೆ ಹಾಕಿದ್ದರು. ಆಗ ಅವರಿಗೆ ದೊರೆತದ್ದು ಬರೋಬ್ಬರಿ 2,500 ಮೊಬೈಲ್ ನಂಬರ್ ಗಳು. ಅಷ್ಟೂ ಮೊಬೈಲ್ ಸಂಖ್ಯೆಗಳನ್ನು ಇಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದರು.
ಮೊದಲಿಗೆ ಸ್ವಿಚ್ ಆಫ್ ಆಗಿರುವ ಮೊಬೈಲ್ ನಂಬರ್ ಗಳ ವಿಳಾಸ ಪಡೆದು ತನಿಖೆ ಚುರುಕುಗೊಳಿಸಿ, ಅವರ ಮನೆಗೆ ತೆರಳಿದ್ದರು. ಅವರಲ್ಲಿ ಕೆಲವರು, ಘಟನೆ ನಡೆದ ಮಾರನೆಯ ದಿನದಂದು ನಾಪತ್ತೆಯಾಗಿದ್ದರು. ಹೀಗಾಗಿ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಸುಳಿವು ಸಿಕ್ಕ ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ 8 ಮಂದಿ ಭಾಗಿಯಾಗಿರುವ ವಿಚಾರ ತಿಳಿದುಬಂದಿದೆ. ಉಳಿದ 5 ಮಂದಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications