ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ: ಬಸವರಾಜ ಹೊರಟ್ಟಿ
ಮೈಸೂರು, ಜೂನ್ 5: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಅದಕ್ಕಾಗಿ ಯಾವ ಲಾಬಿಯೂ ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೊಂದಲ ನಿರ್ಮಾಣವಾಗದಂತೆ ಸಮ್ಮಿಶ್ರ ಸರಕಾರ ಸ್ಥಿರವಾಗಬೇಕಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರಿಂದಲೂ ತ್ಯಾಗ, ಸಂಯಮ ಹಾಗೂ ಸಹಕಾರ ಬೇಕಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ," ಎಂದು ಹಲವು ಗೊಂದಲಗಳಿಗೆ ತೆರೆ ಎಳೆದರು.
ಸಂಪುಟ ವಿಸ್ತರಣೆ : ಬಸವರಾಜ ಹೊರಟ್ಟಿ ಅಸಮಾಧಾನ!
"ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಆರಂಭಿಸಿದ ಆರ್.ಟಿ.ಇ ಯೋಜನೆಯು ದುರ್ಬಳಕೆಯಾಗುತ್ತಿದೆ. ಈ ಯೋಜನೆಯಡಿ ಆಂಗ್ಲ ಮಾಧ್ಯಮಕ್ಕೆ ನೀಡುವ ನೋಂದಣಿಯನ್ನು ರದ್ದು ಮಾಡಬೇಕು. ಮೊದಲು ಕನ್ನಡ ಮಾಧ್ಯಮ, ನಂತರ ಅನುದಾನಿತ ಶಾಲೆಯಲ್ಲಿ ಸೀಟು ಸಿಗದೇ ಇದ್ದರೆ ಮಾತ್ರ ಅನುದಾನ ರಹಿತ ಶಾಲೆಯಲ್ಲಿ ಅವಕಾಶ ನೀಡಬೇಕು. ಅಲ್ಲದೆ ಯೋಜನೆಗೆ 684 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಇದರ ದುರುಪಯೋಗ ತಡೆಯಲು ಕಡಿವಾಣ ಕ್ರಮಗಳನ್ನು ಕೈಗೊಳ್ಳಬೇಕು," ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
"ತಾವು ಸಚಿವರಾಗಿದ್ದ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿ ಹಲವು ವರದಿಗಳನ್ನು ತಯಾರಿಸಿದ್ದೆವು. ಹಳ್ಳಿಗಾಡಿನ ಬಾಲಕಿಯರು ಶಿಕ್ಷಣ ಉತ್ತೇಜನಕ್ಕಾಗಿ 1649 ಪ್ರೌಢಶಾಲೆ, 200 ಪದವಿ ಕಾಲೇಜನ್ನು ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಂಜೂರುಗೊಳಿಸಿದ್ದರು. ಅಲ್ಲದೆ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ 500 ಕೋಟಿ ಬಿಡುಗಡೆ, 48 ಸಾವಿರ ಶಿಕ್ಷಕರ ನೇಮಕ, ಬಿಸಿಯೂಟ, ಬೈಸಿಕಲ್ ವಿತರಣೆ , ಶಿಕ್ಷಕರ ವರ್ಗಾವಣೆ ನೀತಿಯನ್ನು ಹೊರಡಿಸಿದ್ದೆವು," ಎಂದು ಸ್ಮರಿಸಿದರು.
"ಕಳಪೆ ಮಟ್ಟದ ಸೈಕಲ್ ನೀಡುವ ಮೂಲಕ ಶಿಕ್ಷಣ ಇಲಾಖೆಯಲ್ಲಿಯೇ ಅಕ್ರಮವೆಸಗುತ್ತಿದ್ದಾರೆ. ಶಿಕ್ಷಣ ಸಚಿವ ಮಾಜಿ ತನ್ವೀರ್ ಸೇಠ್ ಅವರು ಶೈಕ್ಷಣಿಕ ಕ್ಷೇತ್ರ ಸುಧಾರಿಸಲು ಯಾವುದೇ ಕ್ರಮ ವಹಿಸದೇ ಇರುವುದು ದುರಂತ," ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.