ಮೈಸೂರು: ನಾನು ರಾಜಕೀಯ ಪ್ರವೇಶಿಸುವುದಿಲ್ಲ, ಪ್ರೊ.ರಂಗಪ್ಪ
ಮೈಸೂರು, ಜನವರಿ 10: ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರವನ್ನಾಗಲಿ, ತಪ್ಪನ್ನಾಗಲಿ ಮಾಡಿಲ್ಲ. ಅಧಿಕಾರಾವಧಿ ತೃಪ್ತಿ ತಂದಿದೆ. ನಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ ಆದರೆ ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.
ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಲಪತಿಯಾಗಿ ಆಯ್ಕೆಯಾದಾಗಿನಿಂದ ಇಲ್ಲಿಯವರೆಗೆ ವಿವಿಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಶತಮಾನೋತ್ಸವವನ್ನು ಸ್ಮರಣೀಯವಾಗಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಸಿದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯಾದಿಯಾಗಿ ಗಣ್ಯಾತಿಗಣ್ಯರು ವಿವಿಗೆ ಭೇಟಿ ನೀಡಿದ್ದಾರೆ. ನೊಬೆಲ್ ಪುರಸ್ಕೃತ ಪ್ರೊಫೆಸರ್ಗಳು ವಿಶೇಷ ಉಪನ್ಯಾಸ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಹಾಗೂ ವಿದೇಶಗಳಿಂದ ಹಣ ತಂದು ಕಟ್ಟಡ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದ್ದೇನೆ ಎಂದರು.[ಮೈಸೂರು ವಿವಿ ಕುಲಪತಿ ರಾಜಕೀಯಕ್ಕೆ ಬರ್ತಾರ.? ಹಿಂಟ್ಸ್ ನೀಡಿದ್ರಾ ಸಿಎಂ!]
ಮುಂದಿನ ಚುನಾವಣೆಯಲ್ಲಿ ಪ್ರೊ.ರಂಗಪ್ಪ ಅಭ್ಯರ್ಥಿ ಎಂಬ ಗಾಳಿ ಸುದ್ಧಿಯ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ರಂಗಪ್ಪ, ನನ್ನನ್ನು ಯಾವ ಪಕ್ಷದವರು ರಾಜಕೀಯಕ್ಕೆ ಆಹ್ವಾನಿಸಿಲ್ಲ. ಮಾಜಿ ಪ್ರದಾನಿ ದೇವೇಗೌಡ ಅವರ ಸಂಬಂಧಿಯಾದ ಕಾರಣ ಇಂಥ ಉಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಬಗ್ಗೆ ನಾನೇನು ಪ್ರತಿಕ್ರಿಯಿಸಲಿ..? ಎಂದು ಪ್ರೊ.ರಂಗಪ್ಪ ಮಾಧ್ಯಮದವರನ್ನೇ ಮರು ಪ್ರಶ್ನಿಸಿದರು.
ಕುಲಪತಿಯಾಗಿ ನನ್ನ ಅಧಿಕಾರಾವಧಿ ಜ.10ಕ್ಕೆ ಮುಗಿಯಲಿದ್ದು, ನನ್ನ ಸೇವೆಯಿಂದಲೂ ನಿವೃತ್ತನಾಗುತ್ತಿದ್ದೇನೆ. ಚೀನಾ ಮೂಲದ ಸಿನೋಟರ್ ಎಂಬ ಫಾರ್ಮಾಸ್ಯುಟಿಕಲ್ ಕಂಪನಿಗೆ ಮುಖ್ಯ ಸಲಹೆಗಾರನಾಗಿ ಆಯ್ಕೆಯಾಗಿರುವುದಾಗಿ ಹೇಳಿದರು.[ನೇಮಕಾತಿ ಅಕ್ರಮ, ಮೈಸೂರು ವಿ.ವಿ. ರಿಜಿಸ್ಟ್ರಾರ್ ಅಮಾನತು]
ನಾನು ಕರ್ನಾಟಕ ರಾಜ್ಯ ಮುಕ್ಯ ವಿವಿಯ ಕುಲಪತಿಯಾಗಿದ್ದಾಗ ಯಾವ ತೊಂದರೆಯೂ ಇರಲಿಲ್ಲ. 2013ರ ಬಳಿಕ ಸಮಸ್ಯೆ ಆರಂಭವಾಯಿತು. ಕೆಲವರು ತಮ್ಮ ಲಾಬಿಗಾಗಿ ಯುಜಿಸಿ ಮೇಲೆ ಒತ್ತಡ ತಂದು ಮಾನ್ಯತೆಯನ್ನೇ ರದ್ದುಗೊಳಿಸಿದರು. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು. ಒಂದೇ ಕಟ್ಟಡದಲ್ಲಿ ಗಬ್ಬುನಾರುತ್ತಿದ್ದ ವಿವಿಯಲ್ಲಿ ಹತ್ತಾರು ಕಟ್ಟಡಗಳನ್ನು ನಿರ್ಮಾಣ ಸೇರಿದಂತೆ, 650 ಕೋಟಿ ವೆಚ್ಚದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದೇನೆ ಎಂದರು.