ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದ ಮಂಡ್ಯ ಜೆಡಿಎಸ್ ಶಾಸಕ!
ಮೈಸೂರು: ಸಿಕ್ಕಿದ ಖಾತೆ ಬೇಡವೆಂದು ತಗಾದೆ ತೆಗೆಯುತ್ತಿರುವ ಶಾಸಕರಾದ ಜಿ.ಟಿ.ದೇವೇಗೌಡ ಮತ್ತು ಪುಟ್ಟರಾಜು ಅವರ ನಡುವೆ ಇದೀಗ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಅವರು, 'ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ' ಎಂದು ಹೇಳುವ ಮೂಲಕ ಖಾತೆ ಕ್ಯಾತೆಗೆ ಬೆಂಕಿ ಹಚ್ಚಿದ್ದಾರೆ.
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿರುವ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಅವರ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರಕಾರದ ನೂತನ ಸಚಿವರ ಕಾಲಾವಧಿ ಎರಡರಿಂದ ಮೂರು ವರ್ಷ. ನಾನು, ಪುಟ್ಟರಾಜು ಹಾಗೂ ಡಿ.ಸಿ.ತಮ್ಮಣ್ಣ ಮೂವರು ಮೂರು ಬಾರಿ ಶಾಸಕರಾಗಿದ್ದೇವೆ ಎಂದರು.
ಖಾತೆ ಬದಲಾವಣೆಗೆ ಜಿಟಿಡಿ ಕ್ಯಾತೆ! ಸರಿಯೇ? ತಪ್ಪೇ?
ಯಾರೂ 5 ವರ್ಷ ಸಚಿವರಾಗಿ ಇರುವುದಿಲ್ಲ. ಎರಡು ಅಥವಾ ಮೂರು ವರ್ಷಕ್ಕೆ ಬದಲಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎರಡನೇ ಅವಧಿಯಲ್ಲಿ ಸಚಿವನಾಗುವ ಬಯಕೆ ಇಟ್ಟುಕೊಂಡಿದ್ದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಶ್ರೀರಂಗಪಟ್ಟಣದ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಜಿಲ್ಲೆಯ 7 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ನಾನೂ ನಿಗಮ- ಮಂಡಳಿಗಳ ಆಕಾಂಕ್ಷಿತರಾಗಿದ್ದೇವೆ ಎಂದು ಹೇಳುವ ಮೂಲಕ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವುದನ್ನು ಬಹಿರಂಗಪಡಿಸಿದ್ದಾರೆ.
ಇನ್ನು ಮುಂದುವರಿಸಿ, ಸಣ್ಣ ನೀರಾವರಿ ಖಾತೆ ಮಂಡ್ಯ ಜಿಲ್ಲೆಗೆ ಅತಿ ಅವಶ್ಯಕವಾಗಿ ಬೇಕಾಗಿರುವ ಖಾತೆ. ಇದು ಜಿಲ್ಲೆಗೆ ವರದಾನವಾಗಿ ಸಿಕ್ಕಿದೆ. ಸಣ್ಣ ನೀರಾವರಿ ಖಾತೆಯಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಬಹುದು, ಕೆರೆ-ಕಟ್ಟೆಗಳನ್ನು ತುಂಬಿಸುವುದು, ಕಾಲುವೆಗಳ ಅಭಿವೃದ್ಧಿ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಹೀಗಾಗಿ ಸಿ.ಎಸ್.ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.